ಹುಬ್ಬಳ್ಳಿ: ನಾನು ಈ ಬಾರಿ ವೋಟು ಹಾಕೋದು ಬೇಡ ಅಂತ ತೀರ್ಮಾನ ಮಾಡಿದ್ದೆ, ಆದರೆ ಮೋದಿ ನನ್ನ ಹೆಸರು ಹೇಳಿದ್ದಕ್ಕೆ ವೋಟು ಹಾಕ್ತೀನಿ ಎಂದು ಚಂದ್ರಕಾಂತ ಮೆಹರವಾಡಿ ಹೇಳಿದ್ದಾರೆ.
ಭಾನುವಾರ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಕಾಂತ ಮೆಹರವಾಡಿ ಹೆಸರನ್ನ ಪ್ರಸ್ತಾಪಿಸಿ, ಹುಬ್ಬಳ್ಳಿಗೂ ನನಗೂ ಅವಿನಾಭಾವ ಸಂಬಂಧ ಇದೆ ಅಂತ ಹೇಳಿದ್ದರು. ಗುಜರಾತ್ ಸಿಎಂ ಆಗಿದ್ದಾಗ ಚಂದ್ರಕಾಂತ ನನ್ನನ್ನು ಭೇಟಿಯಾಗಿದ್ದರು. ಅವರ ಪತ್ನಿ ಗರ್ಭಿಣಿ ಕಷ್ಟದಲ್ಲಿದ್ದಾರೆ ಅಂತ ತಿಳಿದು ಸಹಾಯ ಮಾಡಿದೆ. ಇದೀಗ ಆ ಕುಟುಂಬ ನೆಮ್ಮದಿಯಿಂದ ಜೀವನ ಮಾಡುತ್ತಿದೆ ಎಂದು ಪ್ರಸ್ತಾಪ ಮಾಡಿದ್ದರು.
ಈ ಬಗ್ಗೆ ಚಂದ್ರಕಾಂತ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮೋದಿಯನ್ನು ಹೊಗಳಿ ಸ್ಥಳೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನಗೆ ಸ್ವಂತ ಮನೆ ಇಲ್ಲ, ಸ್ವಂತ ಟೈಲರಿಂಗ್ ಮಷಿನ್ ಕೂಡ ಇಲ್ಲ. ಇಲ್ಲಿನ ಜನಪ್ರತಿನಿಧಿಗಳು ಬರೀ ಸುಳ್ಳು ಭರವಸೆ ಕೊಟ್ಟರು ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಯಾರು ಈ ಚಂದ್ರಕಾಂತ್ ಮೆಹರವಾಡಿ?
ಚಂದ್ರಕಾಂತ್ ಮೆಹರವಾಡಿ ಹುಬ್ಬಳ್ಳಿಯ. ನೇಕಾರ ನಗರ ನಿವಾಸಿ. 20 ವರ್ಷ ಹಿಂದೆ ದುಡಿಮೆಗಾಗಿ ಪತ್ನಿ ಶೋಭಾ ಜೊತೆ ಗುಜರಾತ್ ಗೆ ಹೋಗಿದ್ದರು. ಗರ್ಭಿಣಿಯಾಗಿದ್ದ ಶೋಭಾ ಅವರನ್ನ ಆಸ್ಪತ್ರೆಗೆ ದಾಖಲಿಸಿದಾಗ ಹೆಣ್ಣು ಮಗು ಜನನವಾಯಿತು.
ಆಗ ಆಸ್ಪತ್ರೆ ಬಿಲ್ ಕಟ್ಟುವಷ್ಟು ಹಣ ಚಂದ್ರಕಾಂತ್ ಅವರ ಬಳಿ ಇರಲಿಲ್ಲ. ಆಗ ಸೆಕ್ಯೂರಿಟಿ ಸೂಚನೆ ಮೇರೆಗೆ ಮೋದಿ ಅವರ ಮನೆಗೆ ಚಂದ್ರಕಾಂತ್ ಹೋದಾಗ ಗುಜರಾತ್ ಸಿಎಂ ಆಗಿದ್ದ ಮೋದಿ ಮನೆಯಲ್ಲಿದ್ದರು. ಮೋದಿ ಬಳಿ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟ ಚಂದ್ರಕಾಂತ್ ಅವರಿಗೆ ಒಂದು ಪತ್ರವನ್ನ ಮೋದಿ ನೀಡುತ್ತಾರೆ. ಆ ಪತ್ರದ ಸಹಾಯದಿಂದ ಉಚಿತವಾಗಿ ಆಸ್ಪತ್ರೆಯ ಎಲ್ಲಾ ಸೌಲಭ್ಯ ಸಿಕ್ಕಿತ್ತು.