ಚಿಕ್ಕಮಗಳೂರು: ಹೇಗೆ ರಾಮ ಮಂದಿರದ ಕಲ್ಪನೆ ಇತ್ತೋ ಅದು ಇಂದು ಸಕಾರಗೊಂಡಿದೆ. ಅದೇ ರೀತಿ ನಮ್ಮ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಾಣವಾಗುತ್ತೆ. ನಮ್ಮ ಸರ್ಕಾರದ ಅವಧಿಯಲ್ಲೇ ಈ ಸಮಸ್ಯೆ ಬಗೆಹರಿಯುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ದತ್ತ ಜಯಂತಿಯ ಮೊದಲ ದಿನವಾದ ಇಂದು ಅನುಸೂಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಮಧೇನು ಗಣಪತಿ ದೇವಾಲಯದವರೆಗೂ ಮೆರವಣಿಗೆ ಬಡಡೆಸಲಾಯಿತು. ಬಳಿಕ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆ ಮಾತನಾಡಿದರು.
ಇದೊಂದು ವಿಶೇಷ ಪೀಠ. ಜಗತ್ತಿನಾದ್ಯಂತ ದತ್ತ ಭಕ್ತರಿದ್ದಾರೆ. ಆದರೆ ದತ್ತನ ಪಾದುಕೆ ಇರೋದು ನಮ್ಮ ಚಿಕ್ಕಮಗಳೂರಲ್ಲಿ. ದತ್ತ ಪೀಠ ನಮ್ಮದು, ಇದು ನಮ್ಮದಾಗಬೇಕು. ಇದು ನಮ್ಮ ಸಂಕಲ್ಪ. ನ್ಯಾಯಾಲಯದಲ್ಲಿ ಹಲವು ರೀತಿಯ ತೀರ್ಮಾನಗಳು ಬಂದಿವೆ. ನಮಗೆ ವಿಶ್ವಾಸವಿದೆ ಮುಂದಿನ ದಿನಗಳಲ್ಲಿ ದತ್ತಪೀಠ ನಮ್ಮದಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಕೊರೊನಾದಂತ ಮಹಾಮಾರಿ ದೂರವಾಗಬೇಕು, ಈ ದೇಶದಲ್ಲಿ ಸುಭೀಕ್ಷೆ ನೆಲೆಸಬೇಕು. ಅದಕ್ಕಾಗಿ ದತ್ತಾತ್ರೇಯನ ಬಳಿ ಪ್ರಾರ್ಥನೆ ಸಲ್ಲಿಸುತ್ತೇವೆ. ದತ್ತಪೀಠವನ್ನ ಹಿಂದೂಗಳ ಪೀಠವೆಂದು ಘೋಷಿಸಲು ಕಾನೂನಿನ ಅಡೆತಡೆಯಿದೆ. ನಮ್ಮ ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನಿನ ಸಲಹೆಯಂತೆ ರಾಜ್ಯ ಸರ್ಕಾರ ನಡೆದುಕೊಳ್ಳೂತ್ತೆ. ನಮ್ಮ ಅವಧಿಯಲ್ಲೇ ದತ್ತಪೀಠದ ಸಮಸ್ಯೆ ಬಗೆಹರಿಯುತ್ತೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಎಲ್ಲ ಸಮಸ್ಯೆ ಹಾಗೂ ನ್ಯಾಯಾಲಯದಲ್ಲಿರುವ ಎಲ್ಲ ಅಡೆತಡೆಗಳನ್ನು ದತ್ತ ದೂರಗೊಳಿಸುತ್ತಾನೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತೆ. ಬಾಬಾಬುಡನ್ಗೆ ಯಾವ ಜಾಗ ಮೀಸಲಿಟ್ಟಿದ್ಯೋ ಆ ಜಾಗದಲ್ಲಿ ಅವರಿಗೆ ಪೂಜೆಯಾಗುವಂತಹದ್ದು ಬರುವ ದಿನಗಳಲ್ಲಿ ಆಗುತ್ತೆ ಎಂದರು.
ದತ್ತ ಪೀಠದಲ್ಲಿ ದತ್ತ ಜಯಂತಿ ಹಾಗೂ ಅನುಸೂಯ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ವರ್ಷ ಕೋವಿಡ್ ಇರುವ ಕಾರಣ ಕೇವಲ ಪ್ರಮುಖರು ಮಾತ್ರ ಸಂಕೀರ್ತನಾ ಯಾತ್ರೆ ಕೈಗೊಂಡು ದತ್ತಪೀಠಕ್ಕೆ ಹೋಗಬೇಕೆಂದು ತೀರ್ಮಾನವಾಗಿದೆ. ಅನುಸೂಯ ಜಯಂತಿ ಅಂಗವಾಗಿ ರಾಜ್ಯದ ಪ್ರಮುಖ ಮಹಿಳೆಯರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಅನುಸೂಯ ಜಯಂತಿ ಹಾಗೂ ದತ್ತನ ದರ್ಶನ ಮಾಡುತ್ತೇವೆ ಎಂದರು.
ಮೆರವಣಿಗೆ ಹಾಗೂ ದತ್ತಪೀಠದಲ್ಲಿ ನಡೆದ ಹೋಮ-ಹವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ನಟಿ ತಾರಾ ಹಾಗೂ ಮಾಳವಿಕ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.