ನವದೆಹಲಿ: ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದು ನಾಮಪತ್ರ ತಿರಸ್ಕೃತಗೊಂಡಿರುವ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರದ್ದು ಎನ್ನಲಾದ ವಿವಾದಿತ ವಿಡಿಯೋ ಈಗ ವೈರಲ್ ಆಗಿದೆ.
50 ಕೋಟಿ ಕೊಟ್ಟರೆ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ತೇಜ್ ಬಹುದ್ದೂರ್ ಗೆಳೆಯನ ಮುಂದೆ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆದರೆ ವಿಡಿಯೋ ಎರಡು ವರ್ಷದ ಹಳೆಯದ್ದಾಗಿದ್ದು, ವಿಡಿಯೋದಲ್ಲಿರುವುದು ನಾನೇ ಎಂದು ತೇಜ್ ಬಹುದ್ದೂರ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ರಿಲೀಸ್ ಹಿಂದೆ ಯಾರದ್ದೋ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಜಿವಿಎಲ್ ನರಸಿಂಹ ರಾವ್, ತೇಜ್ ಬಹದ್ದೂರ್ ಹೇಳಿಕೆಯಿಂದ ಭಯಗೊಂಡಿದ್ದೇವೆ. ತೇಜ್ಬಹದ್ದೂರ್ನಂತಹ ಸಮಾಜದ್ರೋಹಿಗಳ ಹಿಂದೆ ಇರೋದು ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧ ಸ್ಪರ್ಧಿಸಿದ್ದ ಮೈತ್ರಿ ಅಭ್ಯರ್ಥಿ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ
ವಿಡಿಯೋದಲ್ಲೇನಿದೆ?:
ತನ್ನ ಗೆಳೆಯರೊಂದಿಗೆ ಕುಳಿತುಕೊಂಡು ಮದ್ಯಪಾನ ಮಾಡುತ್ತಾ ತನ್ನ ಸ್ನೇಹಿತನೊಬ್ಬನ ಜೊತೆ ತೇಜ್ ಬಹದ್ದೂರ್ ಯಾದವ್ ನಡೆಸಿರುವ ಸಂಭಾಷಣೆ ಈ ರೀತಿ ಇದೆ.
ತೇಜ್ ಬಹದ್ದೂರ್: ನನಗೆ ಹಣ ಕೊಟ್ರೆ ಮೋದಿಯನ್ನು ಕೊಲ್ಲುತ್ತೇನೆ.
ಸ್ನೇಹಿತ: ಮೋದಿಯನ್ನು ಕೊಲ್ಲಲು ಆಗುತ್ತಾ..?
ತೇಜ್ ಬಹದ್ದೂರ್: ನನಗೆ 50 ಕೋಟಿ ಕೊಡು..
ಸ್ನೇಹಿತ: 50 ಕೋಟಿನಾ..? ನಮ್ ದೇಶದಲ್ಲಿ ಅಷ್ಟೊಂದು ಹಣ ಸಿಗೋದು ಬಹಳ ಕಷ್ಟ.. ಅದೇ ಪಾಕಿಸ್ತಾನದಲ್ಲಾದ್ರೆ 50 ಕೋಟಿ ಕೊಡ್ತಾರೆ
ತೇಜ್ ಬಹದ್ದೂರ್: ಇಲ್ಲ, ನಾನು ಅಂತಹ ಕೆಲಸ ಮಾಡಲ್ಲ. ನಾನು ನನ್ನ ದೇಶಕ್ಕೆ ನಿಷ್ಠ..
ಸ್ನೇಹಿತ: ಆದರೆ, ಮೋದಿ ಭಾರತದ ಪ್ರಧಾನಿ..
ತೇಜ್ ಬಹದ್ದೂರ್: ಇಲ್ಲ, ನನ್ನ ದೇಶಕ್ಕೆ ನಾನು ವಿಶ್ವಾಸದ್ರೋಹ ಬಗೆಯಲ್ಲ. ಹಣ ನನಗೆ ಒಂದು ವಿಷಯವೇ ಅಲ್ಲ.
ಸ್ನೇಹಿತ: ನಾನು ಇದನ್ನು ಯಾಕೆ ಕೇಳಿದೆ ಅಂದ್ರೆ, 50 ಕೋಟಿ ಕೊಟ್ರೆ ಮೋದಿಯವರನ್ನು ಕೊಲ್ಲುವುದಾಗಿ ನೀನೇ ಹೇಳುತ್ತಾ ಇದ್ದೀಯಲ್ಲ ಅದಕ್ಕೆ.
ತೇಜ್ ಬಹದ್ದೂರ್ : ದೇಶದ ಬಗ್ಗೆ ನನಗಿರುವ ನಿಷ್ಠೆ ಅಚಲ. ಹಾಗಾಗಿ ನಾನು ಭಾರತೀಯರು ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇನೆ.