ಬೆಂಗಳೂರು: ನಾಲ್ಕು ದಿನ ಮೆಟ್ರೋ ಹಸಿರು ಮಾರ್ಗದಲ್ಲಿರುವ ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್.ವಿ ರಸ್ತೆ) – ಯೆಲಚೇನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ತಾತ್ಕಾಲಿಕವಾಗಿ ರದ್ದಾಗಲಿದೆ.
ಈ ಗುರುವಾರದಿಂದ ಮುಂದಿನ ಭಾನುವಾರದವರೆಗೆ ಆರ್.ವಿ. ರಸ್ತೆ-ಯೆಲಚೇನಹಳ್ಳಿ ಮಾರ್ಗದಲ್ಲಿ ಮೆಟ್ರೋ ಸಂಚಾರ ರದ್ದಾಗಲಿದ್ದು ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ಬಳಸಬೇಕಿದೆ.
ರದ್ದು ಯಾಕೆ?
ಹಸಿರು ಮಾರ್ಗದ ಆರ್.ವಿ. ರಸ್ತೆ ನಿಲ್ದಾಣದ ಮತ್ತು ನಿರ್ಮಾಣ ಹಂತದಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಕಾರಿಡಾರ್ ಭಾಗವಾಗಿ ಕಾಮಗಾರಿಯನ್ನು ನಮ್ಮ ಮೆಟ್ರೋ ಕೈಗೆತ್ತಿಕೊಂಡಿದೆ. ಪ್ರಯಾಣಿಕರಿಗೆ ಸಮಸ್ಯೆಯಾಗದೇ ಇರಲು ನಾಲ್ಕು ದಿನ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ನವೆಂಬರ್ 18 ಬೆಳಿಗ್ಗೆ 5 ಗಂಟೆಗೆ ನಾಗಸಂದ್ರದಿಂದ ಯೆಲಚೇನಹಳ್ಳಿಯ ನಡುವೆ ರೈಲು ಸೇವೆಗಳು ಪುನರಾರಂಭಗೊಳ್ಳಲಿದೆ. ನಾಯಂಡನಹಳ್ಳಿಯಿಂದ ಬೈಯಪ್ಪನಹಳ್ಳಿಗೆಸಾಗುವ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ.
ಪರ್ಯಾಯ ಬಸ್ಸು ಎಷ್ಟು ಗಂಟೆ?
ಮೊದಲ ಮೂರು ದಿನ ಆರ್.ವಿ. ರಸ್ತೆ ನಿಲ್ದಾಣದಿಂದ ಬೆಳಿಗ್ಗೆ 5.30ರಿಂದ ರಾತ್ರಿ 11.45ರವರೆಗೆ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಬೆಳಿಗ್ಗೆ 4.45ರಿಂದ ರಾತ್ರಿ 10.30ರವರೆಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ನ.17ರಂದು ಯಲಚೇನಹಳ್ಳಿಯಿಂದ ಬೆಳಿಗ್ಗೆ 6.30ಕ್ಕೆ ಮತ್ತು ಆರ್.ವಿ. ರಸ್ತೆಯಿಂದ ಬೆಳಿಗ್ಗೆ 7.15ಕ್ಕೆ ಬಸ್ ಸೇವೆ ಆರಂಭವಾಗಲಿದೆ. ಈ ಬಿಎಂಟಿಸಿ ಬಸ್ಸುಗಳು ಬನಶಂಕರಿ ಮತ್ತು ಜೆ.ಪಿ. ನಗರದ ಮೆಟ್ರೊ ನಿಲ್ದಾಣದಲ್ಲಿ ನಿಲುಗಡೆಯಾಗಲಿವೆ ಎಂದು ನಿಗಮ ಹೇಳಿದೆ.