ಬೆಂಗಳೂರು: ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಕ್ಷೇತ್ರದಲ್ಲೇ ಇಂದು ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ರಿಪಬ್ಲಿಕ್ ಆಫ್ ಕನಕಪುರ ಎನ್ನುತ್ತಿದ್ದವರಿಗೆ ಇಂದು ಸಂಕಷ್ಟ ಎದುರಾಗಲಿದೆ.
ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಮೂರ್ತಿ ಸ್ಥಾಪನೆ ವಿರೋಧಿಸಿ ಹಿಂದು ಜಾಗರಣ ವೇದಿಕೆ ಇಂದು ಕನಕಪುರ ಚಲೋ ಪ್ರತಿಭಟನೆಗೆ ಕರೆಕೊಟ್ಟಿದೆ. ಕನಕಪುರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಚನ್ನಬಸಪ್ಪ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಅನಂತರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಆದರೆ ಇದು ಕೇವಲ ಏಸು ಪ್ರತಿಮೆ ವಿರೋಧಿಸಿ ನಡೆಯುವ ಜಾಥಾ ಅಲ್ಲ ಅನ್ನೋದೆ ಡಿಕೆಶಿಗೆ ತಲೆನೋವು ತಂದಿಟ್ಟಿದೆ.
ಬಿಜೆಪಿ ಇದೇ ಅವಕಾಶವನ್ನ ಬಳಸಿಕೊಂಡು ಕನಕಪುರದ ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುವ ಪ್ರಯತ್ನ ಆರಂಭಿಸಿದೆ. ಹಿಂದು ಜಾಗರಣಾ ವೇದಿಕೆಯ ಪ್ರತಿಭಟನೆಯಲ್ಲಿ ಅನೇಕ ಬಿಜೆಪಿ ನಾಯಕರು ಸಹಾ ಭಾಗವಹಿಸಲಿದ್ದಾರೆ.
ಇದು ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದವಾಗಿದ್ದರೆ ಡಿ.ಕೆ.ಶಿವಕುಮಾರ್ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇದನ್ನೇ ಬಳಸಿಕೊಂಡು ಬಿಜೆಪಿ ಕನಕಪುರ ಕೋಟೆಗೆ ಲಗ್ಗೆ ಇಡಲು ಮುಂದಾಗಿದೆ. ಈ ಬೆಳವಣಿಗೆ ಇದುವರೆಗೆ ಕನಕಪುರಕ್ಕೆ ನಾನೇ ಕಿಂಗ್ ಅಂದುಕೊಂಡಿದ್ದ ಡಿ.ಕೆ.ಶಿವಕುಮಾರ್ ನೆಮ್ಮದಿ ಕೆಡಿಸಿದಂತಾಗಿದೆ.