– ಬೇಗ್ಗೂ ನಮಗೂ ಸಂಬಂಧವಿಲ್ಲ
ಬೆಂಗಳೂರು: ಸಿಎಂ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯ ಪ್ರೇರಿತವಾಗಿ ಕೆಲಸ ಮಾಡುತ್ತಿದ್ದಾರೆ. ಸಿಎಂ ಅವರದ್ದು ಒಂದು ರೀತಿ ಹಿಟ್ ರನ್ ಕೇಸ್. ಆಧಾರ ಇಲ್ಲದೇ ಆರೋಪ ಮಾಡುತ್ತಾರೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಕಿಡಿಕಾರಿದ್ದಾರೆ.
ರಮಡ ರೆಸಾರ್ಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ರಾತ್ರಿ ರೋಷನ್ ಬೇಗ್ ಜೊತೆ ಸಂತೋಷ್ ಇರಲಿಲ್ಲ, ಸಿಪಿ ಯೋಗಿಶ್ವರ್ ಅವರು ಕೂಡ ಇರಲಿಲ್ಲ. ಆದರೆ ಸಿಎಂ ಅವರು ಇವರಿಬ್ಬರು ಬೇಗ್ ಜೊತೆ ಇದ್ದರು ಎಂದು ಹೇಳುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಕಾಮಾಲೆ ಕಣ್ಣಿನಿಂದ ಬಿಜೆಪಿಯನ್ನು ನೋಡುತ್ತಿದ್ದಾರೆ. ರೋಷನ್ ಬೇಗ್ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಯಾವ ವಿಮಾನವನ್ನೂ ನಾವು ಬುಕ್ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
ನಮಗೂ ಸುಪ್ರೀಂಕೋರ್ಟ್ ನಲ್ಲಿ ಏನಾಗುತ್ತದೆ ಎಂಬ ಕುತೂಹಲ ಇದೆ. ನಾವು 105 ಜನ ಇದ್ದೇವೆ. ಪಕ್ಷೇತರರು ಸೇರಿ 107 ಜನ ಇದ್ದೇವೆ. ಅವರು ಇಂದು ರೆಸಾರ್ಟಿಗೆ ಬರುವ ಸಾಧ್ಯತೆ ಇದೆ. ಗುರುವಾರ ನಾವು 107 ಜನನೂ ಜೊತೆಯಲ್ಲೇ ವಿಧಾನಸೌಧಕ್ಕೆ ಹೋಗುತ್ತೇವೆ.
ಮಾದರಿಯಾಗಬೇಕು: ಇದೇ ವೇಳೆ ರೇಣುಕಾಚಾರ್ಯ ಮಾತನಾಡಿ, ಮುಖ್ಯಮಂತ್ರಿಗಳು ಅಧಿಕಾರ ಉಳಿಸಿಕೊಳ್ಳೋದಕ್ಕೆ ಶಾಸಕರನ್ನು ಬಂಧಿಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ಇದು ವಾಮಾಮಾರ್ಗ. ನೀವು ತನಿಖೆ ಮಾಡಿ ಬೇಡ ಎಂದು ಹೇಳುವುದಿಲ್ಲ. ಆದರೆ ಎಸ್ಐಟಿಯನ್ನು ಅಸ್ತ್ರವಾಗಿ ಮಾಡಿಕೊಳ್ಳಬೇಡಿ. ಗುರುವಾರ ಬಹುಮತ ಸಾಬೀತು ಪಡಿಸಲೆಂದೇ ಶಾಸಕರನ್ನ ಹಿಡಿದಿಟ್ಟುಕೊಳ್ಳುತ್ತಿದ್ದಾರೆ. ಒಂದು ರೀತಿ ಮುಖ್ಯಮಂತ್ರಿಗಳು ಕ್ರಿಮಿನಲ್ ಆಗಿದ್ದಾರೆ. ನಾಡಿಗೆ ಮಾದರಿಯಾಗಿರಬೇಕು. ಮನೆಗೆ ಹೋಗುವ ಸಂದರ್ಭದಲ್ಲಿ ಜನ ನಿಮಗೆ ಶಾಪ ಹಾಕಬಾರದು. ಜನ ಹಾದಿ ಬೀದಿಯಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಶಾಸಕರ ರಾಜೀನಾಮೆಯನ್ನ ಅಂಗೀಕಾರ ಮಾಡಿ ಎಂದು ಒತ್ತಾಯಿಸಿದರು.
ರೇವಣ್ಣ ಅವರೇ ನೀವು ದೇವಸ್ಥಾನ ಸುತ್ತುತ್ತಿದ್ದೀರಿ. ಅಧಿಕಾರಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದೀರಿ. ವಾಮಾಚಾರ ನಿಮ್ಮ ಅಧಿಕಾರ ಉಳಿಸಲ್ಲ ಶಾಸಕರಿಗೆ ಅನ್ಯಾಯವಾದಾಗ ಧ್ವನಿಯೆತ್ತುತ್ತೇವೆ. ಸುಧಾಕರ್ ಮೇಲೆ ಹಲ್ಲೆಯಾದಗಲೂ ನಾವು ಅವರ ಪರವಾಗಿದ್ದೆವು ಎಂದು ತಿಳಿಸಿದರು.