ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

Public TV
2 Min Read
Savasi mahesh kumathalli

ಬೆಳಗಾವಿ: ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೊ ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಕೂಡ ಅಷ್ಟೇ ಸತ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ಅಥಣಿಯಲ್ಲಿ ಮಾತನಾಡಿದ ಡಿಸಿಎಂ, ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ಗೆಲುವು ಖಚಿತ. ನಮ್ಮ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಇರುವುದು ಸತ್ಯ. ಅದನ್ನು ಮೂರು ದಿನಗಳಲ್ಲಿ ಸರಿ ಮಾಡುತ್ತೇನೆ. ಹೊಸ ಸೋಸೆ ಮನೆಗೆ ಬಂದಾಗ ಪ್ರಾರಂಭದಲ್ಲಿ ವ್ಯತ್ಯಾಸ ಇದ್ದೆ ಇರುತ್ತೆ. ಇದನ್ನ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

Savadi

ನನಗೆ ಯಾವುದೆ ರೀತಿಯ ಮುನಿಸಿಲ್ಲ. ಹಾಗೊಂದು ವೇಳೆ ಮುನಿಸಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ನಾನು ಯಾವಾಗಲೂ ನೇರ ಮತ್ತು ಸ್ಪಷ್ಟ ಇದ್ದೇನೆ. ಬಿಜೆಪಿಯ ಯಾವುದೇ ಕಾರ್ಯಕರ್ತರು ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ. ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ನೂರಕ್ಕೆ ನೂರರಷ್ಟು ನಾವೇ ಮತ ಹಾಕಿಸಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಅಥಣಿ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಪಟ್ಟಣದ ಆರ್.ಎಸ್.ಎಚ್ ಕುಲಕರ್ಣಿ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗ ಬೇಕಿದ್ದ ಸಭೆ ಬರೋಬ್ಬರಿ 3 ಗಂಟೆ ತಡವಾಗಿ ಪ್ರಾರಂಭವಾಯಿತು. ಲಕ್ಷ್ಮಣ ಸವದಿ ಕಾರ್ಯಕ್ರಮಕ್ಕೆ ಬರುತ್ತಾರಾ ಅಥವಾ ಇಲ್ಲವಾ ಎನ್ನುವುದೇ ಭಾರೀ ಗೊಂದಲ ಮೂಡಿಸಿತ್ತು. ಈ ಮಧ್ಯೆ ಸಭೆಗೆ ಹೋಗದಂತೆ ಲಕ್ಷ್ಮಣ ಸವದಿ ಅವರನ್ನು ಅಭಿಮಾನಿಗಳು, ಕೆಲ ಬಿಜೆಪಿ ಕಾರ್ಯಕರ್ತರು ತಡೆದರು. ನಂತರ ಮಾಜಿ ಸಿಎಂ ಜಗದೀಶ ಶೆಟ್ಟರ್, ಕುಡಚಿ ಶಾಸಕ ಪಿ.ರಾಜು, ಮಹೇಶ ಕುಮಟಳ್ಳಿ ಸೇರಿದಂತೆ ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಸಭೆಗೆ ಕರೆತರಲು ತೆರಳಿದ್ದರು. ಆಗ ಡಿಸಿಎಂ ಮನೆ ಮುಂದೆ ಹೈಡ್ರಾಮಾನೇ ನಡೆಯಿತು.

Disqualified MLA Srimanth Patil

ಜಗದೀಶ್ ಶೆಟ್ಟರ್ ಕಾರಿಗೆ ಲಕ್ಷ್ಮಣ ಸವದಿ ಅಭಿಮಾನಿಗಳು ಅಡ್ಡಬಿದ್ದು ತಡೆದರು. ಅಲ್ಲದೆ ಜಗದೀಶ್ ಶೆಟ್ಟರ್ ಅವರನ್ನ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಕುಡಚಿ ಶಾಸಕ ರಾಜು ಅವರಿಗೂ ಸವದಿ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡರು. ನಂತರ ಹರಸಾಹಸ ಪಟ್ಟು ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರನ್ನ ಸಭೆಗೆ ಕರೆದುಕೊಂಡು ಬಂದರು. ಆದರೆ ಅಲ್ಲೂ ಕೂಡ ಸವದಿ ಅಭಿಮಾನಿಗಳು ಯಾರನ್ನು ಕೇಳಿ ಸಭೆ ಕರೆದಿದ್ದೀರಿ ಎಂದು ಗಲಾಟೆ ಮಾಡಿದರು.ನಂತರ ಲಕ್ಷ್ಮಣ ಸವದಿ ಖುದ್ದಾಗಿ ಬಂದು ಅಭಿಮಾನಿಗಳಿಗೆ ಕೈ ಮುಗಿದು, ಕಾಲು ಬಿದ್ದು ಗಲಾಟೆ ಮಾಡದೆ ಇಲ್ಲಿಂದ ತೆರಳಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿದ್ದ ಲಕ್ಷ್ಮಣ ಸವದಿ ಅವರು ಅಭಿಮಾನಿಗಳು ಜಗದೀಶ್ ಶೆಟ್ಟರ್, ಮಹೇಶ್ ಕುಮಠಳ್ಳಿ ಭಾಷಣದ ವೇಳೆ ತಮ್ಮ ನಾಯಕನ ಪರ ಜೈಕಾರ ಹಾಕಿ ಭಾಷಣಕ್ಕೆ ಅಡ್ಡಿ ಪಡಿಸಿದರು.

https://www.youtube.com/watch?v=fk_vASHUtJU

Share This Article
Leave a Comment

Leave a Reply

Your email address will not be published. Required fields are marked *