ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಹೊಸಾಡ್ ಗ್ರಾಮದಲ್ಲಿ ವ್ಯಕ್ತಿಯೋರ್ವ ಕಾಂಗ್ರೆಸ್ ಶಾಸಕರೊಬ್ಬರನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಕೃತ್ಯ ಎಸಗಲು ಮುಂದಾದ ವ್ಯಕ್ತಿಯನ್ನು ರೈಮಂಡ್ ಮಿರಂಡ್ ಎಂದು ಗುರುತಿಸಲಾಗಿದೆ. ಶಾಸಕ ಮಂಕಾಳು ವೈದ್ಯ ಅವರು ಹೊಸಾಡ್ ಗ್ರಾಮದಲ್ಲಿ ಹೊನಲು ಬೆಳಕಿನ ವಾಲಿಬಾಲ್ ಕಾರ್ಯಕ್ರಮದ ಉದ್ಘಾಟನೆ ಮಾಡಲು ಆಗಮಿಸಿದ ವೇಳೆ ಹತ್ಯೆಗೆ ಸಂಚು ರೂಪಿಸಲಾಗಿತ್ತು.
ಕಾರ್ಯಕ್ರಮ ನಡೆಯುತ್ತಿರುವ ವೇಳೆ ರೈಮಂಡ್ ಮಿರಂಡ್ ತನ್ನ ಕೈಯಲ್ಲಿ ನೆಲ ಬಾಂಬ್ ಹಿಡಿದುಕೊಂಡಿದ್ದನು. ಕೆಲ ಸಮಯದ ಬಳಿಕ ಅದನ್ನು ಶಾಸಕರ ಕಡೆ ಎಸೆಯಲು ಮುಂದಾಗಿದ್ದು, ನೆಲಬಾಂಬ್ ಎಸೆಯುವ ವೇಳೆ ಆತನ ಕೈಯಲ್ಲೇ ಸ್ಫೋಟಗೊಂಡಿದೆ. ಬಳಿಕ ಆರೋಪಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ. ತಕ್ಷಣ ಎಚ್ಚೆತ್ತ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಾಂಬ್ ಸ್ಫೋಟದಿಂದ ಆರೋಪಿಯ ಕೈ ಸಂಪೂರ್ಣ ಜಖಂ ಆಗಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಕೃತ್ಯ ನೆಡೆಸಲು ಪ್ರಯತ್ನಿಸಿದ ವ್ಯಕ್ತಿಯ ಕೈಯಲ್ಲೇ ನೆಲಬಾಂಬ್ ಸ್ಫೋಟವಾದ್ದರಿಂದ ಶಾಸಕ ಮಂಕಾಳ ವೈದ್ಯ ಅಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ಕೂಡ ಬಿಜೆಪಿಯ ಭಟ್ಕಳ ಶಾಸಕರಾಗಿದ್ದ ಡಾ. ಚಿತ್ತರಂಜನರವರನ್ನ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಅದಾದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯರ ಹತ್ಯೆಗೆ ಪ್ರಯತ್ನ ನಡೆದಿದೆ.
ಈ ಸಂಬಂಧ ಹೊನ್ನಾವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.