– ರೊಚ್ಚಿಗೆದ್ದ ಸ್ಥಳೀಯರಿಂದ ಗಲಾಟೆ
ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಬೆಂಗಳೂರು ನಗರದಲ್ಲಿ ಅದರಲ್ಲೂ ಸೀಲ್ಡೌನ್ ಏರಿಯಾದಲ್ಲಿ ಮೃತದೇಹವೊಂದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಶಂಕರನಗರದಲ್ಲಿ ಮೃತದೇಹದಿಂದ ಇಡೀ ಏರಿಯಾದ ಜನರು ಆತಂಕಗೊಂಡಿದ್ದಾರೆ. ಅಲ್ಲದೇ ಕೊರೊನಾ ಸಂದರ್ಭದಲ್ಲಿ ಮೃತದೇಹ ಮನೆಯಲ್ಲಿ ಇಟ್ಟಿದ್ದರಿಂದ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ.
ಮೂರು ದಿನದ ಹಿಂದೆ ಶಂಕರನಗರದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆದರೆ ಮಕ್ಕಳು ಬಾಂಬೆಯಿಂದ ಬರಬೇಕು ಎಂದು ಮೂರು ದಿನದಿಂದ ಡೆಡ್ ಬಾಡಿಯನ್ನು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಇದೀಗ ಬಾಂಬೆಯಿಂದ ಮಕ್ಕಳು ಬಂದಿದ್ದಾರೆ. ಅದರಲ್ಲೂ ಯುವಕನೊಬ್ಬ ಬಾಂಬೆಯಿಂದ ರಸ್ತೆಯ ಮೂಲಕವೇ ನೇರವಾಗಿ ಮನೆಗೆ ಬಂದಿದ್ದಾನೆ. ಇದರಿಂದ ಏರಿಯಾದಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಕ್ಕಪಕ್ಕದ ಮನೆಯವರು ಗಲಾಟೆ ಮಾಡುತ್ತಿದ್ದಾರೆ.
ಬಾಂಬೆಯಿಂದ ಮಕ್ಕಳನ್ನು ಏಕಾಏಕಿ ಕರೆಸಿಕೊಂಡಿದ್ದಕ್ಕೆ ಅಕ್ಕಪಕ್ಕದ ಮನೆಯವರ ಗಲಾಟೆ ಮಾಡುತ್ತಿದ್ದಾರೆ. ಬಾಂಬೆಯಿಂದ ಬಂದು ಇಲ್ಲಿ ಕೊರೊನಾ ಹಬ್ಬಿದರೆ ಯಾರು ಹೊಣೆ ಅಂತ ಮೃತದೇಹ ಇರುವ ಮನೆ ಮುಂದೆ ಗಲಾಟೆ ಮಾಡಿದ್ದಾರೆ. ಕೊನೆಗೆ ಮನೆಯವರು ಅಂಬುಲೆನ್ಸ್ ಮೂಲಕ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ಆದರೆ ಬೆಂಗಳೂರಿಗೆ ಬಾಂಬೆಯಿಂದ ಎಂಟ್ರಿಯಾಗುತ್ತಿದ್ದಾರೆ. ಅಷ್ಟಕ್ಕೂ ಮಹಾರಾಷ್ಟ್ರದಿಂದ ಬಂದವರು 7 ದಿನ ಇನ್ಸಿಟ್ಯೂಷನಲ್ ಕ್ವಾರಂಟೈನ್ ಆಗಿ ತದನಂತರ ಹೋಂ ಕ್ವಾರಂಟೇನ್ನಲ್ಲಿರಬೇಕು. ಆದರೂ ಈ ಯುವಕ ಹೇಗೆ ಬಂದ? ಕಾನೂನು ಎಲ್ಲರಿಗೂ ಒಂದೇ. ಬೆಂಗಳೂರಿಗೆ ಯಾರೂ ಬೇಕಾದರೂ ಬಾಂಬೆಯಿಂದ ನೇರವಾಗಿ ಬರಬಹುದಾ? ಬಿಬಿಎಂಪಿ ಅಧಿಕಾರಿಗಳು, ಆರೋಗ್ಯ ವಿಭಾಗದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.