ಗೌರಿ-ಗಣೇಶ (Ganesh Chaturthi) ಹಬ್ಬವೆಂದರೆ ಹಿರಿಯರಿಗಿಂತ ಮಕ್ಕಳಿಗೆ ಹೆಚ್ಚು ಸಂಭ್ರಮ. ತಮ್ಮ ಏರಿಯಾ ಸುತ್ತಮುತ್ತ ಚಂದ ಸಂಗ್ರಹಿಸಿ, ಹುಡುಗರೆಲ್ಲ ಸೇರಿಕೊಂಡು ಚಪ್ಪರ ಹಾಕಿ ಗಣೇಶನನ್ನು ಕೂರಿಸಿ ಹಬ್ಬ ಆಚರಿಸಿ ಖುಷಿ ಪಡುತ್ತಾರೆ. ‘ಗಣಪತಪ ಐಸ.. ಅವನ ಹೊಟ್ಟೆ ನೋಡಿ ಐಸ..’ ಅಂತ ಗಣೇಶನನ್ನು ಗ್ರಾಮೀಣ ಶೈಲಿಯಲ್ಲಿ ಸ್ತುತಿಸುತ್ತಾ, ಕುಣಿದು ಕುಪ್ಪಳಿಸುತ್ತಾರೆ. ಮಕ್ಕಳ ಹಬ್ಬದ ಸಂಭ್ರಮ ಕಂಡು ಹಿರಿಯರು ಕೂಡ ಹಿಗ್ಗುತ್ತಾರೆ.
ಆದರೆ, ಮನೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಸಂದರ್ಭದಲ್ಲಿ ಮಕ್ಕಳಿಗೆ ಇಂತಹ ಅವಕಾಶಗಳು ಸಿಗುವುದಿಲ್ಲ. ಆದರೂ, ಮನೆಗಳಲ್ಲಿ ಹಬ್ಬ ಆಚರಿಸುವಾಗ ಪೋಷಕರು ತಮ್ಮ ಮಕ್ಕಳಿಗೂ ಸಣ್ಣಪುಟ್ಟ ಜವಾಬ್ದಾರಿಗಳನ್ನು ವಹಿಸಬೇಕು. ಈ ಹಬ್ಬವನ್ನು ಕೇವಲ ಆಚರಣೆಗೆ ಸೀಮಿತಗೊಳಿಸುವ ಬದಲು, ಮಕ್ಕಳಲ್ಲಿ ಕಲಿಕೆ ಮತ್ತು ಮೌಲ್ಯಗಳನ್ನು ಬೆಳೆಸುವ ಅವಕಾಶವಾಗಿಯೂ ಪರಿವರ್ತಿಸಬಹುದು. ಇದರಿಂದ ಅವರು ಸಂಪ್ರದಾಯಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯವಾಗುತ್ತದೆ. ಈ ಪರಿಪಾಠ ಅವರಿಗೆ ಜವಾಬ್ದಾರಿ, ಶಿಸ್ತು ಮತ್ತು ಇತರರನ್ನು ಗೌರವ ಕೊಡುವುದನ್ನು ಕಲಿಸುತ್ತದೆ. ಹಾಗಾದ್ರೆ, ಗಣೇಶ ಚತುರ್ಥಿಯಂದು ಪೋಷಕರು ತಮ್ಮ ಮಕ್ಕಳಿಗೆ ಏನೆಲ್ಲ ಜವಾಬ್ದಾರಿ ವಹಿಸಬಹುದು? ನೀವು ಹೀಗೆ ಮಾಡಿ.. ಇದನ್ನೂ ಓದಿ: ಗೌರಿಯ ಪೂಜೆಗೆ ಬೇಕೇ ಬೇಕು ಈ ವಿಶೇಷ ಪುಷ್ಪ – ಅದ್ಯಾವುದು ಗೊತ್ತಾ?
