ದಾವಣಗೆರೆ: ಆಗ ತಾನೇ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ನೆಲಸಮ ಮಾಡಿದ ಆಘಾತಕಾರಿ ಘಟನೆಯೊಂದು ದಾವಣಗೆರೆ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶೇಖರಯ್ಯ ಎಂಬವರ ಅಡಿಕೆ ತೋಟದಲ್ಲಿ ಈ ಘಟನೆ ನಡೆದಿದೆ. ಶೇಖರಯ್ಯ ಅವರು ತೋಟದಲ್ಲಿ ಸುಮಾರು 300ಕ್ಕೂ ಹೆಚ್ಚು ಅಡಿಕೆ ಮರಗಳು ಫಸಲಿಗೆ ಬಂದಿದ್ದವು. ಈ ಸಂತಸದಲ್ಲಿದ್ದ ರೈತನಿಗೆ ದುಷ್ಕರ್ಮಿಗಳ ಕೃತ್ಯದಿಂದ ಆಘಾತವಾಗಿದೆ.
ದುಷ್ಕರ್ಮಿಗಳು ರಾತ್ರೋರಾತ್ರಿ ಜೆಸಿಬಿ ತಂದು ಶೇಖರಯ್ಯ ಅವರ ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳನ್ನು ಸಂಪೂರ್ಣ ನಾಶಮಾಡಿದ್ದಾರೆ. ಇದೀಗ ಕಿಡಿಗೇಡಿಗಳ ಅಟ್ಟಹಾಸದಿಂದ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಳೆದುಕೊಂಡ ರೈತನ ಅಕ್ರಂದನ ಮುಗಿಲು ಮುಟ್ಟಿದೆ.
ಹಳೆಯ ದ್ವೇಷ ಇರೋ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.