ಪಬ್ಲಿಕ್ ಟಿವಿಗೆ (PUBLiC TV) ಹದಿನಾಲ್ಕನೇ ವಾರ್ಷಿಕೋತ್ಸವದ ಸಂಭ್ರಮ. ಈ ಸಂಭ್ರಮವನ್ನು ಯೋಧರಿಗೆ ಅರ್ಪಿಸುವ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು.
ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಮಂದಿ ಯೋಧರಿಗೆ ಸಿಂಧೂರ ಸಮ್ಮಾನ (Sindoora Sammana) ಹೆಸರಿನಲ್ಲಿ ಗೌರವಿಸಲಾಯಿತು. ಕರ್ನಾಟಕದ ಡಿಜಿ ಐಜಿಪಿ ಡಾ. ಎಂಎ ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ನಟರಾದ ರಿಷಬ್ ಶೆಟ್ಟಿ, ಡಾಲಿ ಧನಂಜಯ, ನೀನಾಸಂ ಸತೀಶ್, ಪೃಥ್ವಿ ಅಂಬರ್, ನಟಿ ಮೇಘನಾ ಗಾಂವ್ಕರ್, ಪ್ರಗತಿ ರಿಷಬ್ ಶೆಟ್ಟಿ ಸೈನಿಕರನ್ನು ಮತ್ತು ಹುತಾತ್ಮ ಯೋಧರ ಪರವಾಗಿ ಕುಟುಂಬದವರನ್ನು ಸನ್ಮಾನಿಸಿದರು.
ರಂಗಪ್ಪ
ಹುಲಸಗುಂದ ಗ್ರಾಮ, ಬಾದಾಮಿ, ಬಾಗಲಕೋಟೆ
ಸಿಯಾಚಿನ್ ಪ್ರದೇಶದ ಟೈಗರ್ ಹಿಲ್ವರೆಗೆ ಬಂದಿದ್ದ ವೈರಿ ಪಡೆಗೆ ತೀವ್ರ ಪ್ರತಿರೋಧವೊಡ್ಡಿ ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದರು. ವೈರಿ ಪಡೆಯನ್ನು ಹಿಮ್ಮೆಟಿಸಿದ್ದೇವೆ ಎಂದು ಖುಷಿಯಿಂದ ಹೇಳುವಾಗಲೇ, ರಣಹೇಡಿ ಪಾಕ್ ಮಿಸೈಲ್ ದಾಳಿಮಾಡಿತ್ತು. ರಂಗಪ್ಪ ಅವರ ಜೊತೆಗಿದ್ದ ಮೂವರು ಯೋಧರು ಹುತಾತ್ಮರಾದರೆ ಇವರ ಎರಡು ಕೈ ಒಂದು ಕಾಲು ಮಿಸೈಲ್ ದಾಳಿಗೆ ಛಿದ್ರವಾಗಿತ್ತು. ಯಮಯಾತನೆಯ ನೋವಿನಲ್ಲಿಯೂ ಬರೋಬ್ಬರಿ 48 ಗಂಟೆಗಳ ಕಾಲ ರಂಗಪ್ಪ ತಮ್ಮ ಜೀವವನ್ನು ಮಂಜುಗಡ್ಡೆಯೊಳಗೆ ಹುದುಗಿಸಿಕೊಂಡಿದ್ದರು.
ಹೆಲಿಕಾಪ್ಟರ್ ಮೂಲಕ ಕಾಣೆಯಾದ ಸೈನಿಕರನ್ನು ಹುಡುಕುವಾಗ ರಂಗಪ್ಪ ರಕ್ಷಣೆ ಮಾಡಲಾಯಿತು. ತಕ್ಷಣ ಪಠಾಣ್ಕೋಟ್ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ 28 ಅಪರೇಷನ್ಗಳನ್ನ ಮಾಡಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ವೈರಿಗಳನ್ನ ಸದೆಬಡಿದ ಖುಷಿಯ ಮುಂದೆ ಕೈಕಾಲು ಕಳೆದುಕೊಂಡಿರೋದು ಯಾವ ಲೆಕ್ಕ. ಈಗಲೂ ಕರೆ ಬಂದರೆ ದೇಶಸೇವೆಗೆ ಹೊರಟು ಬಿಡುತ್ತೇನೆ ಎನ್ನುವ ಉತ್ಸಾಹ ರಂಗಪ್ಪ ಅವರಲ್ಲಿದೆ.
ಕಾಶಿರಾಯ ಬಮ್ಮನಳ್ಳಿ (ಹುತಾತ್ಮ ಯೋಧ)
ಉಕ್ಕಲಿ ಗ್ರಾಮ,ಬಸವನ ಬಾಗೇವಾಡಿ, ವಿಜಯಪುರ
ಜುಲೈ 2021 ರಲ್ಲಿ ʻಆಪರೇಷನ್ ರಕ್ಷಕ್ʼನಲ್ಲಿ ಎದೆಗೆ ಗುಂಡು ತಗುಲಿದರೂ ಎದೆಗುಂದದೇ ಯುದ್ಧಭೂಮಿಯಲ್ಲಿ ಶತ್ರುಗಳ ಎದೆಸೀಳಿ ಶೌರ್ಯ ಮರೆದು ಹುತಾತ್ಮರಾದವರು ಕಾಶೀರಾಯ ಬಮ್ಮನಳ್ಳಿ. ದೇಶಭಕ್ತಿಯನ್ನೇ ಉಸಿರಾಗಿಸಿಕೊಂಡು ಭಾರತಮಾತೆಗಾಗಿಯೇ ಜೀವವನ್ನು ಸಮರ್ಪಣೆಗೈದು ಸ್ಫೂರ್ತಿ, ದೇಶಭಕ್ತಿಯ ಪ್ರೀತಿಯನ್ನ ಬಿತ್ತಿಹೋದವರು ಕಾಶಿರಾಯ. ಉಗ್ರರ ಹಾಟ್ಸ್ಪಾಟ್ಗಳಲ್ಲಿ ಕಾರ್ಯನಿರ್ವಹಿಸುವಾಗ ಕುಟುಂಬಸ್ಥರು ಭೀತಿ ವ್ಯಕ್ತಪಡಿಸಿದಾಗ ಸಾವು ಎಲ್ಲಿ ಬೇಕಾದರೂ ಬರಬಹುದು. ಆದರೆ ಸೇನೆಯಲ್ಲಿದ್ದು ದೇಶಕ್ಕಾಗಿಯೇ ಪ್ರಾಣ ಅರ್ಪಿಸಿದರೆ ಅದು ವೀರಮರಣ ಆಗುತ್ತದೆ. ನನಗೂ ಆ ಮರಣವೇ ಬೇಕು ಅದು ನಿನಗೂ ಹೆಮ್ಮೆ ಅಂತಾ ಪತ್ನಿಯನ್ನು ಸಮಾಧಾನಿಸಿದ್ದರು ಕಾಶಿರಾಯ
ಪಂಜಾಬ್ ಮಹಾರಾಷ್ಟ್ರ ಭಾಗ ಸೇರಿದಂತೆ ಹಲವೆಡೆ ಸೇನೆಯ ಯಶಸ್ವಿ ಅಪರೇಷನ್ನಲ್ಲಿ ಭಾಗಿಯಾಗಿದ್ದರು. ಆದರೆ 2021ರ ಜುಲೈ 1 ರಂದು ನಡೆದ ಆಪರೇಷನ್ ರಕ್ಷಕ್ ವೇಳೆಯಲ್ಲಿ ಕಾಶಿರಾಯ ಅವರ ಎದೆಗೆ ಉಗ್ರರ ಗುಂಡು ತಗುಲಿತ್ತು. ತನ್ನ ಗುಂಡಿಗೆಗೆ ಶತ್ರುವಿನ ಗುಂಡು ಬಿದ್ದರೂ ನೋವಿನಲ್ಲಿಯೂ ಎದುರಾಳಿಯನ್ನ ಸೆದೆಬಡಿದಿದು ಮೂವರು ಉಗ್ರರನ್ನ ಹತ್ಯೆಮಾಡಿ ತಾವೂ ಹುತಾತ್ಮರಾದರು. ತನ್ನ ಮಗನ ಹೆಸರನ್ನ ಭಗತ್ ಸಿಂಗ್ ಅಂತಾನೆ ಇಟ್ಟಿದ್ದಾರೆ. ಇವರ ದೇಶಪ್ರೇಮ, ಶೌರ್ಯ ಮತ್ತು ಸಾಹಸವನ್ನ ಮೆಚ್ಚಿ ರಾಷ್ಟ್ರಪತಿಗಳು ಮರಣೋತ್ತರ ʻಶೌರ್ಯ ಚಕ್ರʼ ನೀಡಿ ಗೌರವಿಸಿದ್ದಾರೆ.
ಪ್ರಕಾಶ್
ಬೆಳಗಾವಿಯ ಟ್ರೂಪ್ ಕಮಾಂಡರ್
ಶತ್ರುವಿನ ಅಡುಗುತಾಣದ ಹುಡುಕಾಟದಲ್ಲಿ ದಾಳಿಯಿಂದ ಹೊಟ್ಟೆಯ ಕರುಳುಹೊರ ಬಂದರೂ ಕೆಚ್ಚಿನಿಂದ ಹೋರಾಡಿದ ಬೆಳಗಾವಿಯ ವೀರಸೇನಾನಿ ಪ್ರಕಾಶ್. ದೇಶದೊಳಗೆ ಇದ್ದು ಉಗ್ರಕೃತ್ಯದಲ್ಲಿ ತೊಡಗುವ, ಉಗ್ರರ ಸ್ಲೀಪರ್ಸೆಲ್ಗಳ ಸರ್ಚ್ ಆಪರೇಷನ್ ಅಂದರೆ ಅದು ಸಾವನ್ನು ಬಗಲಲ್ಲಿಟ್ಟುಕೊಂಡು ಓಡಾಡುವಂತೆ. 2006ರಲ್ಲಿ ಕಾಶ್ಮೀರದ ದಟ್ಟಾರಣ್ಯದಲ್ಲಿ ಭಯೋತ್ಪಾದಕರ ಸರ್ಚ್ ಆಪರೇಷನ್ ನಡೆಯುತ್ತಿತ್ತು.
ಬೆಳಗಾವಿಯ ಟ್ರೂಪ್ ಕಮಾಂಡರ್ ಪ್ರಕಾಶ್ ಈ ಆಪರೇಷನ್ ಮೂಲಕ ಭಯೋತ್ಪಾದಕರ ಎದೆ ನಡುಗಿಸಿದ್ದರು. ಹೀಗಾಗಿ ಹೊಂಚು ಹಾಕಿ ಅವಿತುಕೂತಿದ್ದ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಐದಾರು ಅಡಿಗಳಿಂದ ಬಂದ ಗುಂಡು ಪ್ರಕಾಶ್ ಕೈಯನ್ನು ತುಂಡರಿಸಿತ್ತು. ಹೊಟ್ಟೆಸೀಳಿ ಕರುಳು ಹೊರಬಂತು. ಆದರೂ ಕೆಚ್ಚೆದೆಯ ವೀರ, ಹೊರಬಂದ ಕರುಳನ್ನು ಮತ್ತೆ ಹೊಟ್ಟೆಯೊಳಗೆ ಸೇರಿಸಿಕೊಂಡು ಹೋರಾಡಿದ್ದರು. ರಕ್ತಸ್ರಾವ, ತೀವ್ರ ಗಾಯದಿಂದ ಒದ್ದಾಡಿದರೂ ಡಾಕ್ಟರೇ ನಂಗೆ ಮತ್ತೆ ದೇಶಸೇವೆ ಮಾಡಬೇಕು, ದಯವಿಟ್ಟು ನನ್ನ ಬದುಕಿಸಿ ಅಂತಾ ಕೇಳಿಕೊಂಡಿದ್ದರು. ಕೈಯನ್ನು ಕಳೆದುಕೊಂಡು ಮೈತುಂಬಾ ಸರ್ಜರಿಯ ಗುರುತು ಇದ್ದರೂ ದೇಶಸೇವೆಗೆ ಈಗಲೂ ತಯಾರು ಎನ್ನುತ್ತಾರೆ ಪ್ರಕಾಶ್.
ಕ್ಯಾಪ್ಟನ್ ನವೀನ್ ನಾಗಪ್ಪ
ಹುಬ್ಬಳ್ಳಿ ಮೂಲ ಈಗ ಬೆಂಗಳೂರು
1999ರ ಕಾರ್ಗಿಲ್ ಯುದ್ಧದ ಅಪ್ರತಿಮ ವೀರ ಮತ್ತು ಸೇನಾ ಪದಕ ಪುರಸ್ಕೃತ ಕನ್ನಡಿಗ ಯೋಧ. ಯುದ್ಧ ಭೂಮಿಯಲ್ಲಿ ಶತ್ರುಗಳ ಸಂಹಾರ ಮಾಡಿದ ಸೇನಾನಿ. ಕಾರ್ಗಿಲ್ ವಾರ್ನಲ್ಲಿ, ಕ್ಯಾಪ್ಟನ್ ವಿಕ್ರಮ್ ಭಾತ್ರಾ ರೆಜಿಮೆಂಟ್ನಲ್ಲಿದ್ದ ಕ್ಯಾಪ್ಟನ್ ನವೀನ್ ನಾಗಪ್ಪಗೆ ಮಷ್ಕೋ ಕಣಿವೆಯಲ್ಲಿ ಭಾರತದ ಬಂಕರ್ಗಳ ಜವಾಬ್ದಾರಿ ನೀಡಲಾಗಿತ್ತು. 120 ಸೈನಿಕರ ಗುಂಪಿನ ಮೇಲ್ವಿಚಾರಣೆ ಹೊಣೆ ಹೊತ್ತು ಬಂಕರ್ ಪಾಯಿಂಟ್ ಕಡೆಗೆ ಮುನ್ನಡೆದಿದ್ರು. ಪಾಕಿಸ್ತಾನದ ಬಂಕರ್ಗಳನ್ನ, ಸೇನಾ ನೆಲೆಗಳನ್ನ ಹೊಡೆದುರುಳಿಸಿ ಅಪ್ರತಿಮ ಸಾಹಸ ತೋರಿದ ವೀರಯೋಧರ ಸಾಲಿನಲ್ಲಿ ಕ್ಯಾಪ್ಟನ್ ನವೀನ್ ನಾಗಪ್ಪ ಕೂಡ ಇದ್ದರು.
ವಿಜಯೋತ್ಸವದ ಹುಮ್ಮನಿಸನಲ್ಲಿಯೇ ಶತ್ರುಗಳ ಬಂಕರ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಬಂಕರ್ ಕಡೆಗೆ ಶತ್ರು ಪಡೆಯಿಂಡ ಹ್ಯಾಂಡ್ ಗ್ರೇನೆಡ್ ಎಸೆದರು. ಇದನ್ನು ಶತ್ರುಗಳಿಗೆ ವಾಪಸ್ ಎಸೆಯಲು ನವೀನ್ ಮುಂದಾದರು. ಆದರೆ ಅದು ಹಿಂದಕ್ಕೆ ಉರುಳಿ ಸ್ಫೋಟಗೊಂಡಿತ್ತು. ಎರಡು ಕಾಲಿಗೆ ತೀವ್ರ ಗಾಯವಾಯ್ತು. ಮಾಂಸಗಳು ಛಿದ್ರವಾಗಿದ್ವು. ರಕ್ತಸಿಕ್ತವಾಗಿದ್ದ ದೇಹ, ಛಿದ್ರವಾಗಿದ್ದ ಕಾಲುಗಳ ಮಧ್ಯೆ ಯುದ್ಧಭೂಮಿಯಲ್ಲಿ ಹವಾಮಾನ ವೈಪರೀತ್ಯದ ನಡುವೆ ಸತತ 60 ಗಂಟೆಗಳ ಕಾಲ ಆಹಾರ ಮತ್ತು ನೀರಿಲ್ಲದೆ ಹೋರಾಟ ನಡೆಸಿದ್ದರು. ವಿಜಯೋತ್ಸವದ ಕೂಗು ಮೊಳಗಿಸುವ ಹೊಸ್ತಿಲಲ್ಲಿದ್ದಾಗಲೇ, ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. 8 ಶಸ್ತ್ರಚಿಕಿತ್ಸೆಗಳನ್ನು ಎದುರಿಸಿ 21 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದರು.
ಕ್ಯಾಪ್ಟನ್ ಎಂ ವಿ ಪ್ರಾಂಜಲ್( ಹುತಾತ್ಮ ಯೋಧ)
ಬೆಂಗಳೂರು/ಮಂಗಳೂರು
ಭಾರತೀಯ ಸೇನೆಯ ವೀರಪುತ್ರ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಉಗ್ರರ ಎದೆ ನಡುಗಿಸಿದ ಅಪ್ರತಿಮ ಯೋಧ. ಮೂರನೇ ತರಗತಿಯಲ್ಲಿ ಓದುವಾಗ್ಲೇ ಸೇನೆಗೆ ಸೇರಬೇಕೆಂಬ ಕನಸು ಕಂಡಿದ್ದ ದೇಶಭಕ್ತ. ರಾಷ್ಟ್ರದ ಭದ್ರತೆ, ನಾಗರೀಕರ ಸುರಕ್ಷತೆಗಾಗಿ ಉಗ್ರರ ಜೊತೆ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣತ್ಯಾಗ ಮಾಡಿದ ಹೆಮ್ಮೆಯ ಯೋಧನ ಬದುಕು ಎಲ್ಲರಿಗೂ ಸ್ಫೂರ್ತಿ. ಅದೆಷ್ಟೋ ಅಪರೇಷನ್ಗಳಲ್ಲಿ ಭಾಗಿಯಾಗಿದ್ದ ಪ್ರತಿಭಾನ್ವಿತ ಪ್ರಾಂಜಲ್ 2023 ನವೆಂಬರ್ 22 ರಂದು ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಉಗ್ರರಿದ್ದ ಜಾಗಗಳಲ್ಲಿ ಸ್ಥಳೀಯ ಹೆಣ್ಮಕ್ಕಳು, ಪುಟ್ಟ ಮಕ್ಕಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲೇಬೇಕಿತ್ತು. ಗುಂಡಿನ ದಾಳಿಯ ಮಧ್ಯೆಯೂ ನಾಗರೀಕರ ಪ್ರಾಣ ಉಳಿಸಲು ಸೆಣಸಾಡಿದರು. ಕೊನೆಗೆ ನಾಗರಿಕರನ್ನು ರಕ್ಷಿಸಿ ತನ್ನ ಜೀವವನ್ನೇ ಬಲಿದಾನ ಮಾಡಿದರು. ಮನೆಯಲ್ಲಿ ಪ್ರಾಂಜಲ್ ಲೋಕವನ್ನು ಸೃಷ್ಟಿಸಿಕೊಂಡ ಹೆತ್ತವರು ಸೇನೆಯ ಸಮವಸ್ತ್ರ, ಶೂಸ್ ಹಾಗೂ ತನ್ನ ವಸ್ತುಗಳನ್ನು ಸಂಗ್ರಹಿಸಿಡಲು ಬಳಸ್ತಿದ್ದ ಮಿಲಿಟರಿ ಬಾಕ್ಸ್, ಪ್ರಶಸ್ತಿ ಇವೆಲ್ಲವನ್ನು ಜೋಪಾನವಾಗಿ ಕಾಪಾಡಿಕೊಂಡು ಮನೆಯ ಹಾಲ್ನಲ್ಲಿ ಜೋಡಿಸಿಟ್ಟಿದ್ದಾರೆ.
