ಹೈದರಾಬಾದ್: ಫ್ಯಾಕ್ಟರಿಯಲ್ಲಿ ವ್ಯಕ್ತಿಯೊಬ್ಬರ ಎದೆಗೆ ಯಂತ್ರದ ಕಬ್ಬಿಣದ ರಾಡ್ ಚುಚ್ಚಿಕೊಂಡು ಸಾವನ್ನಪ್ಪಿರೋ ಘಟನೆ ಆಂಧ್ರಪ್ರದೇಶದ ಕರ್ನೂಲ್ನಲ್ಲಿ ನಡೆದಿದೆ.
ಇಲ್ಲಿನ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಘಟಕದಲ್ಲಿ ಬುಧವಾರದಂದು ಈ ಅವಘಡ ಸಂಭವಿಸಿದೆ. ಮೃತ ವ್ಯಕ್ತಿಯನ್ನು 22 ವರ್ಷದ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಯಲ್ಲಪ್ಪ ಅವರು ಇತರೆ ಕೆಲವರೊಂದಿಗೆ ಜಿತೇಶ್ ಪ್ಲಾಸ್ಟಿಕ್ ಬಾಟಲ್ ತಯಾರಿಕಾ ಸಂಸ್ಥೆಯಲ್ಲಿ ಕಾರ್ಕ್ ಮೇಕಿಂಗ್ ಮಷೀನ್ ರಿಪೇರಿ ಮಾಡುತ್ತಿದ್ದರು. ಯಂತ್ರವನ್ನು ಜರುಗಿಸಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಯಂತ್ರ ತಿರುಗಿ ಗೋಡೆ ಮತ್ತು ಯಂತ್ರದ ನಡುವೆ ಯಲ್ಲಪ್ಪ ಸಿಲುಕಿದ್ದರು.
ಯಂತ್ರದಲ್ಲಿದ್ದ ಕಬ್ಬಿಣದ ರಾಡ್ ಯಲ್ಲಪ್ಪ ಅವರ ಎದೆಗೆ ಚುಚ್ಚಿಕೊಂಡು ತೀವ್ರ ರಕ್ತಸ್ರಾವವಾಗಿತ್ತು. ಯಂತ್ರವನ್ನ ತೆಗೆದು ಯಲ್ಲಪ್ಪ ಅವರನ್ನು ಹೊರಗೆಳೆಯುವ ಮುನ್ನವೇ ಅವರು ಸಾವನ್ನಪ್ಪಿದ್ದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.