ಕಾರವಾರ: ಇಲ್ಲಿನ ಜೈಲಿನಲ್ಲಿ ಮತ್ತೆ ಕೈದಿಗಳು ದಾಂಧಲೆ ಸೃಷ್ಟಿಸಿದ್ದಾರೆ. ಜೈಲಿನಲ್ಲಿದ್ದ ಟಿ.ವಿ ಸೇರಿದಂತೆ ಹಲವು ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.
ಮಂಗಳೂರಿನ ಆರು ಆರೋಪಿಗಳಿಂದ ಜೈಲಿನಲ್ಲಿ ಗಲಾಟೆಯಾಗಿದೆ. ವಸ್ತುಗಳನ್ನೆಲ್ಲ ಪುಡಿಗಟ್ಟಿದ್ದಾರೆ. ಕಾರವಾರ ನಗರ ಠಾಣೆ ಪೊಲೀಸರ ತಂಡ ಜೈಲಿಗೆ ದೌಡಾಯಿಸಿ ಪರಿಶೀಲನೆ ನಡೆಸಿದೆ.
ಮೊನ್ನೆಯಷ್ಟೇ ಜೈಲಿನಲ್ಲಿ ಮಾದಕ ವಸ್ತುಗಳ ಬಳಕೆಗೆ ಬ್ರೇಕ್ ಹಾಕಲು ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲರ್ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಹಲ್ಲೆ ಮಾಡಿದ್ದರು. ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಲಾಗಿತ್ತು. ಡಕಾಯಿತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ರೌಡಿಗಳು ಆರೋಪಿಗಳಾಗಿದ್ದಾರೆ.
ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರು ಆರೋಪಿಗಳನ್ನ ಕಾರವಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಮೊನ್ನೆ ಹಲ್ಲೆ ಘಟನೆ ಬೆನ್ನಲ್ಲೇ ಇಂದು ಉಳಿದ ಸಹಚರರಿಂದ ಜೈಲಿನಲ್ಲಿ ದಾಂಧಲೆ ನಡೆದಿದೆ. ಕಾರವಾರ ಡಿವೈಎಸ್ಪಿ ಗಿರೀಶ್ ಜೈಲಿನಲ್ಲಿ ಮೊಕ್ಕಾಂ ಹೂಡಿದ್ದಾರೆ.

