ಕೋಲಾರ: ಮೀನುಗಾರಿಕಾ ಕಚೇರಿಯಲ್ಲಿ ಅಧಿಕಾರಿಗಳು ಮದ್ಯಪಾನ ಪಾರ್ಟಿ ಮಾಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬೂದಿಕೋಟೆಯ ಮಾರ್ಕಂಡೇಯ ಅಚ್ಚುಕಟ್ಟು ಪ್ರದೇಶದಲ್ಲಿರುವ ಮಹಾರಾಜರ ಕಾಲದ ಮೀನುಮರಿ ಸಾಕಾಣಿಕಾ ಕೇಂದ್ರದಲ್ಲಿ ಅಧಿಕಾರಿಗಳು ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ.
ಉಪನಿರ್ದೇಶಕ ಮಹೇಶ್ ಹಾಗೂ ಸಹಾಯಕ ನಿರ್ದೇಶಕ ಪೆದ್ದಣ್ಣ ಹಾಗೂ ಕೆಲಸ ಅಧಿಕಾರಿ ಸಿಬ್ಬಂದಿ ಕಚೇರಿಯಲ್ಲಿ, ಗುಂಡು ತುಂಡು ಪಾರ್ಟಿ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಪನಿರ್ದೇಶಕ ಮಹೇಶ್ ಇತ್ತೀಚೆಗೆ ಪದೇ ಪದೇ ಮೀನು ಮರಿ ಸಾಕಾಣಿಕಾ ಕೇಂದ್ರದಲ್ಲಿ ಕುಡಿದು ಅಲ್ಲಿನ ಸಿಬ್ಬಂದಿಯನ್ನು ವಿನಾಕಾರಣ ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುವುದು ಹೆಚ್ಚಾಗಿದ್ದು, ಇದರಿಂದ ಬೇಸತ್ತಿರುವ ಸಿಬ್ಬಂದಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡುವ ಮೂಲಕ ಸರ್ಕಾರಿ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡಿರುವ ಅಧಿಕಾರಿಯ ವಿರುದ್ಧ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.