ಮಂಡ್ಯ: ಅವರು ಇನ್ನೊಂದು ಮುಖ ತೋರಿಸಿತ್ತೀನಿ ಅಂದಿದ್ದಾರೆ. ಅವರ ಇನ್ನೊಂದು ಮುಖ ನಾವು ನೋಡಿದ್ದೀವಿ. ಮಂಡ್ಯ ಜನರಿಗೆ ಸ್ವಲ್ಪ ಬೇಗ ತೋರಿಸಲಿ ಎಂದು ಸಿಎಂ ಕುಮಾರಸ್ವಾಮಿ ಸುಮಲತಾ ಅವರನ್ನು ಲೇವಡಿ ಮಾಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸುಮಲತಾ ಅವರ ಬಗ್ಗೆ ನಾನೇಕೆ ತಲೆಕೆಡಿಸಿಕೊಳ್ಳಲ್ಲಿ. ಯಾರು-ಯಾರ ಪರವಾದರೂ ಪ್ರಚಾರ ಮಾಡಲಿ. ಮಂಡ್ಯ ಜಿಲ್ಲೆಯ ಜನತೆ ಜೆಡಿಎಸ್ ಅಭ್ಯರ್ಥಿ ಪರವಾಗಿದ್ದಾರೆ. ನಾನು ಆ ಕಡೆ ಗುರಿಟ್ಟಿದ್ದೇನೆ. ಹೀಗಾಗಿ ಯಾರು ಯಾರ ಪರವಾದರೂ ಮಾತನಾಡಿಕೊಳ್ಳಲಿ. ಅದನ್ನು ಕಟ್ಟಿಕೊಂಡು ನಾನೇನು ಮಾಡಲಿ ಎಂದು ಪ್ರಧಾನಿ ಮೋದಿ ಅವರು ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದರು.
ನನ್ನ ಸ್ಥಳೀಯ ನಾಯಕರು ನೋಡಿಕೊಂಡು ಉತ್ತರಿಸುತ್ತಾರೆ. ನನಗೆ ಅದರ ಹಣೆಬರಹ ಕಟ್ಟಿಕೊಂಡು ನಾನೇನು ಮಾಡಲಿ. ಅವರು ಇನ್ನೊಂದು ಮುಖ ತೋರಿಸಿತ್ತೀನಿ ಅಂದಿದ್ದಾರೆ. ನಾವು ಅವರ ಇನ್ನೊಂದು ಮುಖ ನೋಡಿದ್ದೀವಿ. ಮಂಡ್ಯ ಜನರಿಗೆ ಸ್ವಲ್ಪ ಬೇಗ ತೋರಿಸಲಿ ಎಂದು ಸುಮಲತಾ ಅವರು ಜೆಡಿಎಸ್ ವಿರುದ್ಧ ಮಾಡಿದ್ದ ಆರೋಪಕ್ಕೆ ಸಿಎಂ ಸಿಡಿಮಿಡಿಗೊಂಡರು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕೆಂದು ಮಂಡ್ಯದ ಜನರು ಒಲವು ವ್ಯಕ್ತಪಡಿಸಿದ್ದಾರೆಂಬ ಮಾಹಿತಿ ನನ್ನ ಬಳಿಯಿದೆ. ಸದ್ಯಕ್ಕೆ ಬೇರೆ ಬೇರೆ ಕ್ಷೇತ್ರದಲ್ಲೂ ಪ್ರಚಾರ ಮಾಡುವುದರಿಂದ ಸಮಯ ಸಿಕ್ಕಾಗ ಮಂಡ್ಯಕ್ಕೆ ಬಂದು ಪ್ರಚಾರ ಮಾಡುತ್ತೀನಿ ಎಂದು ನಿಖಿಲ್ ಗೆಲುವು ಖಚಿತವೆಂದು ಸಿಎಂ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.