ಚಿತ್ರದುರ್ಗ: ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರದುರ್ಗ ಎಂದಾಕ್ಷಣ ಎಲ್ಲರಿಗೂ ನೆನೆಪಾಗೋದು ಏಳುಸುತ್ತಿನ ಕೋಟೆ, ಮದಕರಿನಾಯಕ, ಒನಕೆ ಓಬವ್ವ ಮತ್ತು ನಾಗರಹಾವು ಚಲನಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಡಾ. ವಿಷ್ಣುವರ್ಧನ್ ಹಾಗು ಪುಟ್ಟಣ್ಣ ಕಣಗಾಲ್.
ಅಂತೆಯೇ ಕಳೆದ 12 ವರ್ಷಗಳಿಂದ ಚಿತ್ರದುರ್ಗದ ಕೋಟೆ ನೋಡಿದವರಿಗೆ ಕೋಟೆಯೊಳಗಿನ ಮಂಕಿಮ್ಯಾನ್ ಎನಿಸಿರೋ ಜ್ಯೋತಿರಾಜ್ ನೆನಪು ಕೂಡ ಮಾಸದೇ ಇರಲ್ಲ. ಯಾಕಂದರೆ ಅವರ ಸಾಹಸ ಎಂತಹವರನ್ನು ಮೆರಗುಗೊಳಿಸುತ್ತದೆ. ತನ್ನ ಸಾಹಸದಿಂದಲೇ ಪ್ರಖ್ಯಾತಿಗಳಿಸಿ ಸ್ಯಾಂಡಲ್ವುಡ್ ನಲ್ಲೂ ಒಂದು ರೌಂಡ್ ಹಾಕಿ ಬಂದಿದ್ದರು. ಇದನ್ನೂ ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ
ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮತ್ತೆ ಸಾಹಸದಲ್ಲಿ ತಲ್ಲೀನರಾಗಿದ್ದು, ಮುಂಬರುವ 2020ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನ ಪ್ರತಿನಿಧಿಸಿ ಬಂಗಾರದ ಪದಕ ಗೆಲ್ಲುವ ತವಕದಲ್ಲಿದ್ದರು. ಅಲ್ಲದೇ ಈ ವರ್ಷ ತನ್ನ ಬಾಳ ಸಂಗಾತಿಯೊಂದಿಗೆ ನವಜೀವನವನ್ನು ಆರಂಭಿಸಬೇಕೆಂಬ ಕನಸು ಕಂಡಿದ್ದ ಕೋತಿರಾಜ್ ಮಂಗಳವಾರ ಜೋಗ್ ಫಾಲ್ಸ್ ನಲ್ಲಿ ನಾಪತ್ತೆಯಾಗಿರೋದು ಎಲ್ಲರನ್ನೂ ದಿಗ್ಬ್ರಮೆಗೊಳಿಸಿದೆ. ಇದನ್ನೂ ಓದಿ: ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್
ಅದರಲ್ಲೂ ಜ್ಯೋತಿರಾಜ್ ಗೆ ಹೆಣ್ಣು ಕೊಟ್ಟು ಕನ್ಯಾಧಾರೆ ಎರೆದು ಹೊಸ ಜೀವನ ಕಟ್ಟಿಕೊಡಬೇಕೆನ್ನುವ ತವಕದಲ್ಲಿದ್ದ ಅವರ ಮಾವ ಶ್ರೀನಿವಾಸ್ ಕುಟುಂಬದಲ್ಲಿ ಕೂಡ ಆತಂಕ ಆವರಿಸಿದೆ. ಹೀಗಾಗಿ ನಾಪತ್ತೆಯಾಗಿರೋ ಸ್ಪೈಡರ್ ಮ್ಯಾನ್ ಕೋತಿರಾಜ್ ಸುರಕ್ಷಿತವಾಗಿ ವಾಪಾಸ್ ಬರಲಿ, ಅವರ ಕನಸು ನನಸಾಗಲಿ. ದೇಶದ ಕೀರ್ತಿ ಇನ್ನಷ್ಟು ಹೆಚ್ಚಿಸಲಿ ಎನ್ನುವುದು ಎಲ್ಲರ ಆಶಯ.
ಜ್ಯೋತಿರಾಜ್ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ನಾಪತ್ತೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು.