ಬೆಂಗಳೂರು: ಜನ್ಮ ನೀಡಿದ ಮರಿಗಳನ್ನೇ ತಿನ್ನುವ ಚಾಳಿ ಹೊಂದಿದ್ದ ಹೆಣ್ಣು ಸಿಂಹದಿಂದ ಎರಡು ಮರಿ ಸಿಂಹಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗಳು ಬೇರ್ಪಡಿಸಿ ಮರು ಜೀವ ನೀಡಿದ್ದಾರೆ.
ಉದ್ಯಾನವನದಲ್ಲಿರುವ `ಸನಾ’ ಎಂಬ ಎಂಟು ವರ್ಷದ ಸಿಂಹ ಏಪ್ರಿಲ್ 25 ರಂದು ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ ಜನ್ಮ ನೀಡಿದ ಬಳಿಕ ತಾಯಿ ಸಿಂಹವು ಮರಿಯೊಂದನ್ನು ತಿಂದು ಹಾಕಿತ್ತು. ಇದನ್ನು ಅರಿತ ಸಿಬ್ಬಂದಿ ತಾಯಿ ಸಿಂಹದಿಂದ ಮೂರು ಮರಿಗಳನ್ನು ಬೇರ್ಪಡಿಸಿದ್ದಾರೆ. ಆದರೆ ಒಂದು ಮರಿ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಮೃತಪಟ್ಟಿ ಹೋಗಿದೆ. ಉಳಿದೆರಡು ಮರಿಗಳನ್ನು ಸಿಬ್ಬಂದಿ ಹಾಗೂ ವೈದ್ಯರು ಆರೈಕೆ ಮಾಡುತ್ತಿದ್ದಾರೆ.
ಪ್ರಾಣಿಗಳಲ್ಲಿ ಮರಿ ಬದುಕುಳಿಯಲು ತಾಯಿ ಹಾಲು ಅತ್ಯಗತ್ಯವಾಗಿದ್ದು, ತಾಯಿ ಹಾಲಿನಲ್ಲಿ ಅಪಾರವಾದ ಪೌಷ್ಟಿಕಾಂಶದಿಂದಾಗಿ ಮರಿಗಳು ಸದೃಢವಾಗಲು ನೆರವಾಗುವುದಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತವೆ. ಮರಿಗಳಿಗೆ ಬೇರೆ ಮೂಲದಿಂದ ಪೌಷ್ಟಿಕಾಂಶ ಒದಗಿಸಿದರೂ ಬದುಕುವುದು ಕಷ್ಟ, ರೋಗಬಾಧೆಗಳು ಬೇಗವಾಗಿ ತಗುಲುತ್ತವೆ. ಈ ಹಿನ್ನೆಲೆಯಲ್ಲಿ ಮರಿಗಳನ್ನು ಹೇಗಾದರೂ ರಕ್ಷಣೆ ಮಾಡಲೇಬೇಕೆಂದು ಪಣತೊಟ್ಟಿರುವ ಉದ್ಯಾನವನದ ವೈದ್ಯರಾದ ಡಾ.ಉಮಾಶಂಕರ್ ರವರ ನೇತೃತ್ವದ ತಂಡವು ಮೂರು ಮೇಕೆಗಳನ್ನು ಖರೀದಿಸಿ, ಅವುಗಳ ಹಾಲನ್ನು ಸಿಂಹದ ಮರಿಗಳಿಗೆ ನೀಡುತ್ತಿದ್ದಾರೆ.
ಕೆಲವು ಪ್ರಾಣಿಗಳು ಹುಟ್ಟಿದ ಮರಿಗಳನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡಿರುತ್ತವೆ. ಆದ್ದರಿಂದ ಇದನ್ನು ಕೂಡಲೇ ಪತ್ತೆಹಚ್ಚಿ ತಾಯಿ ಪ್ರಾಣಿಗಳಿಂದ ಮರಿಗಳನ್ನು ಬೇರೆ ಮಾಡಬೇಕಾಗಿರುವುದ ಅವಶ್ಯಕವಾಗಿರುತ್ತದೆ ಎಂದು ಪಶು ವೈದ್ಯರಾದ ಮಂಜುನಾಥ್ರವರು ತಿಳಿಸಿದ್ದಾರೆ.
ತಾಯಿಯಿಂದ ಬೇರ್ಪಡಿಸಿ ಮರಿಗಳನ್ನು ಸಂರಕ್ಷಿಸಿರುವುದು ಅಪರೂಪದ ಸಂಗತಿಯಾಗಿದ್ದು, ಇಂತಹ ಸಾಧನೆ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್. ಗೋಕುಲ್ ರವರು ಹೇಳಿದ್ದಾರೆ.