– ಎಂಬಿಎ ಪದವೀಧರ, ಮನೆ ಇದೆ, ಆಸ್ತಿ ಇದೆ, ರೈತನ ಮಗ ಅಂತ ಹೆಣ್ಣು ಕೊಡ್ತಿಲ್ಲ; ಯುವಕನ ಗೋಳು
ಹಾಸನ: ʻಪ್ರಜಾ ಸೇವೆʼ (Praja Seve) ಆಂದೋಲನದಲ್ಲಿ ಯುವಕನೋರ್ವ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಅಂತಾ ಶಾಸಕರ ಎದುರು ಅಳಲು ತೋಡಿಕೊಂಡಿರುವ ಘಟನೆ ಹಾಸನ (Hassan) ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಮಲ್ಲಿಪಟ್ಟಣದಲ್ಲಿ ನಡೆದಿದೆ, ಯುವಕನ ಬೇಡಿಕೆಗೆ ಶಾಸಕರು ತಬ್ಬಿಬ್ಬಾಗಿದ್ದಾರೆ.
ಹೌದು. ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಅಧ್ಯಕ್ಷತೆಯಲ್ಲಿ ಸೆ.12 ರ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಲದಹಳ್ಳಿ ಗ್ರಾಮದ ಸಂತೋಷ್ ಎಂಬ ಯುವಕ ಮದುವೆಯಾಗಲು (Marriage) ಹುಡುಗಿ ಕೊಡಿಸಿ ಎಂದು ʻಪ್ರಜಾ ಸೇವೆʼ ಆಂದೋಲನದಲ್ಲಿ ಶಾಸಕರಿಗೆ ಅರ್ಜಿ ಸಲ್ಲಿಸಿದ್ದಾರೆ.

ಎಂಬಿಎ ಪದವಿಧರನಾದ್ರೂ ಹುಡುಗಿ ಸಿಗುತ್ತಿಲ್ಲ. ರೈತನ ಮಗ ಎನ್ನುವ ಕಾರಣಕ್ಕೆ ಯಾರೂ ಮದುವೆಯಾಗಲು ಒಪ್ಪುತ್ತಿಲ್ಲ. ಮನೆ ಇದೆ, ಆಸ್ತಿ ಇದೆ, ದಿನದ ದುಡಿಮೆಗೆ ಅಂಗಡಿ ಇದೆ. ಆದರೂ ಹುಡುಗಿ ಸಿಗುತ್ತಿಲ್ಲ. ಈಗಾಗಲೇ 30ಕ್ಕೂ ಹೆಚ್ಚು ಯುವತಿಯರನ್ನ ನೋಡಿದರೂ ಯಾರೊಬ್ಬರೂ ಓಕೆ ಮಾಡ್ತಿಲ್ಲ. ಅಪ್ಪ ಅಮ್ಮ ಇಲ್ಲದ ನನಗೆ ಹುಡುಗಿ ಹುಡುಕಿಕೊಡಿ ಎಂದು ಮೊರೆಯಿಟ್ಟರು.
ಹಿಂದೆ ರೈತರ ಮಕ್ಕಳನ್ನ ಹುಡುಕಿ ಮದುವೆ ಮಾಡೋರು. ಈಗ ರೈತರ ಮಕ್ಕಳು ಎಂದರೆ ಯಾರೂ ಹುಡುಗಿ ಕೊಡ್ತಿಲ್ಲ. ಮದುವೆ ಆಗದೆ ಇರುವವರು ಬದುಕ್ತಾ ಇದ್ದಾರೆ ತಲೆ ಕೆಡಿಸಿಕೊಳ್ಳಬೇಡ. ನೀನೇ ಯಾರನ್ನಾದ್ರು ಲವ್ ಮಾಡಿ ಮದುವೆಯಾಗು ಎಂದ ಶಾಸಕ ಎ.ಮಂಜು ಸಲಹೆ ನೀಡಿ ಕಳಿಸಿದರು.

