– 800 ಕೆಜಿ ಕಸ ತೆಗೆದು ಸಾಹಸ
– ನೆಟ್ಟಿಗರಿಂದ ಭಾರೀ ಮೆಚ್ಚುಗೆ
ಉಡುಪಿ: ಹೊಸದಾಗಿ ವಿವಾಹವಾದ ಜೋಡಿ ಹನಿಮೂನ್ಗೆ ವಿದೇಶಕ್ಕೆ ಅಥವಾ ತಮಗಿಷ್ಟವಾದ ಸ್ಥಳಕ್ಕೆ ಹೋಗಲು ಇಷ್ಟಪಡುತ್ತಾರೆ. ಆದರೆ ಈ ನವದಂಪತಿ ಬೀಚ್ ಸ್ವಚ್ಛಗೊಳಿಸುವ ಮೂಲಕ ಗಮನಸೆಳೆದಿದ್ದಾರೆ.
ಉಡುಪಿಯ ಬೈಂದೂರು ಮೂಲದ ಅನುದೀಪ್ ಹೆಗಡೆ ಹಾಗೂ ಮಿನುಶಾ ಕಾಂಚನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಬೀಚ್ ಸ್ವಚ್ಛಗೊಳಿಸುವ ಮೂಲಕ ಗಮನಸೆಳೆದಿದ್ದು, ಈ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಪೋಸ್ಟ್ ಸಖತ್ ವೈರಲ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
View this post on Instagram
ಬೈಂದೂರಿನ ಅನುದೀಪ್ ಹೆಗಡೆ ಡಿಜಿಟಲ್ ಮಾರ್ಕೆಟರ್ ಆಗಿ ಕೆಲಸ ಮಾಡುತ್ತಿದ್ದು, ಪ್ರಕೃತಿ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಿ ಹನಿಮೂನ್ಗೆ ಹೋಗುವ ಬದಲು ಬೀಚ್ ಸ್ವಚ್ಛಗೊಳಿಸಿದ್ದಾರೆ. ವಿವಾಹದ ಬಳಿಕ ಜೋಡಿ ರಾಜ್ಯದಲ್ಲೇ ಕಾಲ ಕಳೆದಿದ್ದು, ಇದೇ ಸಂದರ್ಭದಲ್ಲಿ ಸೋಮೇಶ್ವರ ಬೀಚ್ಗೆ ತೆರಳಿದ್ದಾರೆ.
ಈ ವೇಳೆ ಬೀಚ್ ಸಂಪೂರ್ಣವಾಗಿ ಕಸ ಹಾಕುವ ಕೇಂದ್ರವಾಗಿ ಮಾರ್ಪಟ್ಟಿದ್ದನ್ನು ಕಂಡು ಅನುದೀಪ್ ಹಾಗೂ ಮಿನುಶಾ ದಿಗ್ಭ್ರಮೆಗೊಂಡಿದ್ದಾರೆ. ಬೀಚ್ ಸಂಪೂರ್ಣವಾಗಿ ಕಸ, ಪ್ಲಾಸ್ಟಿಕ್ನಿಂದ ಕೂಡಿರುವುದನ್ನು ಕಂಡು ಬೇಸರಗೊಂಡಿದ್ದಾರೆ. ಬಳಿಕ ಜೋಡಿ ಹನಿಮೂನ್ಗೆ ತೆರಳುವುದನ್ನು ಬಿಟ್ಟು ಬೀಚ್ ಸ್ವಚ್ಛಗೊಳಿಸಲು ನಿರ್ಧರಿಸಿದೆ.
View this post on Instagram
ಅನುದೀಪ್ ಸ್ವಚ್ಛಗೊಳಿಸುವ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಹಾಗೂ ಫೋಟೋಗಳಲ್ಲಿ ಸೆರೆ ಹಿಡಿದಿದ್ದು, ಇವುಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. 800 ಕೆ.ಜಿ.ಗೂ ಅಧಿಕ ಕಸವನ್ನು ಬೀಚ್ನಿಂದ ತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಜನರ ಕನಸು ಹಾಗೂ ಪೋಸ್ಟ್ ವೆಡ್ಡಿಂಗ್ ಚಾಲೆಂಜ್ ಆಗಿ ತೆಗೆದುಕೊಂಡು ಕೆಲಸ ಆರಂಭಿಸಿದ್ದು, ಅವಿರತವಾಗಿ ಶ್ರಮಿಸಿ ಬೈಂದೂರಿನ ಸೋಮೇಶ್ವರ ಬೀಚ್ ಸ್ವಚ್ಛಗೊಳಿಸಿದ್ದಾರೆ. 10 ದಿನಗಳ ಬಳಿಕ ಇಂದು ಬೃಹತ್ ಆಂದೋಲನವಾಗಿ ಮಾರ್ಪಟ್ಟಿದೆ. ಸುಮಾರು 800 ಕೆ.ಜಿ. ಕಸವನ್ನು ಸ್ವಚ್ಛಗೊಳಿಸಲಾಗಿದೆ.
View this post on Instagram
ಇದೊಂದು ತುಂಬಾ ವಿನಮ್ರ ಅನುಭವ ಹಾಗೂ ಮಾನವೀಯತೆಯ ಬಗೆಗಿನ ನನ್ನ ನಂಬಿಕೆಯನ್ನು ಪುನಃಸ್ಥಾಪಿಸುವಂತಾಯಿತು. ನಾವೆಲ್ಲರೂ ಒಂದೇ ವಿಷಯವನ್ನು ಬಯಸುತ್ತೇವೆ. ಇದರಿಂದ ಯಾರಾದರೂ ಒಬ್ಬರು ಪ್ರೇರಣೆಗೊಂಡು ಈ ಕುರಿತು ಅರಿವು ಮೂಡಿಸಬೇಕಿದೆ. ಎಲ್ಲರೂ ಸೇರಿ ಮಾಡಿದರೆ ಹೆಚ್ಚು ವ್ಯತ್ಯಾಸ ಕಾಣಬಹುದಾಗಿದೆ ಎಂದು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅನುದೀಪ್ ಬರೆದುಕೊಂಡಿದ್ದಾರೆ.
View this post on Instagram
ಅನುದೀಪ್ ಅವರ ಇನ್ಸ್ಟಾ ಪೋಸ್ಟ್ ಕಂಡು ನೆಟ್ಟಿಗರು ಫಿದಾ ಆಗಿದ್ದು, ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಸಖತ್ ವೈರಲ್ ಆಗಿದೆ.