ಹುಬ್ಬಳ್ಳಿ: ಜೆಡಿಎಸ್ ಹಾಗೂ ಕಾಂಗ್ರೆಸ್ಸಿನವರು ಒಗ್ಗಟ್ಟಿನಿಂದ ಸರ್ಕಾರ ನಡೆಸಿದರೆ ಒಳ್ಳೆಯದು. ಈಗಲೂ ಕಾಲ ಮಿಂಚಿಲ್ಲ ರಮೇಶ ಜಾರಕಿಹೊಳಿಯನ್ನು ಕರೆದು ಮಾತನಾಡಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿಯಲ್ಲಿರುವ ಗೊಂದಲಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಸವಾಲಾಗಿ ಸ್ವೀಕರಿಸಿಕೊಂಡು ಬಗೆಹರಿಸಲಿ. ಕೆಲವು ಸಚಿವರು ರಾಜೀನಾಮೆಗೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಈ ಮೂಲಕ ಹೊಸಬರಿಗೆ ಅವಕಾಶ ಮಾಡಿಕೊಡಲಿ. ಇಂತಹ ಕ್ಲಿಷ್ಟಕರವಾದ ಸ್ಥಿತಿಯಲ್ಲಿ ಸರ್ಕಾರ ನಡೆಯಬೇಕಾದರೆ ಕೆಲವರು ತ್ಯಾಗ ಮಾಡಲೇಬೇಕು. ಇಲ್ಲದಿದ್ದರೆ ಕಷ್ಟ. ಈಗಲೂ ಕಾಲ ಮಿಂಚಿಲ್ಲ ರಮೇಶ ಜಾರಕಿಹೋಳಿಯನ್ನು ಕರೆದು ಮಾತನಾಡಿ ಎಂದು ಮೈತ್ರಿ ನಾಯಕರಿಗೆ ಕಿವಿ ಮಾತು ಹೇಳಿದರು.
ಎಲ್ಲರು ಮಂತ್ರಿ ಆಗಬೇಕು ಎನ್ನುವವರೇ, ಇದು ಸಾಧ್ಯವಿಲ್ಲ. ಮೈತ್ರಿಯಲ್ಲಿ ಹೆಚ್ಚುಕಡಿಮೆ ಆಗಿದೆ, ಭಿನ್ನಾಭಿಪ್ರಾಯ ಮರೆತು ಎಲ್ಲರು ಒಗ್ಗಟ್ಟಾಗಬೇಕು. ಮೈತ್ರಿಯಲ್ಲಿ ಅಪಸ್ವರ ಬಾರದಂತೆ ನೋಡಿಕೊಳ್ಳಬೇಕು. ನಾನು ಸಹ ಮಂತ್ರಿಯಾಗಿಲ್ಲ, ನಾನು ಎಲ್ಲಾ ತ್ಯಾಗಕ್ಕೂ ಸಿದ್ಧ. ಸರ್ಕಾರ ಒಳ್ಳೆಯ ರೀತಿಯಲ್ಲಿ ನಡೆಯಬೇಕು, ಅದಕ್ಕಾಗಿ ಉಳಿದವರು ಕೂಡ ತ್ಯಾಗಕ್ಕೆ ಮುಂದಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ರಚನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಸರ್ಕಾರ ರಚಿಸುತ್ತಾರೆ ಎನ್ನುವ ನಂಬಿಕೆ ನನಗಿಲ್ಲ. ನನಗೆ ಬಂದ ಮಾಹಿತಿಯ ಪ್ರಕಾರ, ಬಿಜೆಪಿಯವರು ಅತೃಪ್ತ ಶಾಸಕರಿಂದ ರಾಜೀನಾಮೆ ಕೊಡಿಸಿ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿ ತರಲು ಮುಂದಾಗಿದ್ದಾರೆ ಎಂದರು.
ಚುನಾವಣೆಗೆ ಹೋಗಲು ಬಿಜೆಪಿಯವರು ಸಿದ್ಧತೆ ನಡೆಸಿದ್ದಾರೆ. ಲೋಕಸಭೆಯಲ್ಲಿ ಸಿಕ್ಕ ಗೇಲುವಿನಿಂದ ವಿಧಾನ ಸಭೆ ಚುನಾವಣೆಗೆ ಹೋದರೆ 150 ಸ್ಥಾನಗಳನ್ನ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಾರೆಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.