ಮಂಡ್ಯ: ಅಪ್ಪನೇ ಮಗನನ್ನು ಬರ್ಬರವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕೋಣಹಳ್ಳಿತಿಟ್ಟು ಗ್ರಾಮದಲ್ಲಿ ನಡೆದಿದೆ.
ಕೋಣಹಳ್ಳಿತಿಟ್ಟು ಗ್ರಾಮದ ವಾಸು (26) ಕೊಲೆಯಾದ ದುರ್ದೈವಿ ಮಗ. ವಾಸುವಿನ ತಾಯಿ ತೀರಿಕೊಂಡಿದ್ದು, ಮನೆಯಲ್ಲಿ ತಂದೆ ಕೃಷ್ಣಪ್ಪರೊಂದಿಗೆ ವಾಸು ವಾಸವಾಗಿದ್ದನು. ಮಂಗಳವಾರ ರಾತ್ರಿ ವಾಸು ಮತ್ತು ತಂದೆ ಕೃಷ್ಣಪ್ಪರ ನಡುವೆ ಗಲಾಟೆಯಾಗಿದೆ. ಇದರಿಂದ ಸಿಟ್ಟಿಗೆದ್ದ ಕೃಷ್ಣಪ್ಪ ಮಗನ ತಲೆಗೆ ಸಲಾಕೆಯಿಂದ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವಾಸು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ವಾಸುವಿನ ತಂದೆಯನ್ನು ವಿಚಾರಿಸಿದಾಗ, ಕೃಷ್ಣಪ್ಪನು ಮಗನನ್ನು ಯಾರೋ ಕೊಂದು ಮೃತದೇಹವನ್ನು ಮನೆಯ ಮುಂದೆ ಹಾಕಿ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಕೃಷ್ಣಪ್ಪನನ್ನು ವಿಚಾರಣೆಗೊಳಪಡಿಸಿದಾಗ, ತಾನೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಸಂಬಂಧ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv