ಮೈಸೂರು: ಕುಡಿದ ಅಮಲಿನಲ್ಲಿ ಮೂವರು ಯುವಕರು ಕಾರು ಚಾಲನೆ ಮಾಡಿ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಫುಲ್ ಕುಮಾರ್ ಮನೆಗೆ ಕಾರು ನುಗ್ಗಿಸಿದ ಘಟನೆ ಮಂಗಳವಾರ ರಾತ್ರಿ ನಗರದಲ್ಲಿ ನಡೆದಿದೆ.
ಕಾರು ನುಗ್ಗಿದ ಪರಿಣಾಮ ವಿಪುಲ್ ಕುಮಾರ್ ಅವರ ಸರ್ಕಾರಿ ಬಂಗಲೆಯ ಕಾಂಪೌಂಡ್ ನೆಲಸಮವಾಗಿದ್ದು, ಕಾರು ಭಾಗಶಃ ಜಖಂ ಆಗಿದೆ. ಮೈಸೂರಿನ ಗಾಂಧಿನಗರದ ನಿವಾಸಿಗಳಾದ ಮೂವರು ಯುವಕರು ರಾತ್ರಿ ಕಂಠ ಪೂರ್ತಿ ಕುಡಿದು ಗಾಂಧಿ ನಗರದಲ್ಲಿನ ತಮ್ಮ ನಿವಾಸಕ್ಕೆ ಹೋಗುತ್ತಿರುವಾಗ ವೇಗವಾಗಿ ಕಾರು ಚಾಲನೆ ಮಾಡಿ ಕಂಪೌಂಡ್ ಗೋಡೆಗೆ ಗುದ್ದಿದ್ದಾರೆ.
ಕಾರಿನಲ್ಲಿದ್ದ ಯುವಕರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂವರನ್ನು ನಜರ್ ಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ವೇಳೆ ಐಜಿಪಿ ವಿಪುಲ್ ಕುಮಾರ್ ಮನೆಯಲ್ಲಿಯೇ ಇದ್ದರು. ಭಾರೀ ಸದ್ದು ಕೇಳಿ ತಕ್ಷಣ ಮನೆಯಿಂದ ಹೊರಬಂದ ಅವರು ಘಟನೆ ಗಮನಿಸಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ದೂರು ನೀಡಿದರು.
ಸದ್ಯ ನಜರ್ಬಾದ್ ಪೊಲೀಸರು ಮದ್ಯ ಮತ್ತು ಯುವಕರನ್ನು ವಶಕ್ಕೆ ಪಡೆದು ಕಾರು ಜಪ್ತಿ ಮಾಡಿದ್ದಾರೆ.