– ಮಂಗಳೂರು, ಬೆಂಗಳೂರಿನಲ್ಲಿ ನಮೋ ಕಹಳೆ
– ಕೋಲಾರ, ಚಿತ್ರದುರ್ಗ, ಮಂಡ್ಯದಲ್ಲಿ ರಾಗಾ ಮತಬೇಟೆ
ಬೆಂಗಳೂರು: ಇಂದು ರಾಜ್ಯದಲ್ಲಿ ಪ್ರಧಾನಿ ಮೋದಿ ವರ್ಸಸ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮರ. ರಾಹುಲ್ ಗಾಂಧಿ ಮತ್ತು ಮೋದಿ ಇಂದು ರಾಜ್ಯದಲ್ಲಿ ದಂಡಯಾತ್ರೆ ಹೊರಟಿದ್ದಾರೆ.
ಶುಕ್ರವಾರ ಕೊಪ್ಪಳದಲ್ಲಿ ಗುಡುಗಿದ್ದ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ರ್ಯಾಲಿಗೆ ಭರ್ಜರಿ ಸಿದ್ಧತೆ ನಡೆದಿದೆ. ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಸಂಜೆ 4 ಗಂಟೆಗೆ ಮೈದಾನ ತಲುಪಲಿದ್ದಾರೆ. ಈ ಹಿನ್ನೆಲೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಗಳೂರು ರ್ಯಾಲಿ ಬಳಿಕ ಮೋದಿ ಬೆಂಗಳೂರು ಅರಮನೆ ಮೈದಾನದಲ್ಲಿ ಸಂಜೆ ನಡೆಯಲಿರುವ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ.
ಇಂದು ಕೋಲಾರ ಜಿಲ್ಲೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪರಿವರ್ತನಾ ಬಹಿರಂಗ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಂಡ್ಯಕ್ಕೆ ತೆರಳಿ ನಿಖಿಲ್ ಕುಮಾರಸ್ವಾಮಿ ಪರ ಕೆ.ಆರ್.ನಗರದಲ್ಲಿ ರಾಹುಲ್ ಮತಯಾಚಿಸಲಿದ್ದಾರೆ.