ಸಿದಗೌಡ ಪಾಟೀಲ್
ಕೆರೂರ ಗ್ರಾಮ, ಚಿಕ್ಕೋಡಿ, ಬೆಳಗಾವಿ
ಸಿದಗೌಡ ಬಸಗೌಡ ಪಾಟೀಲ, ಬಾಲ್ಯದಲ್ಲಿಯೇ ದೇಶಪ್ರೇಮದ ಕಿಚ್ಚು ಸೈನ್ಯ ಸೇರುವಂತೆ ಮಾಡಿತ್ತು. ಕನಸಿನ ಬೆನ್ನೇರಿದ ಯುವಕ ಸೇನೆ ಸೇರಿಕೊಂಡರು. ಆಗಿನ್ನು ಮದ್ವೆಯಾಗಿ ಎರಡು ವರ್ಷವಾಗಿತ್ತಷ್ಟೇ. ವಯಸ್ಸು 27 ಕಾರ್ಗಿಲ್ ವಾರ್ ಸಮಯವದು. ಆಪರೇಷನ್ ವಿಜಯ್ನಲ್ಲಿ ಸಿಆರ್ಪಿಎಫ್ ಯೋಧ ಪಾಟೀಲ ಭಾಗಿಯಾಗಿದ್ದರು.
ವೀರಾವೇಶದಿಂದ ಹೋರಾಡಿ ಶತ್ರುಗಳ ಎದೆ ನಡುಗಿಸಿದ್ದರು. ಆದರೆ ವೀರ ಯೋಧ ಉಗ್ರರ ಜೊತೆಗೆ ಸೆಣಸಾಟ ಮಾಡುತ್ತಿರುವಾಗ ಎದೆಗೆ ಬರೋಬ್ಬರಿ 9 ಗುಂಡುಗಳು ತಗುಲಿತ್ತು. ಆದರೂ ಧೃತಿಗೆಡದೇ ಶತ್ರುಗಳ ಬೇಟೆಯನ್ನು ಕೈಬಿಡದೇ ಯುದ್ಧಭೂಮಿಯಲ್ಲಿ ಹೋರಾಡುತ್ತಲೇ ಭಾರತ ಮಾತೆಯ ಮಡಿಲಲ್ಲಿ ಮಲಗಿ ಹುತಾತ್ಮರಾದರು.
ಇಡೀ ಗ್ರಾಮವು ಪ್ರೀತಿಯ ಪುತ್ರನನ್ನು ಕಳಕೊಂಡು ಮೌನದಿಂದ ರೋಧಿಸಿತು. ಹೆಮ್ಮೆಯ ಯೋಧನ ನೆನಪಿಗಾಗಿ ಈಗ ಪುಟ್ಟ ದೇಗುಲವನ್ನು ಕಟ್ಟಿ ದಿನನಿತ್ಯವೂ ವೀರನ ಧೈರ್ಯ ಶೌರ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಯೋಧನಿಗಿಲ್ಲಿ ದೇವರ ಸ್ಥಾನ ಕೊಟ್ಟ ಗ್ರಾಮಸ್ಥರು ನಿತ್ಯವೂ ಹುತಾತ್ಮ ಯೋಧನಿಗೆ ಪೂಜೆ ಸಲ್ಲಿಸಿ ಸ್ಮರಿಸಿಕೊಳ್ಳುತ್ತಾರೆ. ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನದಂದು ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು, ಮಾಜಿ ಸೈನಿಕರು ಸೇರಿ ಹುತಾತ್ಮ ಯೋಧನ ದೇವಸ್ಥಾನ ಎದುರು ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸುತ್ತಿದ್ದಾರೆ.
ಲ್ಯಾನ್ಸ್ನಾಯಕ್ ಹನುಮಂತಪ್ಪ ಕೊಪ್ಪದ್ – ಹುತಾತ್ಮ ಯೋಧ
ಪಾಕಿಸ್ತಾನ, ದೇಶದೊಳಗೆ ಅಡಗಿರುವ ಉಗ್ರರು, ದೇಶ ದ್ರೋಹಿಗಳು ಮಾತ್ರ ಯೋಧರ ಶತ್ರುಗಳಲ್ಲ. ಪ್ರತಿಕೂಲ ಹವಾಮಾನವೂ ಯೋಧರ ಪಾಲಿಗೆ ಶತ್ರುವಾಗುತ್ತದೆ. ಕೋಟಿ ಕೋಟಿ ಭಾರತೀಯರು ಪ್ರಾರ್ಥಿಸಿದರೂ ಹಿಮಪಾತದೊಳಗೆ ಸಿಲುಕಿದ್ದ ಹನುಮಂತಪ್ಪ ಕೊಪ್ಪದ್ ಬಲಿಪಡೆದದ್ದು ಕೂಡ ಸಿಯಾಚಿನ್ ಹಿಮಪಾತ. 19 ಸಾವಿರ ಅಡಿ ಎತ್ತರ, ಮೂಳೆಗಳೇ ಮಂಜುಗಟ್ಟುವ ವಾತಾವರಣ, ತೀವ್ರ ಹಿಮಗಾಳಿ ನಾವುನೀವು ಊಹಿಸಲು ಸಾಧ್ಯವೇ ಇಲ್ಲದ ಸಿಯಾಚಿನ್ನಂತಹ ಸವಾಲಿನ ಜಾಗದಲ್ಲಿ ಕೊಪ್ಪದ್ ಕರ್ತವ್ಯದಲ್ಲಿದ್ದರು.
