ಚಿತ್ರದುರ್ಗ: ಹುಟ್ಟುವ ಪ್ರತಿಯೊಂದು ಹೆಣ್ಣಿಗೆ ಬಾಲ್ಯದಲ್ಲಿ ತಂದೆಯ ಆಸರೆ, ಬೆಳೆದಾಗ ಗಂಡನ ಆಸರೆ ಹಾಗೂ ಮುಪ್ಪಿನಲ್ಲಿ ಮಕ್ಕಳ ಆಸರೆ ಎಂಬ ಮಾತಿದೆ. ಆದರೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ಲೋಹಿತ್ಕುಮಾರ್ ಮಾತ್ರ ಹಣದ ದಾಹ ತೀರಿಸಲಿಲ್ಲ ಎಂದು ತನ್ನ ಪತ್ನಿಗೆ ವಿಷ ಕುಡಿಸಿ ಇನ್ನೊಂದು ಮದುವೆಯಾಗಲು ಸಜ್ಜಾಗಿದ್ದನು.
ಕಳೆದ ಮೂರು ವರ್ಷಗಳ ಹಿಂದೆ ಲೋಹಿತ್ ಕುಮಾರನಿಗೆ ಸಾಸಲಹಳ್ಳದ ನೇತ್ರಾವತಿ ಅವರನ್ನು ಮದುವೆ ಮಾಡಿ ಕೊಡಲಾಗಿತ್ತು. ಆರಂಭದ ದಿನಗಳಲ್ಲಿ ಲೋಹಿತ್ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಆದರೆ ದಿನಗಳದಂತೆ ಇವನಿಗೆ ಹಣದ ಭೂತ ಮೆಟ್ಟಿದ್ದು, ನಿತ್ಯ ವರದಕ್ಷಿಣೆ ಹಣ ಕೇಳಿ ನೇತ್ರಾರಿಗೆ ಕಿರುಕುಳ ನೀಡುತ್ತಿದ್ದ. ಆದರೆ ನೇತ್ರಾರ ತವರು ಮನೆಯಲ್ಲೂ ಸಹ ಕಿತ್ತುತಿನ್ನುವ ಬಡತನ, ಕುಟುಂಬಕ್ಕೆ ಆಸರೆಯಾಗಿದ್ದ ಈಕೆಯ ತಂದೆ ಇದ್ದಕ್ಕಿದ್ದಂತೆ ಮನೆಬಿಟ್ಟು ಹೋಗಿದ್ದಾರೆ.
ಎಷ್ಟೇ ಕಷ್ಟ ಬಂದರೂ ಎದೆಗುಂದದ ಅನಾರೋಗ್ಯದಿಂದ ಬಳಲುತ್ತಿರುವ ನೇತ್ರಾರ ತಾಯಿ ಪುಷ್ಪವತಿಯವರು, ತನ್ನ ಚಿಕ್ಕ ಮಗನ ಸಹಾಯದಿಂದ ಮಗಳು ಚೆನ್ನಾಗಿ ಇರಲಿ ಎಂದು ಕೇಳಿದಾಗಲ್ಲೆಲ್ಲ ಹಣ ಕೊಟ್ಟು ಖಾಲಿಯಾಗಿದ್ದರು. ಇಷ್ಟದರೂ ಸುಮ್ಮನಾಗದ ಲೋಹಿತ್ ಕಿರುಕುಳ ನೀಡುತ್ತಿದ್ದ. ಪರಿಣಾಮ ಕಿರುಕುಳ ತಾಳಲಾರದೆ ನೇತ್ರಾ ತವರು ಬಂದಿದ್ದರು. ಈ 2ನೇ ಮದುವೆ ಆಗಲು ಸಜ್ಜಾಗಿದ್ದ ಲೋಹಿತ್, ಭರ್ಜರಿ ವರದಕ್ಷಿಣೆ ಪಡೆಯಬೇಕು ಎಂದು ಪ್ಲಾನ್ ಮಾಡಿದ್ದ. ಹೀಗಾಗಿ ತವರು ಮನೆಯಲ್ಲಿದ್ದ ಪತ್ನಿಯ ಮನೆಗೆ ಸಂಬಂಧಿಕರೊಂದಿಗೆ ಬಂದಿದ್ದ ಲೋಹಿತ್, ನೇತ್ರಾರ ಬಾಯಿಗೆ ವಿಷ ಸುರಿದು ಕೊಲ್ಲಲು ಯತ್ನಿಸಿದ್ದಾನೆ. ಅಲ್ಲದೆ ನೇತ್ರಾರ ತಾಯಿಯ ಮೇಲೂ ಹಲ್ಲೆ ಮಾಡಿ ಕೊಲೆ ಯತ್ನಕ್ಕೆ ಮುಂದಾಗಿದ್ದಾನೆ.
ಈ ಘಟನೆಯಲ್ಲಿ ನೇತ್ರಾಳ ಪರಿಸ್ಥಿತಿ ಗಂಭೀರವಾಗಿದ್ದೂ, ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಲೋಹಿತ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.