ಬೆಂಗಳೂರು: ಸಿದ್ದರಾಮಯ್ಯನವರನ್ನು ಸಿಎಂ ಮಾಡಿದ್ದೇ ಕುಮಾರಸ್ವಾಮಿ, ಅಂದು ಯಡಿಯೂರಪ್ಪನವರು ಪ್ರತ್ಯೇಕ ಪಕ್ಷ ನಿರ್ಮಾಣ ಮಾಡುವ ವಾತಾವರಣ ನಿರ್ಮಾಣ ಮಾಡಿದ್ದೇ ನಾನು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಇಂದು ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಯಾವ್ಯಾವ ಜೆಡಿಎಸ್ ನಾಯಕರ ಮನೆಗೆ ಹೋಗಿ ಕಾಲು ಹಿಡೀತಿದ್ದಾರೆ ಎಂದು ಗೊತ್ತು. ಪಕ್ಷ ಅಷ್ಟು ಸದೃಢವಾಗಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ನಮ್ಮ ಪಕ್ಷದಲ್ಲಿ ಆತಂಕವೂ ಇಲ್ಲ. ಕೆಲವು ನಾಯಕರು ವಿಶೇಷವಾಗಿ ಸಿದ್ದರಾಮಯ್ಯನವರು ನನ್ನ ಭಜನೆ ಮಾಡೋದು ಬೇಡ. ನೀವು ನನ್ನ ಭಜನೆ ಮಾಡಿದಷ್ಟು ನನ್ನ ಶಕ್ತಿ ಹೆಚ್ಚುತ್ತೆ. ಅದೆಂತದೋ ಭಾಗ್ಯಗಳಿದವಲ್ಲ ಅದನ್ನ ಸುವರ್ಣಾಕ್ಷರದಲ್ಲಿ ಬರೆದಿಡಬೇಕು ಅಂತ ಭಾಷಣ ಮಾಡಿದಿರಿ. ಅದಕ್ಕೆ ಜನ ನಿಮ್ಮನ್ನ 78ಕ್ಕೆ ತಂದಿದ್ದು. ನೀವು ನನ್ನ ಬಗ್ಗೆ ಮಾತನಾಡಬೇಡಿ, ನಾನು ನಿಮ್ಮ ಬಗ್ಗೆ ಮಾತನಾಡಲ್ಲ. ನೀವು ಮಾತನಾಡಿದರೆ ನಾನು ಪ್ರತಿಕ್ರಿಯೆ ಕೊಡಬೇಕಾಗುತ್ತೆ. ಪ್ರಚಾರ ಸಾಕು ನನಗೂ ಈಗ ಪ್ರಚಾರ ಸಿಕ್ಕಿದೆ. ನಿಮಗೂ ಪ್ರಚಾರ ಸಿಕ್ಕಿದೆ. ಜೆಡಿಎಸ್ ವಿಲೀನದ ಪ್ರೆಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈ ಗಿರಾಕಿ ಶಾಸಕರ ಕೈಗೆ ಸಿಗದೆ ತಾಜ್ ವೆಸ್ಟ್ ಎಂಡ್ ನಲ್ಲಿ ಸಮಯ ಕಳೆದರು ಎಂದು ಏಕ ವಚನದಲ್ಲಿ ಮಾತನಾಡಿದ್ದಾರೆ. ಅವರಿಗಿಂತ ಹೆಚ್ಚು ಏಕ ವಚನದಲ್ಲಿ ಮಾತನಾಡಬಲ್ಲೆ. ನಿಮ್ಮ ನಾಲಗೆ ನಿಮ್ಮ ಹಿಡಿತದಲ್ಲಿ ಇರಲಿ. ಹಾಗಾದರೆ ಪಶ್ಚಿಮ ಬಂಗಾಳದಲ್ಲಿ 7 ಶಾಸಕರು ಸರಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಟೋಪಿ ಹಾಕಿ ಹೋಗಿದ್ದಾರೆ ಅದಕ್ಕೆ ಏನು ಅಂತಾರೆ. ನಾನು ನನ್ನದೇಯಾದ ಕಾರ್ಯಕ್ರಮ ಕೊಡಲು ಮುಂದಾಗಿದ್ದೆ ಅದಕ್ಕೆ ನೀವು ಅಡ್ಡಿ ಮಾಡಿದಿರಿ. ನಾನು ಗ್ರಾಮ ವಾಸ್ತವ್ಯದಂತಹ ಕಾರ್ಯಕ್ರಮ ಶುರು ಮಾಡಿದ್ದೆ. ಆದರೆ ಸಿದ್ದರಾಮಯ್ಯ ನಂತಹವರಿಗೆ ಸಹಿಸಿಕೊಳ್ಳಲು ಆಗಲಿಲ್ಲ. ಎಲ್ಲ ಕಾಂಗ್ರೆಸ್ ನಾಯಕರನ್ನು ನಾನು ದೂರಲ್ಲ ಎಂದರು.
ಸಿದ್ದರಾಮಯ್ಯ ನಮ್ಮನ್ನ ಬಿ ಟೀಮ್ ಎಂದು ಹೇಳಿಯೇ ಹೊಟ್ಟೆ ಪಾಡು ಮಾಡಬೇಕಿದೆ. ಅವರದ್ದು ಸ್ವಂತ ದುಡಿಮೆ ಇಲ್ಲ. ವಿಷಯಾಧಾರಿತವಾಗಿ ಸರ್ಕಾರಕ್ಕೆ ಬೆಂಬಲ ಇದೆ. ಯಾವುದೇ ಸರ್ಕಾರ ಇದ್ದರೂ ಹೀಗೆ ಮಾಡುತ್ತಿದ್ದೆವು. ಜನರಿಗೆ ಮಾರಕವಾಗುವಂತಹ ವಿಷಯಗಳಿಗೆ ಬೆಂಬಲ ಇಲ್ಲ. ನಾನು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದು, ಅಭಿವೃದ್ಧಿ ವಿಚಾರ ಸಂಬಂಧ ಅಷ್ಟೇ, ಅದನ್ನು ಬಿಟ್ಟರೆ ರಾಜಕೀಯ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಜೆಡಿಎಸ್ ಮುಗಿದೇ ಹೋಯ್ತು ಅನ್ನೋದನ್ನು ಬಿಂಬಿಸುವ ಭಾವನೆ ಒಂದು ಕಡೆ ಮತ್ತೆ ಜೆಡಿಎಸ್ ಸುತ್ತಲೆ ರಾಜಕೀಯ ವಿದ್ಯಾಮಾನ ಸುತ್ತುತ್ತಿರುವುದು ಇನ್ನೊಂದು ಕಡೆ. ಮೈಸೂರಿನಲ್ಲಿ ಇನ್ನೊಬ್ಬರು ಸರ್ಕಾರ ಹೋಗುತ್ತೆ ಅಂತ ಗೊತ್ತಿದ್ದೇ ಅಮೇರಿಕಾಕ್ಕೆ ಹೋದರು ಅಂದಿದ್ದಾರೆ. ಸರ್ಕಾರ ಇಟ್ಟುಕೊಂಡು ಏನು ಕಡಿತಿದ್ರಿ. ನಿಮ್ಮಗಳ ಆರ್ಥಿಕ ಅಭಿವೃದ್ಧಿಗೆ ಸರ್ಕಾರ ಇರಬೇಕಿತ್ತಾ? ನಾನು ಯಾವುದೇ ಗುತ್ತಿಗೆದಾರರಿಗೆ ಕಮೀಷನ್ ಕೇಳಿಲ್ಲ. 3 ತಿಂಗಳಿಗೆ ಒಮ್ಮೆ ಬಿಲ್ ಆಗ್ತಿತ್ತು. ಅಡ್ಡ ಮಾರ್ಗದಲ್ಲಿ ದುಡ್ಡು ಮಾಡಿದ್ದರೆ ನಾನು ಶಾಸಕರನ್ನು ಉಳಿಸಿಕೊಳ್ಳುತ್ತಿದ್ದೆ ಎಂದರು.
ನಮ್ಮ ಹಳೆ ನಾಯಕರು ಸರ್ಕಾರ ಹೋಗಲು ನಾನು, ಸಿದ್ದರಾಮಯ್ಯ ಕಾರಣ ಎಂದಿದ್ದಾರೆ. ಅವರಿಗೆ ನಾನು ಕೇಳೋದು ಇಷ್ಟೇ ನನ್ನ ಬಗ್ಗೆ ಮಾತಾಡಬೇಡಿ. ಪಾಪ ಅವರ ರಾಜಕೀಯ ಅಸ್ಥಿತ್ವಕ್ಕಾಗಿ ಏನೋ ಮಾಡುತ್ತಿದ್ದಾರೆ ಎಂದು ಹೆಸರು ಹೇಳದೆ ಜಿ.ಟಿ.ದೇವೇಗೌಡರ ವಿರುದ್ಧ ಎಚ್ಡಿಕೆ ವಾಗ್ದಾಳಿ ನಡೆಸಿದರು. ಕೊರೊನಾ ಕಾರಣ ಪಕ್ಷ ಸಂಘಟನೆಗೆ ಮುಂದಾಗಲಿಲ್ಲ. ಅಷ್ಟು ಸುಲಭಕ್ಕೆ ಜೆಡಿಎಸ್ ಹಾಗೂ ಕುಮಾರಸ್ವಾಮಿ ಕಣ್ಮರೆ ಆಗಲ್ಲ ಎಂದರು.