16 ಫೆಬ್ರವರಿ ಹನುಮಂತಪ್ಪ ಕೊಪ್ಪದ್ & ಟೀಮ್ ಅಪರೇಷನ್ ಮೇಘದೂತ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾಗ ಹಿಮಪಾತವಾಗಿ ಹತ್ತುಮಂದಿ ಯೋಧರು ಹಿಮದೊಳಗೆ ಹುದುಗಿಹೋಗಿ ಹುತಾತ್ಮರಾಗಿದ್ರು. ಇವರ ಮಧ್ಯೆ ಮೃತ್ಯುಂಜಯನಂತೆ ನಮ್ಮ ಧಾರವಾಡದ ಹನುಮಂತಪ್ಪ ಕೊಪ್ಪದ್ ಆರು ದಿನಗಳ ಕಾಲ ಹಿಮದಡಿ ಜೀವವನ್ನು ಹಿಡಿದುಕೊಂಡು ಬದುಕಿದ್ದರು.
ಕೊಪ್ಪದ್ ಹಿಮದೊಳಗೆ ಹೂತು ಹೋಗಿದ್ದರೂ ಜೀವವನ್ನು ಹಿಡಿದುಕೊಂಡಿದ್ದು ಸೋಜಿಗ ವಿಸ್ಮಯ ಯೋಧನ ಕೆಚ್ಚೆದೆಗೆ ಸಾಕ್ಷಿಯಾಗಿತ್ತು. ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ ಕೊಪ್ಪದ್ರನ್ನು ಹೊರತೆಗೆದು ಏರ್ಲಿಫ್ಟ್ ಮಾಡಿ ದೆಹಲಿಯ ಆಸ್ಪತ್ರೆಗೆ ಸಾಗಿಸಿದ್ದರು. ಪ್ರತಿ ಭಾರತೀಯರು ಈ ಯೋಧನ ಉಳಿವಿಗಾಗಿ ಪ್ರಾರ್ಥಿಸಿದ್ದರು. ಪ್ರಧಾನಿ ಮೋದಿಯೂ ಕೂಡ ಆಸ್ಪತ್ರೆಗೆ ಭೇಟಿಕೊಟ್ಟಿದ್ದರು.
ಅತ್ತ ಹನುಮಂತಪ್ಪ ಕುಟುಂಬ ಅವರ ಎರಡು ವರ್ಷದ ಮಗು ಕೂಡ ತಂದೆ ವಾಪಸ್ ಬರುತ್ತಾರೆ ಎಂದು ಆಸೆಗಣ್ಣಿನಿಂದ ಕಾಯುತ್ತಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು, ಪುಟ್ಟ ಮಗಳು ಅಪ್ಪನ ಎದೆಗೊಮ್ಮೆ ಕೈಯಿಟ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದಂತೆ ಕೊಪ್ಪದ್ ಅಲ್ಲೆ ಕೊನೆಯುಸಿರು ಎಳೆದರು. ಕೊಪ್ಪದ್ ಕೊನೆಯ ಕ್ಷಣ ದೇಶದ ಪ್ರಾರ್ಥನೆ ಸೈನಿಕನ ಶಕ್ತಿಯ ಅನಾವರಣವಾಗಿದೆ ನನ್ನ ಮಗಳು ಸೈನ್ಯಕ್ಕೆ ಸೇರುತ್ತಾಳೆ ಎಂದು ಕೊಪ್ಪದ್ ಪತ್ನಿ ಹೆಮ್ಮೆಯಿಂದ ಹೇಳುತ್ತಾರೆ. ಅತ್ತ ಮಗಳು ಕೂಡ ಅಪ್ಪನಂತೆ ನಾನಾಗಬೇಕು ಎಂದು ಹುಮ್ಮನಿಸಿನಿಂದ ಮಾತಾನಾಡುತ್ತಾರೆ.
ಎಂ ಸಾದಿಕ್
ತುರುವೇಕೆರೆ, ತುಮಕೂರು
ತಮ್ಮ 18 ನೇ ವರ್ಷದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಪುಲ್ವಾಮಾ ದಾಳಿ ಭಾರತೀಯ ಇತಿಹಾಸದಲ್ಲಿ ಕರಾಳ ದಿನ. ಈ ದಾಳಿಯ ನಂತರ ನೆತ್ತರ ಹರಿಸಿದ ಉಗ್ರರ ಸಾವಿಗಾಗಿ ರಿವೆಂಜ್ಗಾಗಿ ಪ್ರತಿ ಭಾರತೀಯರು ಹಂಬಲಿಸುತ್ತಿದ್ದರು. ಕುಲ್ಗಾಮ್ ಮತ್ತು ಶೋಫಿಯಾನ್ದ ದಟ್ಟಾರಣ್ಯದ ಮಧ್ಯೆ ಒಳನುಸುಳಿದ ಉಗ್ರರ ಗುಂಡಿಗೆ ಸೀಳಿದವರಲ್ಲಿ ಸಾದಿಕ್ ಕೂಡ ಒಬ್ಬರು. ಈ ಕಾರ್ಯಾಚರಣೆಯಲ್ಲಿ 7 ಮಂದಿ ಪಾಕ್ ಉಗ್ರರನ್ನು ಹತ್ಯೆ ಮಾಡಿತ್ತು ಇವರ ತಂಡ. ಇದರಲ್ಲಿ ಸಾದಿಕ್ ಪಾತ್ರ ಪ್ರಮುಖ ಆಗಿತ್ತು. ಅದಕ್ಕೆ ಇವರಿಗೆ ಸೇನೆಯಿಂದ ಕೊಡುವ ಶೌರ್ಯ ಪ್ರಶಸ್ತಿ ಲಭಿಸಿದೆ.
2016 ರಿಂದ 2018 ರ ವರೆಗೆ ಜಮ್ಮು ಕಾಶ್ಮೀರದಲ್ಲಿ ನಡೆದ ಆಪರೇಶನ್ ಆಲ್ ಔಟ್ ಕಾರ್ಯಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎನ್ಎಸ್ ಜಿ ತಂಡದಲ್ಲಿ 2 ವರ್ಷ ಸೇವೆ, ವಿಶ್ವ ಸಂಸ್ಥೆ ಶಾಂತಿ ಸೇನೆಯ ದಕ್ಷಿಣ ಸುಡಾನ್ ನಲ್ಲಿ 1 ವರ್ಷ ಸೇವೆ ಸಲ್ಲಿಸಿ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಿಗೆ ಎರಡು ಬಾರಿ ಸೇನೆಯಿಂದ ಕೊಡಮಾಡುವ ಶೌರ್ಯ ಪ್ರಶಸ್ತಿ, ಒಂದು ಬಾರಿ ಸೇನಾ ಮುಖ್ಯಸ್ಥರಿಂದ ಪ್ರಶಂಸನಾ ಪತ್ರ ಸಂದಿದೆ. ಪ್ಯಾರಾ ಸ್ಪೆಷಲ್ ಪೋರ್ಸ್ನಲ್ಲಿ 20 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ್ದಾರೆ.
ಬಿ ರಮೇಶ್, ಮೈಸೂರು
ಉತ್ತರ ಪ್ರದೇಶದಲ್ಲಿ ಮೊದಲ ಕರ್ತವ್ಯ ನಿರ್ವಹಿಸಿದ್ದರು. ಶತ್ರುಗಳ ಮೇಲೆ ಬಹು ದೂರದಿಂದಲೇ ಗುಂಡು ಹಾರಿಸುವ ಬ್ಯಾರೆಲ್ ಫೈರಿಂಗ್ ಯೂನಿಟ್ನಲ್ಲಿ ಇವರಿಗೆ ಕೆಲಸ. 2017 ರಲ್ಲಿ ಕಾಶ್ಮೀರದ ಬೇಸ್ ಕ್ಯಾಂಪ್ನಲ್ಲಿ ರಮೇಶ್ ಕೆಲಸ ನಿರ್ವಹಿಸುವಾಗ ಬೇಸ್ ಕ್ಯಾಂಪ್ ಮೇಲೆ ಪಾಕ್ ಉಗ್ರರು ದಾಳಿ ಮಾಡುತ್ತಾರೆ. ಮೂವರು ಉಗ್ರರು ಏಕಾಏಕಿ ಇಡೀ ಕ್ಯಾಂಪ್ ಮೇಲೆ ಗುಂಡಿನ ಮಳೆ ಸುರಿಸುತ್ತಾರೆ. ಆಗ ಉಗ್ರರ ಜೊತೆಗೆ ದಿಟ್ಟತನದಿಂದ ಕಾದಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತಾರೆ. ಆದರೆ ಈ ದಾಳಿಯಲ್ಲಿ ರಮೇಶ್ಗೆ ಮೂರು ಬುಲೆಟ್ ಬೀಳುತ್ತದೆ. ಪರಿಣಾಮ ರಮೇಶ್ ಪ್ರಜ್ಞೆ ತಪ್ಪುತ್ತಾರೆ.
ರಮೇಶ್ ಅವರನ್ನು ಹೆಲಿಕಾಪ್ಟರ್ ಮೂಲಕ ಶ್ರೀನಗರದ ಆಸ್ಪತ್ರೆಗೆ ಸೇರಿಸಲಾಗುತ್ತದೆ. ಎರಡು ದಿನದ ನಂತರ ಪ್ರಜ್ಞೆ ಬರುತ್ತದೆ. ಆಗಲೇ ರಮೇಶ್ ಅವರಿಗೆ ತಾನು ಬದುಕಿದ್ದೇನೆ ಎನ್ನುವುದು ಗೊತ್ತಾಗುತ್ತದೆ. ನಂತರ ಹೆಚ್ಚು ಕಡಿಮೆ ಮೂರು ವರ್ಷ ಆಸ್ಪತ್ರೆಯಲ್ಲೇ ರಮೇಶ್ ಇರುತ್ತಾರೆ. ರಮೇಶ್ ಬೆನ್ನುಮೂಳೆಗೆ ಬುಲೆಟ್ ಬಿದ್ದ ಕಾರಣ ನಡೆಯಲು ಅಸಾಧ್ಯ, ವೀಲ್ ಚೇರ್ನಲ್ಲಿಯೇ ಬದುಕು ಸಾಗಿಸಬೇಕು. ಜೀವನಪ್ರೀತಿ ದೇಶಭಕ್ತಿ ಒಂದಿನಿತು ಕಡಿಮೆಯಾಗಿಲ್ಲ. ಈಗಲೂ ದೇಶಸೇವೆಗಾಗಿಯೇ ಇವರ ಮನಸು ಮಿಡಿಯುತ್ತಿದೆ.
ಶಿವಲಿಂಗೇಶ್ವರ ಪಾಟೀಲ
ಗುಂಡೇನಹಳ್ಳಿ ಗ್ರಾಮ, ಬ್ಯಾಡಗಿ, ಹಾವೇರಿ
ಶಿವಲಿಂಗೇಶ್ವರ ಪಾಟೀಲ ಶತ್ರುಗಳ ಎದೆ ನಡುಗಿಸುತ್ತಿದ್ದ ಯೋಧ. ಇವರ ತಂದೆಯೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ತಂದೆ ಸೇನೆಯಲ್ಲಿರುವಾಗಲೇ ಮಗನೂ ಸೇನೆಗೆ ಸೇರಿದ್ದರು. ಇಡೀ ಕುಟುಂಬದಲ್ಲಿ ಹೆಮ್ಮೆ ಸಂಭ್ರಮ. 7 ವರ್ಷಗಳ ಕಾಲ ಸೇನೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಇವರು 2019ರಲ್ಲಿ ಜಮ್ಮುಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ಪಾಕ್ ಉಗ್ರರ ವಿರುದ್ಧದ ಅಪರೇಷನ್ನಲ್ಲಿ ಭಾಗಿಯಾಗಿದ್ರು.
ಕ್ವಿಕ್ ರಿಯಾಕ್ಷನ್ ಟೀಮ್ ನಲ್ಲಿ ಇದ್ದ ಶಿವಲಿಂಗೇಶ್ವರ ಉಗ್ರರ ಜೊತೆ ಕೆಚ್ಚಿನಿಂದ ಹೋರಾಡಿ ಹೆಡೆಮುರಿ ಕಟ್ಟಿದ್ದರು. ಪಾಪಿ ಉಗ್ರರ ಜೊತೆ ಸೆಣೆಸಾಡುತ್ತಾಲೇ ಶಿವಲಿಂಗೇಶ್ವರ್ ಅವರಿಗೆ ಗುಂಡು ತಗುಲಿತ್ತು. ತೀವ್ರ ರಕ್ತಸ್ರಾವವಾಗಿ 12 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ್ರು.! ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಹುತಾತ್ಮರಾದ್ರು. ಚಿಕ್ಕ ವಯಸಿನಲ್ಲಿ ದಿಟ್ಟ ಸಾಹಸ ತೋರಿದ ಇವ್ರ ನೆನಪಿನಲ್ಲಿ ತಂದೆ ಕುಟುಂಬಸ್ಥರು ಗ್ರಾಮಸ್ಥರ ಜೊತೆ ಸೇರಿ ಗ್ರಾಮದ ಪ್ರಮುಖ ವೃತ್ತದಲ್ಲಿ ಯೋಧನ ಹೆಸರಿನಲ್ಲಿ ದೇಗುಲವನ್ನು ಕಟ್ಟಿದ್ದರು. ಇದಕ್ಕೆ ನಿತ್ಯ ಪೂಜೆಯೂ ನಡೆಯುತ್ತಿದೆ. ಮಕ್ಕಳಿಗಂತೂ ಈ ಸ್ಮಾರಕ ಅತ್ಯಂತ ಅಚ್ಚುಮೆಚ್ಚು.!