1.ಪೂಜೆಗೆ ತಯಾರಿ ನಡೆಸಲು ಸಹಾಯ ಪಡೆಯಿರಿ
ಗಣೇಶನನ್ನು ಪ್ರತಿಷ್ಠಾಪಿಸುವ ಮೊದಲು, ಪೂಜಾ ಸ್ಥಾನವನ್ನು ಅಚ್ಚುಕಟ್ಟುಗೊಳಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿ. ಹೂವುಗಳು, ಪೂಜಾ ತಟ್ಟೆ ಅಥವಾ ಇತರ ವಸ್ತುಗಳನ್ನು ಸರಿಯಾದ ಸ್ಥಳದಲ್ಲಿ ಇಡಲು ಹೇಳಿ. ಇದು ಯಾವುದೇ ಶುಭ ಕಾರ್ಯವನ್ನು ಸ್ವಚ್ಛತೆ ಮತ್ತು ಕ್ರಮಬದ್ಧವಾಗಿ ಪ್ರಾರಂಭಿಸಲು ಒಳ್ಳೆಯ ಅಭ್ಯಾಸ ಎಂದು ಅವರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

2.ನೈವೇದ್ಯ ತಯಾರಿಸಲು ಮಕ್ಕಳನ್ನೂ ಬಳಸಿಕೊಳ್ಳಿ
ನಿಮ್ಮ ಜೊತೆ ಮಕ್ಕಳನ್ನು ಮೋದಕ ಅಥವಾ ಇತರ ಸಾತ್ವಿಕ ಭಕ್ಷ್ಯಗಳನ್ನು ತಯಾರಿಸಲು ತೊಡಗಿಸಿಕೊಳ್ಳಿ. ಅವರು ತಮ್ಮ ವಯಸ್ಸಿಗೆ ಅನುಗುಣವಾಗಿ ಸಣ್ಣ ಕೆಲಸಗಳನ್ನು ಮಾಡಬಹುದು. ಅಲ್ಲದೆ, ಆಹಾರವು ಕೇವಲ ಭೋಜನವಲ್ಲ, ದೇವರು ಮತ್ತು ಪ್ರಕೃತಿಗೆ ಭಕ್ತಿ ಸಮರ್ಪಣೆಯ ಒಂದು ಮಾರ್ಗವಾಗಿದೆ ಎಂದು ಅವರಿಗೆ ಕಲಿಸಿ.
3.ಮಂತ್ರ ಸ್ತುತಿ ಕಲಿಸಿ
ನಿಮ್ಮ ಮಕ್ಕಳೊಂದಿಗೆ ‘ಓಂ ಗಣ ಗಣಪತಯೇ ನಮಃ’ ಎಂದು ಜಪಿಸಿ. ಅವರಿಗೆ ಗಣೇಶನ ಬಗ್ಗೆ ಪುರಾಣ ಪುಣ್ಯ ಕಥೆಯನ್ನು ಹೇಳಿ. ಗಣೇಶನನ್ನು ಬುದ್ಧಿವಂತಿಕೆ ಮತ್ತು ವಿವೇಚನೆಯ ದೇವರು ಎಂದು ಏಕೆ ಪರಿಗಣಿಸಲಾಗುತ್ತದೆ ಎಂಬುದನ್ನು ವಿವರಿಸಿ. ಇದು ಪೂಜೆಯನ್ನು ಕೇವಲ ಆಚರಣೆಯಾಗಿ ಮಾಡುವ ಬದಲು ಅವರಿಗೆ ಕಲಿಕೆಯ ಅನುಭವವನ್ನು ನೀಡುತ್ತದೆ. ಇದನ್ನೂ ಓದಿ: ಗಣೇಶನಿಗಿಂತ ಮೊದಲೇ ಆಗಮಿಸುವ ಸ್ವರ್ಣಗೌರಿ; ಹೆಣ್ಣುಮಕ್ಕಳು ಸಂಭ್ರಮದಿಂದ ಆಚರಿಸುವ ಹಬ್ಬ
4.ಮನೆಯ ಹಿರಿಯರ ಆಶೀರ್ವಾದ ಪಡೆಯಲಿ
ಗಣೇಶನನ್ನು ಪ್ರತಿಷ್ಠಾಪಿಸಿದ ನಂತರ, ಮಕ್ಕಳು ತಮ್ಮ ಅಜ್ಜ-ಅಜ್ಜಿ, ಮುತ್ತಜ್ಜಿ ಅಥವಾ ಮನೆಯಲ್ಲಿರುವ ಇತರ ಹಿರಿಯರ ಆಶೀರ್ವಾದವನ್ನು ಪಡೆಯಲು ಹೇಳಿಕೊಡಿ. ಹೆತ್ತವರನ್ನು ತನ್ನ ಇಡೀ ಪ್ರಪಂಚವೆಂದು ಪರಿಗಣಿಸಿದ್ದ ಗಣೇಶನ ಕಥೆಯನ್ನು ಸಹ ಅವರಿಗೆ ಹೇಳಬಹುದು. ಇದು ಮಕ್ಕಳಲ್ಲಿ ಪೋಷಕರು ಮತ್ತು ಹಿರಿಯರ ಬಗ್ಗೆ ಗೌರವದ ಭಾವನೆಯನ್ನು ಮೂಡಿಸುತ್ತದೆ.