ಗುಬ್ಬಿ ಶ್ರೀನಿವಾಸ್ ದೊಡ್ಡವರಿದ್ದಾರೆ ಅವರ ಬಗ್ಗೆ ಮಾತನಾಡಲ್ಲ. ಜೆಡಿಎಸ್ಗೆ ಇದೇ ಹುಟ್ಟು ಶಾಪ, ಜೆಡಿಎಸ್ನಿಂದ ಬೆಳೆಯುತ್ತಾರೆ ನಂತರ ಬೈಯ್ಯುತ್ತಾರೆ. ಇವರಿಂದ ಪಕ್ಷ ಉಳಿದಿಲ್ಲ ಕಾರ್ಯಕರ್ತರಿಂದ ಉಳಿದಿದೆ. ಸೋಲು ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ. ದೇವೇಗೌಡರ ಚುನಾವಣೆ ಹೇಗೆ ಮಾಡಿದರು ಅನ್ನೋದು ಗೊತ್ತಿದೆ. ಅವರ ಒಳ ಒಪ್ಪಂದದ ಮಾತು ತುರುವೆಕೆರೆ ಕ್ಷೇತ್ರದ ವಿಚಾರದಲ್ಲಿ ಹೇಳಿದ್ದಾರೆ ಅನ್ನಿಸುತ್ತೆ. ತುರುವೆಕೆರೆಯಲ್ಲಿ ಕೃಷ್ಣಪ್ಪ ಸೋಲಲು ಗುಬ್ಬಿ ಶ್ರೀನಿವಾಸ್ ಕಾರಣ. 1 ವರ್ಷದಿಂದ ಅವರು ನಮ್ಮ ಜೊತೆ ಇಲ್ಲ. ಯಾರ ಜೊತೆ ಇದಾರೆ ಗೊತ್ತು, ಹೋಗೋರು ಹೋಗಲಿ ಎಂದು ಶಾಸಕ ಶ್ರೀನಿವಾಸ್ಗೆ ಟಾಂಗ್ ನೀಡಿದರು.
ಜೆಡಿಎಸ್ ನಿಂದ ಹೊರ ಹಾಕುವಂತ ವಾತಾವರಣ ನಿರ್ಮಾಣ ಮಾಡಿ ಎಂದು ಅವರಿಗೆ ಸಲಹೆ ಕೊಟ್ಟವರು ಹೇಳಿದ್ದಾರೆ, ಅದಕ್ಕೆ ಹೀಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನವರು ಹಳೆ ಸ್ನೇಹಿತರಂತೆ ಅದಕ್ಕೆ ಅವರ ಮನೆಯಲ್ಲಿ ಸುದ್ದಿಗೋಷ್ಠಿ ಮಾಡಿದರಂತೆ. ಒಳ ಒಪ್ಪಂದ ಆಗಿದ್ದು ಶ್ರೀನಿವಾಸ್ ಮಸಾಲೆ ಜಯರಾಮ್ ಗೆ. ಈ ಪಕ್ಷಕ್ಕೆ ಯಾರ ಅನಿವಾರ್ಯತೆಯೂ ಇಲ್ಲ. ಇಂತಹವರು ಬರುತ್ತಾರೆ ಹೋಗುತ್ತಾರೆ. ಹಳೆ ಬಸ್ ಇಳಿತಾರೆ, ಹೊಸ ಬಸ್ ಹತ್ತುತ್ತಾರೆ ರಾಜಕಾರಣದಲ್ಲಿ ಇದು ಮಾಮೂಲಿ ಎಂದರು.
ಒಳ ಒಪ್ಪಂದದ ಪ್ರಿನ್ಸಿಪಾಲ್ ಕುಮಾರಸ್ವಾಮಿ ಅಂತ ರಾಜಣ್ಣ ಹೇಳಿದ್ದಾರೆ. ಒಳ್ಳೆ ಸರ್ಟಿಫಿಕೆಟ್ ಕೊಟ್ಟಿದ್ದಾರೆ, ಅವರಿಗಿಂತ ಪ್ರಿನ್ಸಿಪಾಲ್ ಬೇಕಾ? ಡಿಸಿಸಿ, ಅಪೆಕ್ಸ್ ಬ್ಯಾಂಕ್ ಗಳ ಹಗರಣಗಳ ಬಗ್ಗೇನೂ ಗೊತ್ತಿದೆ. ಖಾಯಿಲೆ ಬಂದವರಿಗೆ ಔಷಧಿ ಕೊಡಬಹುದು ಕಾಯಿಲೆ ಬಂದಂತೆ ನಾಟಕವಾಡುವವರಿಗೆ ಔಷಧಿ ಕೊಡೋಕೆ ಆಗಲ್ಲ. ಹಾಗೆ ನಮ್ಮವರು ಕೆಲವರು ಮಾತನಾಡುತ್ತಿದ್ದಾರೆ. ಯಾರ್ಯಾರು ಯಾರ ಸಂಪರ್ಕದಲ್ಲಿ ಇದ್ದಾರೆ ಎಲ್ಲ ಗೊತ್ತಿದೆ ಎಂದರು.