ಮಂಡ್ಯ: ಬಿಜೆಪಿ ನಾಯಕರು ಪುಕ್ಕಲರುಗಳು, ಅದರಲ್ಲೂ ಯಡಿಯೂರಪ್ಪ ವೀಕೆಸ್ಟ್ ಸಿಎಂ. ಮಂಡ್ಯ ಜಿಲ್ಲೆಯವರಾಗಿ ಗಡಸ್ಸು ಹೊಂದಿಲ್ಲ. ಅವರು ಹುಟ್ಟಿದ್ದು ಮಾತ್ರ ಮಂಡ್ಯದಲ್ಲಿ, ಬೆಳೆದಿದ್ದು ಬೇರೆ ಕಡೆ. ಆದ್ದರಿಂದ ಅವರಿಗೆ ಗತ್ತು ಅನ್ನೋದು ಬಂದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ಕರ್ನಾಟಕದಲ್ಲಿ 25 ಜನ ಬಿಜೆಪಿ ಎಂಪಿಗಳು ಗೆದ್ದರೂ ಜವಾಬ್ದಾರಿ ಇಲ್ಲದಾಗೆ ನಡೆದು ಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಭೀಕರ ಬರಗಾಲದ ಜೊತೆ ಪ್ರವಾಹವೂ ಬಂದಿದೆ. ಇದರಿಂದ ಸುಮಾರು 6-7 ಲಕ್ಷ ಜನರು ಬೀದಿಪಾಲಾಗಿದ್ದಾರೆ. 2.5 ಲಕ್ಷ ಮನೆ ಬಿದ್ದಿವೆ. 25 ಲಕ್ಷದಷ್ಟು ಬೆಳೆ ಹಾನಿಯಾಗಿದೆ. ಹಿಂದೆ ಈ ರೀತಿಯ ಭೀಕರ ಪ್ರವಾಹವಾಗಿಲ್ಲ. ಆದರೆ ಇದ್ಯಾವುದು ನರೇಂದ್ರ ಮೋದಿಗೆ ಗೊತ್ತಿಲ್ಲವಾ? ಒಂದು ದಿನವೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ದೂರಿದರು.
ಬಿಜೆಪಿ ನಾಯಕರು ಪುಕ್ಕಲರುಗಳು. ನನ್ನ ಪ್ರಕಾರ ಒಬ್ಬರಿಗೂ ಧೈರ್ಯವಿಲ್ಲ. ಹೀಗಾಗಿ ಈ ಬಗ್ಗೆ ಹೈಕಮಾಂಡ್ ಬಳಿ ಕೇಳುವ ಧೈರ್ಯ ಇಲ್ಲ. ದುರ್ಬಲ ಮುಖ್ಯಮಂತ್ರಿ ಎಂದರೆ ಅದು ಯಡಿಯೂರಪ್ಪ. ಮಂಡ್ಯ ಜಿಲ್ಲೆಯವರಾಗಿ ಗಡಸ್ಸು ಹೊಂದಿಲ್ಲ. ಅವರು ಹುಟ್ಟಿದ್ದು ಮಾತ್ರ ಮಂಡ್ಯದಲ್ಲಿ, ಬೆಳೆದಿದ್ದು ಬೇರೆ ಕಡೆ. ಆದ್ದರಿಂದ ಅವರಿಗೆ ಗಡಸ್ಸು ಇಲ್ಲ ಎಂದು ಸಿಎಂ ಯಡಿಯೂರಪ್ಪ ಬಗ್ಗೆ ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಪ್ರವಾಹ ಪ್ರಾರಂಭವಾಗಿ 45 ದಿನ ಆಗಿದೆ. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ನೆರವನ್ನು ಮೋದಿ ಸರ್ಕಾರ ನೀಡಿಲ್ಲ. ಯಡಿಯೂರಪ್ಪ ಸರ್ಕಾರ 38 ಸಾವಿರ ಕೋಟಿ ನೆರವು ಬೇಕೆಂದು ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರ, ನೀವು ಹೆಚ್ಚಿನ ಹಣವನ್ನು ಕೇಳಿದ್ದೀರಿ. ಇದಕ್ಕೆ ಸ್ಪಷ್ಟನೆ ಕೊಡಿ ಎಂದು ಆ ಮನವಿಯನ್ನು ವಾಪಸ್ ಕಳುಹಿಸಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.