ವಿಧಾನ ಪರಿಷತ್‍ಗೆ ಲಕ್ಷ್ಮಣ ಸವದಿ ಆಯ್ಕೆ

Public TV
2 Min Read
Laxman Savadi 4

ಬೆಂಗಳೂರು : ನಿರೀಕ್ಷೆಯಂತೆ ವಿಧಾನ ಪರಿಷತ್‍ನ ಒಂದು ಸ್ಥಾನ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಚುನಾವಣೆಯಿಂದ ಹಿಂದೆ ಸರಿದಿದ್ದರು. ನೆಪ ಮಾತ್ರಕ್ಕೆ ನಡೆದ ಚುನಾವಣೆಯಲ್ಲಿ 113 ಮತಗಳನ್ನ ಪಡೆದು ಲಕ್ಷ್ಮಣ ಸವದಿ ವಿಧಾನ ಪರಿಷತ್ ಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ತಮ್ಮ ಡಿಸಿಎಂ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಚುನಾವಣೆ ಪ್ರಾರಂಭ ಆಯ್ತು. ಬಿಜೆಪಿಯ ಶಾಸಕರು ಒಬ್ಬೊಬ್ಬರೇ ಆಗಮಿಸಿ ಮತ ಚಲಾವಣೆ ಮಾಡಿದ್ರು. ಅನಾರೋಗ್ಯದಿಂದ ಬಳಲುತ್ತಿರೋ ಶಾಸಕ ರಾಮದಾಸ್ ಹೊರತುಪಡಿಸಿ ಉಳಿದ ಎಲ್ಲಾ ಬಿಜೆಪಿ ಶಾಸಕರು ಮತ ಚಲಾಯಿಸಿದ್ರು. ಪರಿಣಾಮ 113 ಮತಗಳಿಂದ ಬಿಜೆಪಿ ಅಭ್ಯರ್ಥಿ ಸವದಿ ಗೆಲುವು ಸಾಧಿಸಿದರು. ಸಂಖ್ಯಾಬಲ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾನ ಪ್ರಕ್ರಿಯೆಯಿಂದ ದೂರ ಉಳಿದಿತ್ತು.

bjp Leaders

ಒಟ್ಟಾರೆ 120 ಮತಗಳು ಚಲಾವಣೆ ಆಗಿದ್ದವು. ಅದ್ರಲ್ಲಿ 113 ಮತಗಳು ಸಿಂಧುವಾಗಿದ್ದು, 7 ಮತಗಳು ಅಸಿಂಧುವಾಗಿವೆ. ವಿಶೇಷ ಅಂದ್ರೆ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸವದಿ ಪರ ಮತ ಚಲಾವಣೆ ಮಾಡಿದ್ರು. ಸಚಿವ ಸಿಟಿ ರವಿ ಜೊತೆ ಆಗಮಿಸಿ ಮತ ಚಲಾಯಿಸಿದ್ರು. ಜೆಡಿಎಸ್ ಪಕ್ಷ ಚುನಾವಣೆಯಿಂದ ದೂರ ಉಳಿದಿದ್ರು ಪಕ್ಷದ ನಿರ್ಣಯದ ವಿರುದ್ಧವೇ ಮತ ಹಾಕಿದ್ರು. ಈ ವೇಳೆ ಮಾತನಾಡಿದ ಜಿಟಿಡಿ ಪಕ್ಷ ಯಾವುದೇ ಸೂಚನೆ ಕೊಟ್ಟಿರಲಿಲ್ಲ. ಶಾಸಕರಾದವರು ವೋಟ್ ಮಾಡಬೇಕು. ಹೀಗಾಗಿ ಡಿಸಿಎಂ ಸವದಿಗೆ ಮತ ಹಾಕಿದ್ದೇನೆ ಎಂದು ತಿಳಿಸಿದರು.

Laxman Savadi

ಇನ್ನು ವಿಚಿತ್ರ ಅಂದ್ರೆ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಜೆಪಿ ಶಾಸಕ ಪ್ರೀತಂಗೌಡ ಜೊತೆ ಆಗಮಿಸಿ ಮತ ಚಲಾವಣೆ ಮಾಡಿದ್ರು. ಯಾರಿಗೆ ಮತ ಹಾಕಿದ್ದೇನೆ ಅನ್ನೊ ಗುಟ್ಟು ಬಿಟ್ಟುಕೊಡಲಿಲ್ಲ. ಇನ್ನುಳಿದಂತೆ ಪಕ್ಷೇತರ ಶಾಸಕ ಸಚಿವ ನಾಗೇಶ್, ಬಿಎಸ್ಪಿ ಶಾಸಕ ಮಹೇಶ್ ಮತ ಚಲಾವಣೆ ಮಾಡಿದ್ರು. ಅಂತಿಮವಾಗಿ 120 ಮತಗಳು ಚಲಾವಣೆ ಆಗಿ, 113 ಮತಗಳು ಸವದಿ ಅವ್ರಿಗೆ ಬಿದ್ದು ಗೆಲುವಿನ ನಗೆ ಬೀರಿದರು. ಗೆಲುವಿನ ಬಳಿಕ ಮಾತನಾಡಿದ ಅಭ್ಯರ್ಥಿ ಲಕ್ಷ್ಮಣ ಸವದಿ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *