ಚಿಕ್ಕೋಡಿ(ಬೆಳಗಾವಿ): ದೇಶದಲ್ಲಿ ಯಾರೇ ಏಸು ಪ್ರತಿಮೆ ಸ್ಥಾಪಿಸಿದರೆ ಸೋನಿಯಾ ಗಾಂಧಿಗೂ ಅದಕ್ಕೂ ಏನು ಸಂಬಂಧ ಎಂದು ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಯಮಕನಮರಡಿ ಗ್ರಾಮದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಬರುವ ಮುನ್ನವೇ ಕಾಂಗ್ರಸ್ಸಿನವರು ಸಾಕಷ್ಟು ಏಸು ಪ್ರತಿಮೆ ಸ್ಥಾಪಿಸಿದ್ದಾರೆ. ಈಗಲೂ ಸ್ಥಾಪಿಸುತ್ತಿದ್ದಾರೆ, ಮುಂದೆಯೂ ಸ್ಥಾಪಿಸುತ್ತಾರೆ. ಅವರವರ ಭಕ್ತಿ ಇಚ್ಛೆ ಪ್ರಕಾರ ಮೂರ್ತಿ ಸ್ಥಾಪಿಸುತ್ತಾರೆ. ಇದರಲ್ಲಿ ರಾಜಕೀಯ ಬೆರೆಸುವ ಅವಶ್ಯಕತೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಪ್ರತಿನಿಧಿಸುವ ಭಾಗದಲ್ಲಿ ಏಸು ಪ್ರತಿಮೆ ಬೇಡಿಕೆ ಇದೆ. ಹೀಗಾಗಿ ಅವರು ಮೂರ್ತಿ ಸ್ಥಾಪಿಸುತ್ತಿದ್ದಾರೆ ಎಂದು ಹೇಳಿ ಮಾಜಿ ಸಚಿವರ ಪರ ಬ್ಯಾಟಿಂಗ್ ಮಾಡಿದರು.
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಮಾತನಾಡಿದ ಅವರು, ಯಾರೇ ಅಧ್ಯಕ್ಷರಾದರೂ ನಾವು ಸ್ವೀಕಾರ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದವರು ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಕೆಪಿಸಿಸಿ ಅಧ್ಯಕ್ಷ ಯಾರೇ ಇದ್ದರೂ ಪಕ್ಷ ಅವರ ಜೊತೆ ಇರುತ್ತದೆ ಎಂದು ಒಗ್ಗಟ್ಟಿನ ಮಾತುಗಳನ್ನಾಡಿದರು.