– ಖಾಸಗಿ ಅಂಬುಲೆನ್ಸ್ ದುರ್ಬಳಕೆ
– ಟೋಲ್ನಲ್ಲಿ ಕ್ಯೂ ನಿಂತ ವಾಹನಗಳು
ಬೆಂಗಳೂರು/ನೆಲಮಂಗಲ: ಮನೆಯಿಂದ ಹೊರಗೆಬರಬೇಡಿ ಅಂದರೂ ಜನರು ಕೇಳುತ್ತಿಲ್ಲ. ನೆಲಮಂಗಲದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಹೌದು. ನವಯುಗ ಟೋಲ್ ಬಳಿ ಜನರನ್ನು ಸೇರಿಸಿಕೊಂಡು ಹೀರೋ ಆಗಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವ್ಯಕ್ತಿ ಟೋಲ್ ಬಳಿ ವಾಹನಗಳನ್ನ ಬಿಡದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಲ್ಲದೆ ಜನರನ್ನು ಗುಂಪು ಕಟ್ಟಿಕೊಂಡು ಪೊಲೀಸರೊಂದಿಗೆ ವಾಗ್ವದಕ್ಕಿಳಿದಿದ್ದ. ಈ ವೇಳೆ ಪೊಲೀಸರು ಎಷ್ಟೇ ಮನವೊಲಿಸಿದ್ರೂ ಕೇಳಲಿಲ್ಲ. ಹೀಗಾಗಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಪೊಲೀಸ್ ವಾಹನದ ಮೂಲಕ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
9 ದಿನಗಳ ಕರ್ನಾಟಕ ಲಾಕ್ ಡೌನ್ ಆದೇಶ ಮಾಡಿದ್ದು, ರಾಜ್ಯಾದ್ಯಂತ 144 ಸೆಕ್ಷನ್ ಜಾರಿ ಮಾಡಿದೆ. ಆದರೂ ಸರ್ಕಾರದ ಆದೇಶ ಪಾಲಿಸದೇ ವಾಹನಗಳು ಇಂದು ರಸ್ತೆಗಿಳಿದಿವೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಮಾಡುತ್ತಿವೆ. ಯಾವುದೇ ಮುಂಜಾಗೃತೆ ವಹಿಸದೇ ವಾಹನ ಸವಾರರು ಓಡಾಟ ಮಾಡುತ್ತಿದ್ದಾರೆ.
ನೆಲಮಂಗಲ ತಾಲೂಕಿನ ಎರಡು ಗಡಿ ಭಾಗದಲ್ಲಿ ಅಂದರೆ ಮಹದೇವಪುರ ಹಾಗೂ ಹಳೇನಿಜಗಲ್ಲು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಖಾಸಗಿ ಅಂಬುಲೆನ್ಸ್ ದುರ್ಬಳಕೆ:
ಕೊರೊನಾ ಭೀತಿಯಿಂದ 144 ಜಾರಿ ಮಾಡಿದರೆ ಇದನ್ನೇ ಖಾಸಗಿ ಅಂಬುಲೆನ್ಸ್ ಗಳು ಇದನ್ನೇ ಬಂಡವಾಳ ಮಾಡಿಕೊಂಡಿವೆ. ನೆಲಮಂಗಲ ಮಾರ್ಗದಿಂದ ಹಾಸನಕ್ಕೆ ಜನರನ್ನು ಅಂಬುಲೆನ್ಸ್ ನಲ್ಲಿ ಸಾಗಾಟ ಮಾಡಲಾಗುತ್ತಿದೆ. ಪ್ರಶ್ನೆ ಮಾಡಿದ್ರೆ ಏನಿಗಾ ತುರ್ತು ಸ್ಥಿತಿ ಎಂದು ಅಂಬುಲೆನ್ಸ್ ವಾಹನದ ಸಿಬ್ಬಂದಿ ಹೇಳುತಿದ್ದಾರೆ.
ಕ್ಯೂ ನಿಂತ ವಾಹನಗಳು:
ನಗರದಿಂದ ಹೊರಗಡೆ ಹೋದರೆ ಟೋಲ್ ಗಳಲ್ಲೇ ಲಾಕ್ ಆಗೋದು ಗ್ಯಾರಂಟಿಯಾಗಿದೆ. ಯಾಕಂದ್ರೆ ಕಿಲೋ ಮೀಟರ್ ಗಟ್ಟಲೆ ವಾಹನಗಳು ಕ್ಯೂ ನಿಂತಿವೆ. ನಗರದಿಂದ ಇನ್, ಔಟ್ ಆಗೋ ವಾಹನಗಳು ಕೂಡ ಫುಲ್ ಬಂದ್ ಆಗಿವೆ. ಹೀಗಾಗಿ ನವಯುಗ ಟೋಲ್ ಮುಂದೆ ವಾಹನಗಳು ಸಾಲು ಸಾಲು ನಿಂತಿವೆ.