ಮೈಸೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮೈಸೂರಿನಲ್ಲಿ ಮತದಾರ ಪಟ್ಟಿಯಲ್ಲಿ ಅಧಿಕಾರಿಗಳು ಗೋಲ್ ಮಾಲ್ ಮಾಡಿದ್ದಾರೆಂದು ಮಾಜಿ ಸಚಿವ ಎಸ್ಎ ರಾಮದಾಸ್ ಆರೋಪಿಸಿದ್ದಾರೆ.
ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಬಂದ ಬೂತ್ನಲ್ಲಿ 4,794 ಮತದಾರರ ಹೆಸರು ನಾಪತ್ತೆಯಾಗಿದೆ. ಮತದಾರರು ಬದುಕಿದ್ದರೂ, ಸತ್ತು ಹೋಗಿದ್ದಾರೆಂದು ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕಲಾಗಿದೆ ಎಂದು ಎಸ್ಎ ರಾಮದಾಸ್ ಅಧಿಕಾರಿಗಳ ಈ ಕೃತ್ಯದ ಬಗ್ಗೆ ದಾಖಲೆ ಬಿಡುಗಡೆ ಮಾಡಿದರು.
ಮೂರೇ ದಿನದಲ್ಲಿ 30 ಅಧಿಕಾರಿಗಳಿಂದ ಈ ಕೆಲಸ ನಡೆದಿದ್ದು, ಎನ್ಆರ್ ಕ್ಷೇತ್ರದಲ್ಲಿ 5642 ಮತದಾರರ ಹೆಸರು ಹಾಗೂ ಚಾಮರಾಜ ಕ್ಷೇತ್ರದಲ್ಲಿ 3416 ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಮನೆಯಲ್ಲಿ ಇದ್ದವರನ್ನು ಊರು ಬಿಟ್ಟಿದ್ದಾರೆಂದು ಮಾಹಿತಿ ನೀಡಲಾಗಿದೆ. ಬರೋಬ್ಬರಿ 4 ಸಾವಿರ ಅರ್ಜಿಗಳು ಒಂದೇ ಮಾದರಿಯಲ್ಲಿ ಭರ್ತಿಯಾಗಿದ್ದು ಒಬ್ಬರ ಕೈಯಲ್ಲೇ ಅರ್ಜಿಗಳನ್ನ ತುಂಬಿಸಲಾಗಿದ್ದು, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಶಾಸಕ ಸೋಮಶೇಖರ್ ನೇತೃತ್ವದಲ್ಲಿ ಈ ಹಗರಣ ನಡೆದಿದೆ ಎಂದು ಆರೋಪಿಸಿದರು.
ನಿಜವಾಗಿ ಸತ್ತವರ ಹೆಸರನ್ನು ಅಧಿಕಾರಿಗಳು ಡಿಲೀಟ್ ಮಾಡಿಲ್ಲ. ಕೆಆರ್ ಕ್ಷೇತ್ರದ 12 ಬೂತ್ ಗಳಲ್ಲಿ 52 ಮಂದಿ ಸತ್ತಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಇನ್ನೂ ಅವರ ಹೆಸರುಗಳಿವೆ.
ಇವತ್ತು ಸುದ್ದಿಗೋಷ್ಠಿಯಲ್ಲಿ ಮತದಾರ ಪಟ್ಟಿಯಲ್ಲಿ ಸತ್ತಿದ್ದಾರೆ ಎಂದು ನಮೂದಿಸಿರುವ ವ್ಯಕ್ತಿಗಳು ಸಹ ತಮಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಂಡರು.