ಮುಂಬೈ: ವಿಶ್ವಕಪ್ ಟೂರ್ನಿಯ ಬಳಿಕ ಟೀಂ ಇಂಡಿಯಾ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಏಕದಿನ ಪಂದ್ಯಗಳಿಗೆ ವಿಂಡೀಸ್ ಟೂರ್ನಿಯಲ್ಲಿ ವಿಶ್ರಾಂತಿ ಪಡೆಯಲಿರುವ ಇಬ್ಬರು ಆಟಗಾರರು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಕೊಹ್ಲಿ ಹಾಗೂ ಬುಮ್ರಾ ಮೇಲಿನ ಕೆಲಸದ ಒತ್ತಡವನ್ನು ನಿಭಾಯಿಸಲು ಬಿಸಿಸಿಐ ಈ ನಿರ್ಣಯ ಕೈಗೊಂಡಿದೆ. ವಿರಾಟ್ ಹಾಗೂ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದಲೂ ನಿರಂತರವಾಗಿ ಟೀಂ ಇಂಡಿಯಾ ಪರ ಆಡುತ್ತಿದ್ದಾರೆ. ಕೇವಲ ಈ ಇಬ್ಬರು ಆಟಗಾರರು ಮಾತ್ರವಲ್ಲದೇ ಕೆಲ ಆಟಗಾರರಿಗೂ ವಿಶ್ರಾಂತಿ ನೀಡುವ ಸಾಧ್ಯತೆ ಇರುವುದಾಗಿ ಸಮಿತಿ ತಿಳಿಸಿದೆ.
ಟೀಂ ಇಂಡಿಯಾ ಟೂರ್ನಿಯಲ್ಲಿ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಗೆದ್ದು 9 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಬಹುತೇಕ ಸೆಮಿ ಫೈನಲ್ ಪ್ರವೇಶಸುವ ಹಾದಿ ಸುಗಮಗೊಳಿಸಿದೆ. ತಂಡ ಫೈನಲ್ ಪ್ರವೇಶ ಪಡೆದರೆ ವಿಶ್ವಕಪ್ ಟೂರ್ನಿಯ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಚಿಂತನೆಯನ್ನು ಸಮಿತಿ ಕೈಗೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಆಗಸ್ಟ್ 17 ರಿಂದ 19ರವೆಗೂ ನಡೆಯುವ ಅಭ್ಯಾಸ ಪಂದ್ಯಕ್ಕೆ ವಿಶ್ರಾಂತಿ ಪಡೆಯುವ ಆಟಗಾರರು ತಂಡವನ್ನು ಕೂಡಿಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆ.22 ರಿಂದ ಆರಂಭವಾಗಲಿದ್ದು, ಅನುಭವಿಗಳ ಸ್ಥಾನದಲ್ಲಿ ಯುವ ಆಟಗಾರರು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಪ್ರಮುಖವಾಗಿ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್, ರಾಹುಲ್ ಚಹರ್, ಸಂಜು ಸ್ಯಾಮ್ಸನ್ ರಂತಹ ಆಟಗಾರರು ಅವಕಾಶ ಪಡೆಯುವ ಸಾಧ್ಯತೆ ಇದೆ. ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಸ್ಥಾನ ಪಡೆಯಲು ಮಯಾಂಕ್, ಪೃಥ್ವಿ ಶಾ, ಹನುಮ ವಿಹಾರಿ ರೇಸ್ ನಲ್ಲಿದ್ದಾರೆ.