ಮಂಗಳೂರು: ನಗರದ ಪಣಂಬೂರು ಸಮೀಪದ ತಣ್ಣೀರುಬಾವಿ ಎಂಬಲ್ಲಿ ಸಮುದ್ರದ ನೀರು ದಡಕ್ಕೆ ನುಗ್ಗಿದ್ದು ಸ್ಥಳೀಯರನ್ನು ಆತಂಕಕ್ಕೀಡು ಮಾಡಿದೆ.
ಎಂಆರ್ಪಿಎಲ್ ಪೆಟ್ರೋಲಿಯಂ ಕಂಪನಿಗೆ ಕಡಲಿನ ಉಪ್ಪು ನೀರನ್ನು ಸಿಹಿ ನೀರನ್ನಾಗಿಸುವ ಘಟಕ ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ. ಹೀಗಾಗಿ ಸಮುದ್ರದ ನೀರನ್ನು ಪೈಪ್ ಮೂಲಕ ಸ್ಥಾವರಕ್ಕೆ ತರುವ ಕಾಮಗಾರಿ ನಡೆಯುತ್ತಿದ್ದು, ಪೈಪ್ ಅಳವಡಿಸಲು ಸಮುದ್ರ ತೀರದ ಮರಳನ್ನು ತೆಗೆಯಲಾಗಿದೆ.
ಇದೀಗ ಕಡಲಿನ ಅಬ್ಬರ ಹೆಚ್ಚಾಗಿದ್ದರಿಂದ ಸಮುದ್ರದ ನೀರು ಮರಳು ತೆಗೆದ ಪ್ರದೇಶದಿಂದ ಜನ ವಸತಿ ಸ್ಥಳಕ್ಕೆ ನುಗ್ಗಿ ಬಂದಿದೆ.ಸಮುದ್ರದ ಅಲೆಗಳ ಅಬ್ಬರ ಹೆಚ್ಚಾದರೆ ಇನ್ನೂ ತೊಂದರೆಗಳಾಗಬಹುದು ಅನ್ನೋ ಹಿನ್ನೆಲೆಯಲ್ಲಿ ಸ್ಥಳೀಯ 15 ಕುಟುಂಬಗಳನ್ನು ಜಿಲ್ಲಾಡಳಿತ ಸ್ಥಳಾಂತರಿಸಿದೆ. ಎಂಆರ್ಪಿಎಲ್ ನ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಹೀಗಾಗಿ ಇಲ್ಲಿ ಸ್ಥಾವರದ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್, ಶಾಸಕ ಡಾ.ವೈ ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.