5.ಅಗತ್ಯ ಇರುವವರಿಗೆ ಮಕ್ಕಳಿಂದ ಸಹಾಯ ಮಾಡಿಸಿ
ಹಬ್ಬದ ಸಮಯದಲ್ಲಿ ಅಗತ್ಯವಿರುವ ಯಾರಿಗಾದರೂ ಆಹಾರ, ಹಣ್ಣು ಅಥವಾ ಅಗತ್ಯ ವಸ್ತುಗಳನ್ನು ಮಕ್ಕಳಿಂದಲೇ ದಾನ ಮಾಡಿಸಿ. ಇತರರೊಂದಿಗೆ ಹಂಚಿಕೊಂಡಾಗ ಹಬ್ಬದ ಸಂತೋಷ ಹೆಚ್ಚಾಗುತ್ತದೆ ಎಂದು ಮಕ್ಕಳಿಗೆ ವಿವರಿಸಿ. ಇದು ಮಕ್ಕಳಲ್ಲಿ ಕರುಣೆ ಮತ್ತು ಸೂಕ್ಷ್ಮತೆಯ ಭಾವನೆಯನ್ನು ಬೆಳೆಸಲು ಸಹಾಯ ಮಾಡುತ್ತದೆ.
6.ಅಲಂಕಾರಕ್ಕೆ ಮಕ್ಕಳಿಗೂ ಅವಕಾಶ ನೀಡಿ
ಗಣೇಶ ಮಂದಿರವನ್ನು ಅಲಂಕರಿಸುವಲ್ಲಿ ಮಕ್ಕಳಿಗೆ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಅವಕಾಶ ನೀಡಿ. ಹೂವಿನ ಅಲಂಕಾರ, ಕಾಗದದ ಕರಕುಶಲ ವಸ್ತುಗಳು ಅಥವಾ ರಂಗೋಲಿ ಬಿಡಿಸುವಂತಹ ಸಣ್ಣ ಕೆಲಸಗಳನ್ನು ಅವರಿಗೆ ವಹಿಸಿಕೊಡಬಹುದು. ಇದು ಅವರ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಇದನ್ನೂ ಓದಿ: ಬುದ್ಧಿ ಹೆಚ್ಚಿಸಲು ಗಣೇಶನನ್ನು ಪೂಜಿಸುವುದು ಯಾಕೆ?
7.ಗಣೇಶನ ಬಗೆಗಿನ ಕಥೆಗಳನ್ನು ಹೇಳಿ
ಪ್ರತಿದಿನ ನಿಮ್ಮ ಮಕ್ಕಳೊಂದಿಗೆ ಗಣೇಶನಿಗೆ ಸಂಬಂಧಿಸಿದ ಕಥೆ ಅಥವಾ ಪಾಠವನ್ನು ಹಂಚಿಕೊಳ್ಳಿ. ಬುದ್ಧಿವಂತಿಕೆ ಎಂದರೆ ಕೇವಲ ಅಧ್ಯಯನದಲ್ಲಿ ಶ್ರೇಷ್ಠತೆ ಸಾಧಿಸುವುದಲ್ಲ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಇತರರನ್ನು ಗೌರವಿಸುವುದು ಎಂದು ಅವರಿಗೆ ವಿವರಿಸಿ. ಈ ರೀತಿಯಾಗಿ, ಗಣೇಶ ಉತ್ಸವವು ಪೂಜೆಯ ಜೊತೆಗೆ ಉತ್ತಮ ಜೀವನ ಅಭ್ಯಾಸಗಳನ್ನು ಕಲಿಯಲು ಮಕ್ಕಳಿಗೆ ಒಂದು ಮಾರ್ಗವಾಗಿದೆ.

