ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿ. ಕಾಳೇನಹಳ್ಳಿಯಲ್ಲಿ ಆನಂದ್ ಎಂಬ ಯುವಕನನ್ನು ಚಾಕು ಇರಿದು ಕೊಲೆಮಾಡಿದ್ದ 4 ಆರೋಪಿಗಳನ್ನು ಬಂಧಿಸುವಲ್ಲಿ ಚನ್ನರಾಯಪಟ್ಟಣ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 19 ರಂದು ಡಿ. ಕಾಳೇನಹಳ್ಳಿಯಲ್ಲಿ ಪುನೀತ್ ಹಾಗೂ ಆತನ ಮೂವರು ಸ್ನೇಹಿತರು ಸೇರಿಕೊಂಡು ಆನಂದ್ ನನ್ನು ಕೊಲೆ ಮಾಡಿದ್ದರು. ಈ ಸಂಬಂಧ ಆನಂದ್ ತಾಯಿ ಶಶಿಕಲಾ ದೂರು ನೀಡಿದ್ದರು. ಇದೀಗ ಆರೋಪಿಗಳಾದ ಪುನೀತ್(23) ಸ್ನೇಹಿತರಾದ ಕಾರ್ತಿಕ್( 27), ವಿಜಯ್(26), ಗಗನ್ ಗೌಡ( 25) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಸುಮಾರು ಒಂದೂವರೆ ತಿಂಗಳ ಹಿಂದೆ ಡಿ.ಕಾಳೇನಹಳ್ಳಿ ಗ್ರಾಮದ ಪುನೀತ್ ಹಾಗೂ ಯಾಚೇನಹಳ್ಳಿ ಗ್ರಾಮದ ಆನಂದ್ ನಡುವೆ ಗಲಾಟೆಯಾಗಿತ್ತು. ನಂತರ ಪುನೀತ್ ನ ಮನೆಗೆ ತೆರಳಿದ ಆನಂದ್ ಆತನ ತಂದೆ-ತಾಯಿಯವರ ಮುಂದೆಯೇ ನಿಮ್ಮ ಮಗ ಪುನೀತ್ ನನ್ನು ಇದೇ ಚಾಕುವಿನಿಂದ ಮುಗಿಸುವುದಾಗಿ ಎಚ್ಚರಿಕೆ ನೀಡಿ ತೆರಳಿದ್ದ. ಇದರಿಂದ ಕೋಪಗೊಂಡ ಪುನೀತ್ ತನ್ನ ಸ್ನೇಹಿತರೊಂದಿಗೆ ಕೊಲೆಗೆ ಸಂಚು ರೂಪಿಸಿ ಜನವರಿ 19 ರಂದು ಆನಂದ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚನ್ನರಾಯಪಟ್ಟಣ ವೃತ್ತ ನಿರೀಕ್ಷಕ ಜಿ.ಕೆ.ಸುಬ್ರಹ್ಮಣ್ಯ, ಪಿಎಸ್ಐ ವಿನೋದ್ ರಾಜ್, ಸಿಬ್ಬಂದಿಗಳಾದ ಜವರೇಗೌಡ, ಸುರೇಶ, ರವೀಶ್, ಮಹೇಶ್, ಬೀರಲಿಂಗ, ನಾಗೇಂದ್ರ ಹಾಗೂ ತಾಂತ್ರಿಕ ಸಹಾಯಕರಾದ ಪಿಎಸ್ಐ ಅಶ್ವಿನಿ ನಾಯಕ್, ಪೀರ್ ಖಾನ್, ಚಾಲಕರಾದ ಪರಮೇಶ್, ಹೇಮಚಂದ್ರರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಎಸ್ಪಿ ತಂಡಕ್ಕೆ ಎಲ್ಲಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.