ಹಾವೇರಿ: ನಾನು ಕಾಂಗ್ರೆಸ್ ಶಾಸಕ ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ಆದರ ಬಗ್ಗೆ ಬಿಜೆಪಿಯವರನ್ನು ಕೇಳಿ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಈ ಬಾರಿ ನಡೆಯೋ ಮಂತ್ರಿ ಮಂಡಲದ ವಿಸ್ತರಣೆಯ ವೇಳೆ ಸಚಿವ ಸ್ಥಾನ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಡಿಸಿಎಂ ಪರಮೇಶ್ವರ್ ಈ ಬಗ್ಗೆ ಸಂಪೂರ್ಣ ಭರವಸೆ ನೀಡಿದ್ದಾರೆ. ಮಂತ್ರಿ ಸ್ಥಾನ ಸಿಗದೆ ಇರುವ ಅಸಮಾಧಾನಕ್ಕೆ ಯಾವಾಗ ತೆರೆ ಬೀಳುತ್ತೆ ಅನ್ನೋದನ್ನು ಕಾದು ನೋಡಿ. ಎಲ್ಲವನ್ನೂ ಕಾಲವೇ ನಿರ್ಧರಿಸಲಿದೆ ಎಂದರು.
ಇದೇ ವೇಳೆ ಸಿ.ಎಲ್.ಪಿ ಮೀಟಿಂಗ್ ವೇಳೆ ಅರ್ಧಕ್ಕೆ ಎದ್ದು ಬಂದಿದ್ದರ ಬಗ್ಗೆ ಕೇಳಿದಾಗ, ನನಗೆ ಖಾಸಗಿ ಕಾರ್ಯಕ್ರಮ ಇದ್ದರಿಂದ ಬೇಗ ಹೋದೆ. ಅದಕ್ಕೆ ಬೇರೆ ಯಾವುದೇ ಅರ್ಥ ಬೇಡ. ನಾನು ಸಿ.ಎಲ್.ಪಿ ಮೀಟಿಂಗ್ ನಲ್ಲಿ ಮಂತ್ರಿ ಸ್ಥಾನಕ್ಕೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಕುಮಾರಸ್ವಾಮಿಗೆ ಸ್ಪೀಕರ್ ರಮೇಶ ಕುಮಾರ್ ಪತ್ರ ಬರೆದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ಅಭಿಪ್ರಾಯ. ಕುಮಾರಸ್ವಾಮಿ ಆಡಳಿತ ತೃಪ್ತಿ ತಂದಿದೆ ಚೆನ್ನಾಗಿ ಆಡಳಿತ ನಡೆಸಿದ್ದಾರೆ. ಇದರ ಮಧ್ಯದಲ್ಲಿ ಲೋಕಸಭಾ ಚುನಾವಣೆ, ಬರಗಾಲ ಹಾಗೂ ಸ್ವಲ್ಪ ಸಮಸ್ಯೆ ಬಂದಿದೆ ಎಲ್ಲವನ್ನು ನಿಭಾಸಿಕೊಂಡು ಹೋಗುತ್ತಿದ್ದಾರೆ. ನನಗೆ ಸಮ್ಮಿಶ್ರ ಸರ್ಕಾರ 5 ವರ್ಷ ಪೂರೈಸುತ್ತದೆ ಅನ್ನೋ ಭರವಸೆಯವನ್ನು ವ್ಯಕ್ತಪಡಿಸಿದರು.