ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಆಮಿಷಗಳು ಜೋರಾಗುತ್ತಿದ್ದು, ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಚುನಾವಣೆಗಾಗಿ ಸಂಗ್ರಹಿಸಿರೋ ಹಣವನ್ನು ವಶಪಡಿಸಿಕೊಂಡು ರಾಜಕೀಯ ಪಕ್ಷಗಳಿಗೆ ಸರಿಯಾದ ಏಟನ್ನು ನೀಡಿದ್ದಾರೆ.
ರಾಜ್ಯದಲ್ಲಿ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ರಾಜಕೀಯ ಪಕ್ಷಗಳ ಹಣದ ಸಂಗ್ರಹವನ್ನ ಹೆಚ್ಚು ಮಾಡುತ್ತಿವೆ. ಮಂಗಳವಾರ ಚುನಾವಣಾ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅಮೃತಹಳ್ಳಿಯಲ್ಲಿರುವ ಕೃಷ್ಣ ಜ್ಯುವೆಲ್ಲರಿ ಅಂಗಡಿ ಮೇಲೆ ದಾಳಿ ಮಾಡಿ ಒಟ್ಟು 32 ಲಕ್ಷ 50 ಸಾವಿರ ಹಣವನ್ನ ವಶಪಡಿಸಿಕೊಂಡಿದ್ದಾರೆ.
ಚುನಾವಣೆಗಾಗಿ ಮೂಗುತಿ ಮತ್ತು ಇತರೆ ಆಭರಣಗಳನ್ನು ಖರೀದಿ ಮಾಡಲು ತಂದಿದ್ದ ಹಣ ಅಂತ ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಹಣದ ಮಾಲೀಕ ಚೆನ್ನಕೇಶವ್ ನನ್ನ ಕೆಲ ವ್ಯವಹಾರಗಳಿಗೆ ಸಂಬಂಧಿಸಿದ ಹಣ ಇದಾಗಿದ್ದು, ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಅಂತ ಹೇಳಿದ್ದಾರೆ.
ಇದು ಕಾಂಗ್ರೆಸ್ ಏಜೆಂಟರಿಗೆ ಸೇರಿದ ಹಣ, ಆತನು ಸಹ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಮತದಾನದ ಸಮಯದಲ್ಲಿ ಹಣ ಹಂಚಲು ಕೆಲ ಅಂಗಡಿಗಳಲ್ಲಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಮೇರೆಗೆ ನಾನು ಚುನಾವಣಾ ಅಧಿಕಾರಿಗಳಿಗೆ ಫೋನ್ ಮುಖಾಂತರ ದೂರು ನೀಡಿದ್ದೆ. ಅಧಿಕಾರಿಗಳು ಬಂದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವ ಹರೀಶ್ ಹೇಳಿದ್ದಾರೆ.
ಮತದಾರರಿಗೆ ನಾನಾ ಆಮಿಷಗಳನ್ನು ತೋರಿಸಿ ಹಣವನ್ನ ಹಂಚಿ ಅಧಿಕಾರಿದ ಗದ್ದುಗೆ ಏರಲು ರಾಜಕೀಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದಕ್ಕೆ ಚುನಾವಣೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.