ಬೆಂಗಳೂರು: ವಿಶ್ವಾಸಮತ ಯಾಚನೆಯ ವಿಳಂಬ ಖಂಡಿಸಿ ಬಿಜೆಪಿ ಶಾಸಕರು ವಿಧಾಸಭೆಯಲ್ಲಿಯೇ ಅಹೋರಾತ್ರಿ ಧರಣಿ ನಡೆಸಿದೆ.
ಗುರುವಾರ ರಾತ್ರಿಯಿಡೀ ಸದನದಲ್ಲೇ ಉಳಿದ ಬಿಜೆಪಿ ಶಾಸಕರು ಮೊದಲಿಗೆ ಯಡಿಯೂರಪ್ಪ ನೇತೃತ್ವದಲ್ಲಿ ಮಾತುಕತೆ ನಡೆಸಿದ್ದಾರೆ. ಇಂದು ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು, ದೋಸ್ತಿಗಳು ಯಾವ ನಿರ್ಧಾರ ಕೈಗೊಳ್ಳಬಹುದು, ಸುಪ್ರೀಂಕೋರ್ಟ್ ಮೊರೆ ಹೋಗ್ಬೇಕಾ ಬೇಡ್ವಾ ಅನ್ನೋ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ರಾತ್ರಿ ಊಟಕ್ಕೆ ಚಪಾತಿ ಮತ್ತು ಅನ್ನ, ಸಾಂಬಾರು ನೀಡಲಾಗಿತ್ತು. ಜೊತೆಗೆ ಮಲಗಲು ಹಾಸಿಗೆ, ದಿಂಬು, ಚಾಪೆ ಮತ್ತು ಹೊದಿಕೆ ಪೂರೈಸಲಾಗಿತ್ತು. ಊಟದ ಬಳಿಕ ಶಾಸಕ ಎಸ್ ಆರ್ ವಿಶ್ವನಾಥ್ ಎಲ್ಲ ಶಾಸಕರಿಗೂ ಸೀಬೆಹಣ್ಣು ಹಂಚಿದ್ದಾರೆ. ನಂತರ ಬಿಎಸ್ವೈ ಸೇರಿದಂತೆ ಎಲ್ಲಾ ಬಿಜೆಪಿ ಶಾಸಕರು ಸದನದಲ್ಲೇ ನಿದ್ದೆ ಮಾಡಿದ್ದಾರೆ.
ಇಂದು ಬೆಳಗ್ಗೆ ಎದ್ದು ವಾಕಿಂಗ್, ಜಾಗಿಂಗ್ ಕೂಡ ಮಾಡಿದರು. ವಾಕಿಂಗ್ ವೇಳೆ ಮಾತನಾಡಿದ ಯಡಿಯೂರಪ್ಪ, ಬಹುಷಃ ದೋಸ್ತಿ ಸರ್ಕಾರಕ್ಕೆ ಇವತ್ತೇ ಕೊನೆಯ ದಿನ ಎಂದು ಹೇಳಿದರು. ನಿನ್ನೆ ದೋಸ್ತಿ ನಾಯಕರು ವ್ಯವಸ್ಥಿತವಾಗಿಯೇ ಸದನದಲ್ಲಿ ಕಾಲಹರಣ ಮಾಡಿದ್ದಾರೆ. ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಮೈತ್ರಿ ಸರ್ಕಾರವೇನಾದ್ರೂ ಸುಪ್ರೀಂಕೋರ್ಟ್ ಮೊರೆ ಹೋದ್ರೆ ಛೀಮಾರಿ ಹಾಕುತ್ತದೆ ಎಂದು ಎಚ್ಚರಿಕೆ ನೀಡಿದರು.