ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ `ಕಾವೇರಿ’ ಜಟಾಪಟಿ ಶುರುವಾಗಲಿದ್ಯಾ ಅನ್ನೋ ಚರ್ಚೆ ಎದ್ದಿದೆ. ಯಾಕಂದ್ರೆ, ಕಾವೇರಿ ನಿವಾಸ ಖಾಲಿ ಮಾಡೋಕೆ ಸಿದ್ದರಾಮಯ್ಯ ಒಪ್ಪುತ್ತಿಲ್ಲ.
ವಿಪಕ್ಷ ನಾಯಕನಾದ ನಂತರ ಕಾವೇರಿ ನಿವಾಸದಲ್ಲಿ ಮುಂದುವರಿಯಲು ಸಿದ್ದರಾಮಯ್ಯ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಪತ್ನಿಯ ನಂಬಿಕೆ ಎನ್ನಲಾಗುತ್ತಿದೆ.
ಸಿದ್ದರಾಮಯ್ಯರ ರಾಜಕೀಯ ಏಳಿಗೆಯಲ್ಲಿ ಆ ಮನೆ ಮಹತ್ವದ ಪಾತ್ರ ವಹಿಸಿದೆ. ಈಗ ಪುನಃ ವಿಪಕ್ಷ ನಾಯಕನ ಸ್ಥಾನ ಸಿಗಲಿದೆ. ಆದ್ದರಿಂದ ಕಾವೇರಿ ನಿವಾಸದಲ್ಲೇ ಮುಂದುವರಿದರೆ ಮತ್ತಷ್ಟು ರಾಜಕೀಯ ಉನ್ನತಿ ಸಿಗಬಹುದು ಎಂಬುದು ಸಿದ್ದರಾಮಯ್ಯ ಪತ್ನಿಯ ನಂಬಿಕೆಯಾಗಿದೆ.
ಈಗಿರುವ ಕಾವೇರಿ ನಿವಾಸವನ್ನು ಸಿಎಂ ಯಡಿಯೂರಪ್ಪರಿಗೆ ಅಲರ್ಟ್ ಮಾಡಲಾಗಿದೆ. ಕಾವೇರಿ ಪಕ್ಕದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ ಇರುವುದರಿಂದ ಕಾವೇರಿಯಲ್ಲಿ ಸಿಎಂ ಇದ್ದರೆ ಓಡಾಟ ಸುಲಭ ಅನ್ನೋ ಲೆಕ್ಕಾಚಾರದಲ್ಲಿ ಕಾವೇರಿ ನಿವಾಸ ಸಿಎಂ ಗೆ ನೀಡಲಾಗಿದೆ.
ಇತ್ತ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಗೆ ರೇಸ್ ಕೋರ್ಸ್ ರಸ್ತೆಯ ನಿವಾಸವನ್ನ ನೀಡಲಾಗಿದೆ. ಆದರೆ ಕಳೆದ ಆರುವರೆ ವರ್ಷದಿಂದ ಕಾವೇರಿ ನಿವಾಸದಲ್ಲೇ ಇರುವ ಸಿದ್ದರಾಮಯ್ಯ ಮಾತ್ರ ಕಾವೇರಿ ನಿವಾಸದಲ್ಲೇ ಮುಂದುವರಿಯುವ ಕಸರತ್ತು ಮುಂದುವರಿಸಿದ್ದಾರೆ.