ಬೆಂಗಳೂರು: ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಟಿಕ್ ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಯುವಕನಿಗೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಸಿಗದಿದ್ದಕ್ಕೆ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಕಿರಣ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿ ಹೀರೋ ಆಗಬೇಕು ಎಂದು ಕನಸು ಕಂಡಿದ್ದನು. ಅಲ್ಲದೆ ಜೊತೆಗೆ ಅದಕ್ಕಾಗಿ ಸಾಕಷ್ಟು ತಯಾರಿ ಕೂಡ ನಡೆಸಿದ್ದನು. ಈ ಬಾರಿ ನನಗೂ ಒಂದು ಚಾನ್ಸ್ ಸಿಕ್ಕಿಯೇ ಸಿಗುತ್ತದೆ ಎಂದು ಮಧ್ಯವರ್ತಿಗಳ ಸಹಾಯದಿಂದ ಕಾದು ಕುಳಿತಿದ್ದನು. ಆದರೆ ಕೊನೆ ಕ್ಷಣದಲ್ಲಿ ಚಾನ್ಸ್ ಸಿಗಲಿಲ್ಲ ಎಂದು ಮಧ್ಯವರ್ತಿಗಳು ಕೈ ಎತ್ತಿದ್ದರು. ಇದರಿಂದ ಮನನೊಂದ ಯುವಕ, ಬುಧವಾರ ರಾತ್ರಿ ಹೊಸಕೋಟೆಗೆ ಬಂದು ಲಾಡ್ಜ್ ನಲ್ಲಿ ರೂಂ ಬಾಡಿಗೆಗೆ ಪಡೆದು ಟಿಕ್ಟಾಕ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ರಿಯಾಲಿಟಿ ಶೋ ನಲ್ಲಿ ಏನಾದರೂ ಮಾಡಿ ಚಾನ್ಸ್ ತಗೆದುಕೊಳ್ಳಬೇಕು ಎಂದು ಕಿರಣ್ ಅಂದುಕೊಂಡಿದ್ದನು. ಇದೇ ವೇಳೆ ರಿಯಾಲಿಟಿ ಶೋನಲ್ಲಿ ಚಾನ್ಸ್ ಕೊಡಿಸುತ್ತೇನೆ ಎಂದು ವಂಚಕರು ಹೇಳಿದ ಮಾತು ನಂಬಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ನೀಡಿದ್ದಾನೆ. ಆದರೆ ಕಿರಣ್ನಿಂದ ಚಾನ್ಸ್ ಕೊಡಿಸುವುದಾಗಿ ಹಣ ಪಡೆದವರು ಕೊನೆ ಕ್ಷಣದವರೆಗೂ ಚಾನ್ಸ್ ಸಿಕ್ಕಿದೆ ಎಂದು ಹೇಳಿದ್ದರು. ಬಳಿಕ ಈ ಬಾರಿ ನಿನಗೆ ಚಾನ್ಸ್ ಸಿಕ್ಕಿಲ್ಲ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದರು. ಇದರಿಂದ ಮನನೊಂದ ಕಿರಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆತನ ಸಂಬಂಧಿಕರು ಸೇರಿದಂತೆ ಗ್ರಾಮಸ್ಥರು ಸಹ ಕಂಬನಿ ಮಿಡಿದಿದ್ದು, ಇಂತಹ ಮೋಸದ ಜಾಲದ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿಡಿಯೋದಲ್ಲಿ ಕಿರಣ್ ಹೇಳಿದ್ದೇನು?
ಹಾಯ್ ಫ್ರೆಂಡ್ಸ್ ನಾನು ಕಿರಣ್ ಯಾದವ್. ಈ ವಿಡಿಯೋ ಮಾಡಿದ ಉದ್ದೇಶ ಏನೆಂದರೆ ಕಮೆಂಟ್ಸ್ ನಲ್ಲಿ ನನ್ನ ನಿಮ್ಮ ಸಂಬಂಧ ತುಂಬಾ ಇದೆ. ಅಣ್ಣ ಆಗಿರಬಹುದು, ತಮ್ಮ ಆಗಿರಬಹುದು, ಅಕ್ಕ-ತಂಗಿ ಎಂದು ಜಾಸ್ತಿ ಕರೆದುಕೊಳ್ಳುತ್ತೇವೆ. ನನ್ನ ಒಂದು ಮನವಿ ಇದೆ. ನನ್ನ ತಾಯಿಗೆ ನಾನೊಬ್ಬನೇ ಮಗ. ನನ್ನ ಅಮ್ಮನ ನಿಮ್ಮ ಅಮ್ಮ ಎಂದು ನೋಡಿಕೊಳ್ಳಿ. ಇನ್ಮುಂದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾಕೆ ಎಂದು ನಾನು ಹೇಳುವುದಿಲ್ಲ. ಇದು ನನ್ನ ಕೊನೆಯ ಟಿಕ್ಟಾಕ್ ವಿಡಿಯೋ. ಹಾಗಾಗಿ ನಾನು ಇದನ್ನು ಹೇಳುತ್ತಿದ್ದೇನೆ ಎಂದು ಹೇಳಿದ್ದನು.