ಬೆಂಗಳೂರು: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನನ್ನು ಕೊಲೆ ಮಾಡಲು ಯತ್ನಿಸಿದ್ದ ನಾಲ್ವರನ್ನ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಆರೋಪಿಗಳಾದ ಪ್ರೇಮ್ ಕುಮಾರ್, ಸುನೀಲ್, ವಿನೋದ್, ಕಿರಣ್ ಸೇರಿ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಸುನೀಲ್, ವಿನೋದ್, ಕಿರಣ್ ಮೂವರು ಕೂಡ ಶೇಖರ್ ಗೌಡ ಎಂಬವರ ಬಳಿ ಕೆಲಸ ಮಾಡುತ್ತಿದ್ದರು. ಆದರೆ ಶೇಖರ್ ಗೌಡ ಹಾಗೂ ಆರೋಪಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಕೆಲಸದಿಂದ ತೆಗೆದಿದ್ದರು. ಇದೇ ಕಾರಣಕ್ಕೆ ಆರೋಪಿಗಳು ಶೇಖರ್ ಗೌಡರ ಕೊಲೆ ಮಾಡಲು ಮುಂದಾಗಿದ್ದರು. ಶೇಖರ್ ಅವರನ್ನು ಮುಗಿಸಿ ಅವರ ಬಳಿ ಇದ್ದ ನಗದು ಹಾಗೂ ಚಿನ್ನಾಭರಣವನ್ನ ದೋಚಲು ಹೊಂಚು ಹಾಕಿದ್ದರು.
ಆರೋಪಿಗಳು ಮಂಗಳವಾರ ರಾತ್ರಿ ಕುರುಬರ ಹಳ್ಳಿ ಬಳಿ ಇರುವ ಕೆಂಪೇಗೌಡ ಆಟದ ಮೈಧಾನದ ಬಳಿ ಕತ್ತಲ್ಲಿನಲ್ಲಿ ಶೇಖರ್ ಗೌಡರ ಮೇಲೆ ಹಲ್ಲೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಬಗ್ಗೆ ತಿಳಿದ ಸಿಸಿಬಿ ಪೊಲೀಸರು ದಾಳಿ ಮಾಡಿ ನಾಲ್ವರನ್ನ ಬಂಧಿಸಿದ್ದಾರೆ. ಆರೋಪಿಗಳು ಕೆಲಸ ಬಿಸಿಡಿದ್ದನ್ನೇ ನೆಪ ಮಾಡಿಕೊಂಡು ಆರೋಪಿಗಳು ಶೇಖರ್ ಗೌಡರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ, ಹಣ, ಚಿನ್ನವನ್ನ ದೋಚುವುದಕ್ಕೆ ಯತ್ನಸಿರುವ ಬಗ್ಗೆ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಸದ್ಯ ಆರೋಪಿಗಳ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳು ಹಾಗೂ ಶೇಖರ್ ಗೌಡ ನಡುವೆ ಯಾಕೆ ಗಲಾಟೆ ನಡೆದಿತ್ತು? ಇನ್ನಿತರೆ ವಿಚಾರದ ಕುರಿತು ಪೊಲೀಸರು ಆರೋಪಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.