– ಶಿವಾನಂದ ವಾಲಿ ವಿಚಾರಣೆ ವೇಳೆ ಮಹತ್ವದ ಮಾಹಿತಿ ಲಭ್ಯ
ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ಹಾಗೂ ಅವರ ಕುಟುಂಬಸ್ಥರಿಗೆ ಮೋಸ ಮಾಡಿ ಆಸ್ತಿ ಮತ್ತು ಹಣ ಲಪಟಾಯಿಸಿದ್ದ ಆರೋಪದ ಮೇಲೆ ಬಂಧಿತನಾಗಿರುವ ಶಿವಾನಂದ ವಾಲಿಯನ್ನು ಅ.12ರ ವರೆಗೆ ಬೆಳಗಾವಿ ಜೆಎಂಎಫ್ ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದೆ.
ಪ್ರಕರಣದಲ್ಲಿ ಆರೋಪಿ ಶಿವಾನಂದ ವಾಲಿಯನ್ನು ಹೆಚ್ಚಿನ ವಿತರಣೆ ನಡೆಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ಮಾಳಮಾರುತಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅ.12ರವರೆಗೂ ಪೊಲೀಸರ ವಶಕ್ಕೆ ನೀಡಿದೆ ಎಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸುಖಾಂತ್ಯದತ್ತ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ
ಮಾಳಮಾರುತಿ ಪೊಲೀಸರು ಭಾನುವಾರ ತಡರಾತ್ರಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಸದ್ಯ ಆರೋಪಿ ಶಿವಾನಂದ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿ ಲಭ್ಯವವಾಗಿದೆ ಎನ್ನಲಾಗಿದೆ. ಕೆ.ಕಲ್ಯಾಣ್ ಪತ್ನಿ ಅಶ್ವಿನಿ, ಅತ್ತೆ, ಮಾವ ಹೆಸರಿನಲ್ಲಿದ್ದ ಅಪಾರ ಆಸ್ತಿ ವರ್ಗಾವಣೆ ಮಾಡಿಕೊಂಡಿದ್ದ ಶಿವಾನಂದ ವಾಲಿ ವರ್ಗಾವಣೆ ಮಾಡಿಸಿಕೊಂಡಿದ್ದ. ಸುಮಾರು 4 ಕೋಟಿ ರೂ. ನಷ್ಟು ಆಸ್ತಿ ಹಾಗೂ ಕೆ.ಕಲ್ಯಾಣ್ ಪತ್ನಿ ಅಶ್ವಿನಿ, ಅತ್ತೆ, ಮಾವ ಅಕೌಂಟ್ನಿಂದ 45 ಲಕ್ಷ ಹಣ ತನ್ನ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ವಿವಿಧೆಡೆ ಇದ್ದ 6 ಆಸ್ತಿ ಶಿವಾನಂದ ವಾಲಿ ತನ್ನ ಹೆಸರಿಗೆ ಬರೆಸಿಕೊಂಡಿದ್ದ ಎನ್ನಲಾಗಿದೆ.
ಅಥಣಿ, ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿಯಲ್ಲಿರುವ 6 ಆಸ್ತಿ ಹಾಗೂ ಅಥಣಿ ತಾಲೂಕಿನ ಶಿರಹಟ್ಟಿ ಬಳಿಯ ತೋಟ ತನ್ನ ಹೆಸರಿಗೆ ಬರೆಸಿಕೊಂಡಿದ್ದ ಆರೋಪಿ, ಅಶ್ವಿನಿ ಅವರಿಂದ ಅಪಾರ ಪ್ರಮಾಣದ ಚಿನ್ನಾಭರಣ ಸಹ ಪಡೆದಿದ್ದ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸರಸ, ವಿರಸ, ಸಾಮರಸ್ಯ ಇದ್ದರೆ ಸಂಸಾರ – ಘಟನೆಯ ಬಗ್ಗೆ ಕಲ್ಯಾಣ್ ಸ್ಪಷ್ಟನೆ
ಯಾರು ಈ ಶಿವಾನಂದ ವಾಲಿ?
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಡಗಿ ಗ್ರಾಮದ ನಿವಾಸಿಯಾಗಿರುವ ಶಿವಾನಂದ ವಾಲಿ, ಮಾಟಮಂತ್ರದ ಹೆಸರಿನಲ್ಲಿ ಹಲವರಿಗೆ ವಂಚಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಸೆ.30ರಂದು ಬೆಳಗಾವಿಯ ಮಾಳಮಾರುತಿ ಠಾಣೆಗೆ ಕೆ.ಕಲ್ಯಾಣ್ ಅವರು ದೂರು ನೀಡಿದ್ದರು. ದೂರಿನಲ್ಲಿ ಶಿವಾನಂದ ವಾಲಿ, ಗಂಗಾ ಕುಲಕರ್ಣಿ ವಿರುದ್ಧ ಆರೋಪಿಸಿ ತನ್ನ ಪತ್ನಿ ಅಶ್ವಿನಿ, ಅತ್ತೆ, ಮಾವ ಅಪಹರಣವಾಗಿದೆ ಎಂದು ತಿಳಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿ ಶಿವಾನಂದ ವಾಲಿ ಬಂಧಿಸಿ ಜೈಲಿಗಟ್ಟಿದ್ದರು. ಸದ್ಯ ಕೆ.ಕಲ್ಯಾಣ್ ದೂರಿನ ಮೇರೆಗೆ ಶಿವಾನಂದ ವಾಲಿ ಬಂಧಿಸಿದ್ದ ಪೊಲೀಸರು ಆರೋಪಿಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ.