ಮಂಡ್ಯ: ನಾನು ದಬ್ಬಾಳಿಕೆ, ಬೆದರಿಕೆಗೆ ಬಗ್ಗಲ್ಲ ಎಂದು ಹೇಳುವ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಸುಮಲತಾ ತಮ್ಮ ಫೇಸ್ಬುಕ್ನಲ್ಲಿ, “ನಾನು ಸೌಮ್ಯವಾಗಿ ಪ್ರೀತಿಯಿಂದ ಭಾರತೀಯ ಪ್ರಜಾಪ್ರಭುತ್ವದ ಘನತೆಯನ್ನು ಗಾಂಭೀರ್ಯವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ. ನಾನು ದಬ್ಬಾಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗದ ಜಗ್ಗದ ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ. ಅತ್ಯಂತ ಉದಾತ್ತವಾದ ಆದರ್ಶಗಳನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ನಡೆಸುವ ಮನಸ್ಥಿತಿಯಿಂದ ಚುನಾವಣಾ ಕಣದಲ್ಲಿದ್ದೇನೆ. ಮಂಡ್ಯದ ನನ್ನ ಪ್ರೀತಿಯ ಜನರು ಇದನ್ನು ಸ್ವೀಕರಿಸುತ್ತಾರೆ ಎಂದು ನನ್ನ ಬಲವಾದ ನಂಬಿಕೆ ಇದೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಸುಮಲತಾ, ಇಂದು ನಾನು ಶ್ರೀರಂಗಪಟ್ಟಣಕ್ಕೆ ಬರುತ್ತಿದ್ದೇನೆ ನನ್ನ ಶಕ್ತಿ ಮತ್ತು ಆತ್ಮಸ್ಥೈರ್ಯ ಪ್ರತಿಯೊಂದು ನೀವುಗಳೇ. ಶ್ರೀರಂಗಪಟ್ಟಣದಲ್ಲಿ ಸಾಧ್ಯವಾದಷ್ಟು ಜನರನ್ನು ಭೇಟಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇಂದು ಮಂಡ್ಯದಲ್ಲಿ ಸುಮಲತಾ ಅಬ್ಬರದ ಪ್ರಚಾರ ಸಭೆ ನಡೆಸುತ್ತಿದ್ದಾರೆ. ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಲತಾ ಪ್ರಚಾರ ನಡೆಸುತ್ತಿದ್ದಾರೆ. ಕೆಆರ್ಎಸ್, ಬೆಳಗೋಳ, ಚಂದಗಾಲು, ಮಹದೇವಪುರ ಭಾಗದಲ್ಲಿ ಪ್ರಚಾರ ಸಭೆ ಹಾಗೂ ರೋಡ್ ಶೋ ನಡೆಸುತ್ತಿದ್ದು, ಸುಮಾಗೆ ಪುತ್ರ ಅಭಿಷೇಕ್ ಹಾಗೂ ಸ್ಥಳೀಯ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದ್ದಾರೆ.