-ಬೆಂಗಳೂರು ಅಭಿವೃದ್ಧಿಯ ಕನಸು ಕಂಡಿದ್ರು ರಮೀಳಾ ಉಮಾಶಂಕರ್
ಬೆಂಗಳೂರು: ಸೆಪ್ಟೆಂಬರ್ 28ರಂದು ಉಪ ಮೇಯರ್ ಆಗಿ ಆಯ್ಕೆಯಾಗಿದ್ದ ಜೆಡಿಎಸ್ ನ ರಮೀಳಾ ಉಮಾಶಂಕರ್ ವಿಧಿವಶರಾಗಿದ್ದಾರೆ. ಉಪ ಮೇಯರ್ ಆಯ್ಕೆಯಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿ ತಮ್ಮ ಕೆಲಸದ ಕಾರ್ಯವೈಖರಿ ಮತ್ತು ಗುರಿ ಏನು ಎಂಬುದನ್ನು ತಿಳಿಸಿದ್ದರು.
ರಮೀಳಾ ಉಮಾಶಂಕರ್ ಹೇಳಿದ್ದು ಹೀಗೆ:
ಪಕ್ಷದ ನಾಯಕರಾದ ಹೆಚ್.ಡಿ.ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಆಶೀರ್ವಾದ ಮಾಡಿ ನನ್ನನ್ನು ಕಳುಹಿಸಿದ್ದರು. ಹಾಗಾಗಿ ನಾನು ಉಪ ಮೇಯರ್ ಆಗಿ ಆಯ್ಕೆಯಾಗಿದ್ದೇನೆ. ಚುನಾವಣೆ ಸಂದರ್ಭದಲ್ಲಿ ಸ್ವಲ್ಪ ಮಾತಿನ ಚಕಮಕಿ ಏರ್ಪಟ್ಟಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮುಂದಿನ ಒಂದು ವರ್ಷದ ಅವಧಿಯಲ್ಲಿ ಗುರಿ ಇಟ್ಟುಕೊಂಡು ಕೆಲಸ ಮಾಡಲು ಮುಂದಾಗಲಿದ್ದೇವೆ. ಮೇಯರ್ ಮತ್ತು ನಾನು ನಗರದಲ್ಲಿನ ಕಸ ವಿಲೇವಾರಿ ಮತ್ತು ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರಯತ್ನ ಮಾಡುತ್ತೇವೆ. ನಮ್ಮ ಕೆಲಸಕ್ಕೆ ನಗರದ ಜನತೆಯ ಸಹಕಾರ ಖಂಡಿತ ನಮಗೆ ಬೇಕಿದೆ. ಮೇಯರ್ ಗಂಗಾಬಿಕೆ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬರದಂತೆ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.
ಎಲ್ಲೋ ಒಂದು ಕಡೆ ಚುನಾವಣೆ ದಿನದಂದು ಗಲಭೆಗಳನ್ನು ನೋಡಿದಾಗ ಏನಾಗುತ್ತೋ ಎಂಬ ಗೊಂದಲವಿತ್ತು. ಮೇಯರ್ ಪಟ್ಟ ನನಗೆ ಸಿಗಬೇಕೆಂದು ಇದ್ದಿದ್ದರೆ ಸಿಗುತ್ತೆ ಅಂತಾ ಗೊತ್ತಿತ್ತು. ಮೇಯರ್ ಆಗಿ ಆಯ್ಕೆಗೊಂಡಿರುವುದು ಸಂತೋಷವನ್ನು ತಂದಿದೆ. ಮುಂದಿನ ದಿನಗಳಲ್ಲಿ ಕೆಳಮಟ್ಟದಲ್ಲಿಯೂ ಸಭೆಗಳನ್ನು ನಡೆಸುತ್ತೇನೆ. ನಗರದ ಜನತೆ ನನ್ನ ಬಳಿ ನೇರವಾಗಿ ಬಂದು ದೂರು ದಾಖಲಿಸಬಹುದು ಎಂದು ಮೇಯರ್ ಗಂಗಾಬಿಕೆ ಅವರು ಸಹ ಹೇಳಿದ್ದರು.
ಕಾವೇರಿಪುರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದ ರಮೀಳಾ ಉಮಾಶಂಕರ್, ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಿತ್ತನಹಳ್ಳಿಯಲ್ಲಿರುವ ಹೌಸಿಂಗ್ ಬೋರ್ಡ್ನಲ್ಲಿ ರಮೀಳಾ ಉಮಾಶಂಕರ್ ಅಂತ್ಯಕ್ರಿಯೆ ನಡೆಯಲಿದ್ದು, ಸದ್ಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಮೀಳಾ ಉಮಾಶಂಕರ್ ನಿಧನ ಹಿನ್ನೆಲೆ ಬಿಬಿಎಂಪಿಗೆ ರಜೆ ಘೋಷಣೆ ಮಾಡಲಾಗಿದೆ.
ರಮೀಳಾ ಉಮಾಶಂಕರ್ ಕಳೆದ ಒಂದು ವಾರದ ಹಿಂದಷ್ಟೇ ಜೆಡಿಎಸ್ ವತಿಯಿಂದ ಉಪಮೇಯರ್ ಆಗಿದ್ದರು. ಬೆಂಗಳೂರು ಅಭಿವೃದ್ದಿ ಯ ಬಗ್ಗೆ ಸಾಕಷ್ಟು ಕನಸು ಕಂಡಿದ್ದ ರಮೀಳಾ ಅವರಿಗೆ ತಡರಾತ್ರಿ ರಾತ್ರಿ ಹೃದಯಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ. ಭಗವಂತ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಅಂತ ಶಾಸಕ ಗೋಪಾಲಯ್ಯ ಹೇಳಿದ್ದಾರೆ.
ಇತ್ತ ಸಿಎಂ ಕುಮಾರಸ್ವಾಮಿ, ಮಾಜಿ ಮೇಯರ್ ಪದ್ಮಾವತಿ, ಸಂಪತ್ ರಾಜ್ ಸೇರಿದಂತೆ ಹಲವು ಗಣ್ಯರು ರಮೀಳಾರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv