– ಬೆಂಗಳೂರಲ್ಲಿ 2 ಸೈಟ್, ಮಡಿಕೇರಿಯಲ್ಲಿ 100 ಎಕರೆ ಕಾಫಿ ತೋಟ
– ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ
– ಮನೆ ತೊರೆಯದ ಬಗ್ಗೆ ಸ್ಥಳೀಯ ನಿವಾಸಿಗಳ ಮಾತು
ಮಡಿಕೇರಿ: ಬ್ರಹ್ಮಗಿರಿ ಬೆಟ್ಟ ಕುಸಿದು ಪ್ರಾಣ ಕಳೆದುಕೊಂಡಿರುವ ನಾರಾಯಣಾಚಾರ್ ಅಪಾರ ಸಂಪತ್ತು ಹೊಂದಿದ್ದಾರೆ. ಹೀಗಾಗಿ ಸಂಪತ್ತನ್ನು ಉಳಿಸಲು ಹೋಗಿ ಮನೆ ಖಾಲಿ ಮಾಡದೇ ಅರ್ಚಕರು ಜೀವ ಕಳೆದುಕೊಂಡಿರಬಹುದು ಎಂಬ ಮಾತು ಕೇಳಿ ಬರುತ್ತಿದೆ. ಇದನ್ನೂ ಓದಿ: ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿ ನಾರಾಯಣಾಚಾರ್ ಮೃತದೇಹ ಪತ್ತೆ
ಮನೆ ಖಾಲಿ ಮಾಡುವಂತೆ ಮಡಿಕೇರಿ ತಹಶೀಲ್ದಾರ್ ಎಚ್ಚರಿಕೆ ಕೊಟ್ಟಿದ್ದರು. ಆದರೆ ಅಪಾರ ಆಸ್ತಿ ಹೊಂದಿದ್ದ ನಾರಾಯಣಚಾರ್ ಅವರು ಮನೆ ತೊರೆದರೆ ಸಂಗ್ರಹಿಸಿದ ಸಂಪತ್ತು ಮತ್ತು ಕೃಷಿ ಉತ್ಪನ್ನಗಳು ಏನಾಗಬಹುದು ಎಂಬ ಚಿಂತೆ ಕಾಡಿರಬಹುದು. ಈ ಕಾರಣಕ್ಕೆ ಅವರು ಮನೆಯನ್ನು ತೊರೆಯಲು ಹಿಂದೇಟು ಹಾಕಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಂಪತ್ತು ಎಷ್ಟಿತ್ತು?
ನಾರಾಯಣಾಚಾರ್ ಮನೆಯಲ್ಲಿ 30 ಕ್ವಿಂಟಾಲ್ ಕಾಳು ಮೆಣಸು, 10 ಕ್ವಿಂಟಾಲ್ ಏಲಕ್ಕಿ ಇತ್ತು. ಇವೆರಡೂ ಪದಾರ್ಥಗಳ ಬೆಲೆಯೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಇತ್ತು. 50 ಬಾಟಲಿ ಜೇನು ಇತ್ತು. ಹೀಗಾಗಿ ಪದಾರ್ಥಗಳನ್ನು ಬಿಟ್ಟು ಮನೆ ಖಾಲಿ ಮಾಡಲು ಅರ್ಚಕರು ಹಿಂದೇಟು ಹಾಕುತ್ತಿದ್ದರು.
ಒಂದು ಡಸ್ಟರ್, ಅಂಬಾಸಿಡರ್ ಕಾರು, 30ಕ್ಕೂ ಹಸುಗಳನ್ನ ಹೊಂದಿದ್ದರು. ಅಲ್ಲದೇ ಕೊಡಗಿನ ಸುತ್ತ ಮುತ್ತ 100 ಎಕರೆ ಕಾಫಿ ತೋಟ ಹೊಂದಿದ್ದರು. ಜೊತೆಗೆ ಬೆಂಗಳೂರಿನಲ್ಲಿ 2 ಸೈಟ್ ಹೊಂದಿದ್ದಾರೆ. ಈ ಮೂಲಕ ನಾರಾಯಣಾಚಾರ್ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯರಾಗಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಆಸ್ತಿ ಇದೆ ಎಂಬುದರ ಬಗ್ಗೆ ಅಧಿಕೃತವಾಗಿ ದೃಢಪಟ್ಟಿಲ್ಲ.
ಆಚಾರ್ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಇರಬಹುದು. ಬ್ರಹ್ಮಕುಂಡಿಕೆಯಲ್ಲಿ ಹಾಕಲಾಗುತ್ತಿದ್ದ ನಾಣ್ಯಗಳನ್ನು ಆಚಾರ್ ಕೊಂಡ್ಯೊಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಒಂದು ಕೋಣೆಯಲ್ಲಿ ನಾಣ್ಯಗಳನ್ನು ಸಂಗ್ರಹಿಸಿ ಇಟ್ಟಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ತಲಕಾವೇರಿ ದೇವಸ್ಥಾನದ ಮುಖ್ಯಸ್ಥ ಕೋಡಿ ಮೋಟಯ್ಯ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾರಾಯಣಾಚಾರ್ ಮೂಲತಃ ಅರ್ಚಕ ಹಾಗೂ ಕೃಷಿಕ ಕುಟುಂಬದಿಂದ ಬಂದಿದ್ದಾರೆ. ಹೀಗಾಗಿ ಸಂಪತ್ತು ಹೊಂದಿರುವುದು ಸಹಜ. ಅವರಿಗೆ ಕಾಫಿ, ಏಲಕ್ಕಿ ತೋಟವಿದೆ. ಹಾಗೆಯೇ ಅವರ ಕುಟುಂಬ ತಲೆ, ತಲಾಂತರಗಳಿಂದ ಅರ್ಚಕ ವೃತ್ತಿಯನ್ನು ಮಾಡುತ್ತಿದೆ. ಅಲ್ಲದೆ ಮಕ್ಕಳಿಬ್ಬರು ವಿದೇಶದಲ್ಲಿ ಇರುವುದರಿಂದ ಸಹಜವಾಗಿಯೇ ಹಣವನ್ನು ಸಂಗ್ರಹಿಸಿರಬಹುದು ಎಂದಿದ್ದಾರೆ.
ನಾರಾಯಣಾಚಾರ್ ಅವರಿಗೆ ಬೆಂಗಳೂರಿನಲ್ಲೂ ಸ್ವಂತ ಮನೆ ಆಸ್ತಿ ಇದೆ. ಅದನ್ನು ಅವರೇ ನನ್ನ ಬಳಿ ಹೇಳಿದ್ದರು. ಅತೀವ ಪ್ರಮಾಣದಲ್ಲಿ ಏಲಕ್ಕಿ, ಮೆಣಸು ಬೆಳೆಯುತ್ತಿದ್ದರು. ದೇವಸ್ಥಾನದಿಂದಲೂ ಅವರಿಗೆ ಹೆಚ್ಚು ಆದಾಯವಿತ್ತು. ಅಷ್ಟು ಪ್ರಮಾಣದ ಆಸ್ತಿ ಇಲ್ಲದಿದ್ದರೂ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದ ಕಾರಣ ಒಡವೆಗಳನ್ನು ಇಟ್ಟಿರಬಹುದು ಎಂದು ನಾರಾಯಣಾಚಾರ್ ಅಪಾರ ಸಂಪತ್ತನ್ನು ಹೊಂದಿದ್ದಾರೆ ಎನ್ನುವ ಊಹಾಪೋಹಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.