ಸೆಲ್ಫಿ ವಿತ್ ಮೋದಿ-ಬಿಎಸ್‍ವೈ, ಕಮಲ ಟ್ಯಾಟೂ, ಬಳೆ ಕೌಂಟರ್- ಮತದಾರರನ್ನ ಸೆಳೆಯಲು ರಾಯಚೂರಿನಲ್ಲಿ ಕಮಲ ಜಾತ್ರೆ

Public TV
1 Min Read
rcr kamala jatre

ರಾಯಚೂರು: ರಾಜ್ಯದಲ್ಲಿ ಮತದಾರರನ್ನ ಸೆಳೆಯಲು ರಾಜಕೀಯ ಪಕ್ಷಗಳು ನಾನಾ ಕಸರತ್ತುಗಳನ್ನ ಮಾಡುತ್ತಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾರ್ಗದರ್ಶನದಲ್ಲಿ ಈಗ ಬಿಜೆಪಿ ಕಮಲ ಜಾತ್ರೆಯನ್ನೇ ಮಾಡುತ್ತಿದೆ.

ರಾಯಚೂರಿನಲ್ಲಿ ಮೂರು ದಿನ ಕಾಲ ಕೃತಕ ಜಾತ್ರೆಯನ್ನ ಮಾಡುತ್ತಿರುವ ಬಿಜೆಪಿ, ರಾಯಚೂರು ಗ್ರಾಮೀಣ ಕ್ಷೇತ್ರದ ಜನರನ್ನ ತನ್ನತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದೆ.

kamala jatre 4
ಉತ್ತರ ಪ್ರದೇಶದಲ್ಲಿ ಯಶಸ್ವಿಯಾದ ಕಮಲ ಮೇಳ ಮಾದರಿಯಲ್ಲೇ ರಾಜ್ಯದಲ್ಲಿ ಕಮಲ ಜಾತ್ರೆಯ ಮೂಲಕ ಮತದಾರರನ್ನ ತನ್ನತ್ತ ಸೆಳೆಯಲು ಬಿಜೆಪಿ ಈ ಜಾತ್ರೆ ನಡೆಸಿದೆ. ರಾಯಚೂರು ಗ್ರಾಮೀಣ ಕ್ಷೇತ್ರದ ಗಿಲ್ಲೆಸುಗೂರಿನಲ್ಲಿ ಮಾರ್ಚ್ 2 ರಿಂದ ಮೂರು ದಿನಗಳ ಕಾಲ ಬಿಜೆಪಿ ಕಮಲ ಜಾತ್ರೆಯನ್ನ ಆಯೋಜಿಸಿದ್ದು, ಥೇಟ್ ಊರ ಜಾತ್ರೆಯಂತೆ ಕಮಲ ಜಾತ್ರೆ ನಡೆಸಲಾಗುತ್ತಿದೆ.

kamala jatre 5

ಜಾತ್ರೆಯ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಸೆಲ್ಫಿ ವಿತ್ ಮೋದಿ, ಸೆಲ್ಫಿ ವಿತ್ ಯಡಿಯೂರಪ್ಪ ಕೌಂಟರ್‍ಗಳು ಸ್ವಾಗತಿಸುತ್ತವೆ. ಬಳಿಕ ತಿಂಡಿ ತಿನಿಸುಗಳು, ಬಲೂನ್ ಶೂಟ್, ಜ್ಯೋತಿಷ್ಯ, ಮಿಕ್ಕಿ ಮೌಸ್ ಆಟಗಳು, ಕಮಲ ಟ್ಯಾಟೂ, ಮಹಿಳೆಯರಿಗೆ ಮೆಹೆಂದಿ, ಬಳೆ ತೊಡಿಸುವ ಕೌಂಟರ್ ಗಳನ್ನ ಮಾಡಲಾಗಿದೆ. ಚಾಯ್ ಪೇ ಚರ್ಚಾ ಕೌಂಟರ್‍ನಲ್ಲಿ ಫ್ರೀಯಾಗಿ ಟೀ ಕೊಡಲಾಗುತ್ತದೆ. ಅಮಿತ್ ಶಾ ನಿರ್ದೇಶನದ ಮೇರೆಗೆ ರಾಜ್ಯದ 9 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಮಲ ಜಾತ್ರೆಯನ್ನ ಮಾಡುತ್ತಿದೆ.

kamala jatre 1

ರಾಯಚೂರು ಗ್ರಾಮೀಣ ಕ್ಷೇತ್ರದ ಗ್ರಾಮಗಳಿಂದ ಜನರನ್ನ ಆಮಿಷವೊಡ್ಡಿ ಜಾತ್ರೆಗೆ ಕರೆದುಕೊಂಡು ಬರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ಮಹಿಳೆಯರಿಗೆ ಸೀರೆ, ಕುಪ್ಪಸ ಕೊಡುವುದಾಗಿ ಹೇಳಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಕರೆದುಕೊಂಡು ಬಂದಿದ್ದು, ಸೀರೆ ಸಿಗದೆ ಮಹಿಳೆಯರು ಇನ್ನೂ ನಮಗೆ ಸೀರೆ ಕೊಟ್ಟಿಲ್ಲ. ಕೇವಲ ಬಳೆ ಮಾತ್ರ ಹಾಕಿದ್ದಾರೆ ಅಂತ ಅಲವತ್ತುಕೊಳ್ಳುತ್ತಿದ್ದರು.

kamala jatre 3

ವರ್ಷಕ್ಕೊಂದು ಬಾರಿ ಊರಲ್ಲಿ ಜನರೆಲ್ಲಾ ಸೇರಿ ಜಾತ್ರೆ ಮಾಡಿ ಸಂಭ್ರಮಿಸುವುದು ಸಂಪ್ರದಾಯ. ಆದ್ರೆ ಬಿಜೆಪಿ ಕೃತಕ ಜಾತ್ರೆಯನ್ನ ಸೃಷ್ಟಿ ಮಾಡಿ ಜನರ ಮನವೋಲೈಕೆಗೆ ಮುಂದಾಗಿದೆ.

kamala jatre 2

Share This Article
Leave a Comment

Leave a Reply

Your email address will not be published. Required fields are marked *