ಶಿವಮೊಗ್ಗ: ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ, ದೇಶದಲ್ಲಿ ಜನರು ಹುಳಗಳಂತೆ ಸಾಯುತ್ತಿದ್ದಾರೆ. ನಾನು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ದಯಮಾಡಿ ಮಾಸ್ಕ್ ಅನ್ನು ಸರಿಯಾಗಿ ಧರಿಸಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿವಿ ಮಾತು ಹೇಳಿದ್ದಾರೆ.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಎಸ್. ಜ್ಯೋತಿ ಪ್ರಕಾಶ್ ಇಂದು ಅಧಿಕಾರ ಸ್ವೀಕಾರ ಸಮಾರಂಭದ ವೇಳೆ ನೆರೆದಿದ್ದವರ ಮೇಲೆ ಸಚಿವರು ಗದರಿದ್ದಾರೆ. ಇದೇ ರೀತಿ ನೀವು ಮಾಸ್ಕ್ ಸರಿಯಾಗಿ ಹಾಕಿಕೊಳ್ಳದೇ ಇದ್ದರೆ, ನೀವು ಕೊರೊನಾ ರೋಗ ಬರಿಸಿಕೊಳ್ಳುತ್ತೀರಿ. ನಿಮ್ಮ ಪಕ್ಕದಲ್ಲಿ ಇರುವವರಿಗೂ ಬರಿಸುತ್ತೀರಿ. ನೀವು ಗುಂಪಲ್ಲಿ ಸೇರೋದು ಮೋದಿಯವರು ಒಪ್ಪುವುದಿಲ್ಲ ಎಂದರು.
ಮಾಸ್ಕ್ ಸರಿಯಾಗಿ ಧರಿಸಿಲ್ಲವೆಂದರೆ, ನಿಮ್ಮ ಪಕ್ಕದಲ್ಲಿರುವ ನಾಲ್ವರು ಆಸ್ಪತ್ರೆಗೆ ಹೋಗುತ್ತಾರೆ. ಅದರಲ್ಲಿ ಒಬ್ಬರು ಸಾಯುತ್ತಾರೆ. ವಿಧಿಯಿಲ್ಲ ಸಂತೋಷದ ಸಭೆಯಲ್ಲಿ ಸೇರಿಕೊಂಡಿದ್ದಿರಿ. ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಮಾಸ್ಕ್ ಧರಿಸಿ ಜಿಲ್ಲೆಯಲ್ಲಿ, ರಾಜ್ಯದಲ್ಲಿ, ದೇಶದಲ್ಲಿ ಜನರು ಹುಳಗಳಂತೆ ಸಾಯುತ್ತಿದ್ದಾರೆ. ನಾವು ಬಹಳ ವರ್ಷ ಬದುಕಬೇಕು. ನಮ್ಮನ್ನು ನಂಬಿಕೊಂಡ ಕುಟುಂಬ ನೋಡಿಕೊಳ್ಳಬೇಕಿದೆ ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಅವರು, ನಾವುಗಳು ಪತ್ನಿಯ ಮಾತು ಮೀರಿ ಓಡಾಡುತ್ತಿದ್ದೇವೆ. ನಾನು ಕೂಡ ಬೆಂಗಳೂರಿನಿಂದ ಬಂದಿದ್ದೇನೆ ಎಂದರು. ಇದೆ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಎಲ್.ಸಿ. ಆಯನೂರು ಮಂಜುನಾಥ್ ಮತ್ತು ಜ್ಯೋತಿಪ್ರಕಾಶ್ ಅವರಿಗೆ ಹೆಂಡತಿ ಮಾತು ಕೇಳುತ್ತೀರಾ ಅಂತಾ ಪ್ರಶ್ನಿಸಿದರು. ಅದಕ್ಕೆ ನಾನಂತೂ ಕೇಳ್ತಿನಿ ಎಮದು ಆಯನೂರು ಮಂಜುನಾಥ್ ಹೇಳಿದ್ದೆ ತಡ, ನೀವು ನೂರಕ್ಕೆ ನೂರು ಸುಳ್ಳು ಹೇಳುತ್ತಿದ್ದಿರಾ. ನನ್ನನ್ನೂ ಸೇರಿ, ಪ್ರಪಂಚದಲ್ಲಿ ಯಾರೂ ಕೂಡ ಹೆಂಡತಿ ಮಾತು ಕೇಳಲ್ಲ ಎಂದರು. ಈ ವೇಳೆ ಸಭೆಯಲ್ಲಿದ್ದವರು ನಗೆಗಡಲಲ್ಲಿ ತೇಲಿದರು.
ಕಾರ್ಯಕ್ರಮದಲ್ಲಿ, ನೂತನ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ಗೆ ಕಿವಿ ಮಾತು ಹೇಳಿದ ಈಶ್ವರಪ್ಪ, ಸಂಘಟನೆ ಇಲ್ಲದೇ ಇದ್ದರೆ, ನಾನಾಗಲಿ ನೀವಾಗಲಿ, ಯಡಿಯೂರಪ್ಪ ಆಗಲಿ ಈ ಸ್ಥಾನಕ್ಕೆ ಬರುತ್ತಿರಲಿಲ್ಲ. ಜ್ಯೋತಿಪ್ರಕಾಶ್ ಮತ್ತು ತಂಡದವರು, ಸಂಘಟನೆಗೆ ಒತ್ತು ನೀಡಿ ಕೆಲಸ ಮಾಡಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದರು.