– ಬೇರೆ ಬ್ಯಾಂಕ್ನಲ್ಲಿ ಚಿನ್ನ ಅಡವಿಟ್ಟು 2.5 ಕೋಟಿ ಸಾಲ
ಮಂಗಳೂರು: ಮಂಗಳೂರು (Mangaluru) ಸಹಕಾರಿ ಬ್ಯಾಂಕ್ ಒಂದರಲ್ಲಿ ಭಾರಿ ಗೋಲ್ಡ್ ಗೋಲ್ಮಾಲ್ ನಡೆದಿದೆ. ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟ ಚಿನ್ನಕ್ಕೆ ಅದೇ ಬ್ಯಾಂಕ್ನ ಕ್ಯಾಷಿಯರ್ ಕನ್ನ ಹಾಕಿ ಎಗರಿಸಿದ್ದಾನೆ. ಕದ್ದ ಬಂಗಾರವನ್ನು ಬೇರೊಂದು ಬ್ಯಾಂಕ್ನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಹಣ ಸಾಲ ಪಡೆದು ಮಜಾ ಮಾಡಿ, ಈಗ ಸಿಕ್ಕಿಬಿದ್ದಿದ್ದಾನೆ.
ಮಂಗಳೂರಿನ ಶಕ್ತಿನಗರದ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನಲ್ಲಿ ಅದೇ ಬ್ಯಾಂಕ್ನ ಕ್ಯಾಷಿಯರ್ ಗ್ರಾಹಕರು ಅಡವಿಟ್ಟ ಚಿನ್ನಕ್ಕೆ ಕನ್ನ ಹಾಕಿದ್ದಾನೆ. ಪ್ರೀತೇಶ್ ಕಳೆದ ಕೆಲ ವರ್ಷಗಳಿಂದ ಈ ಬ್ಯಾಂಕ್ನಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಅದರ ಜೊತೆಗೆ ಗ್ರಾಹಕರು ಸಾಲಕ್ಕಾಗಿ ಚಿನ್ನವನ್ನು ಅಡವಿಟ್ಟಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ. ಇತ್ತ ಗ್ರಾಹಕರು ಬ್ಯಾಂಕ್ನ ಖಜಾನೆಗೆ ಚಿನ್ನ ಒಪ್ಪಿಸುತ್ತಿದ್ದಂತೆಯೇ ಪ್ರೀತೇಶ್ಗೆ ಚಿನ್ನದ ಮೇಲಿನ ವ್ಯಾಮೋಹ ಹೆಚ್ಚಾಗಿದೆ. ಎರಡು ಸಾವಿರಕ್ಕೂ ಅಧಿಕ ಗ್ರಾಹಕರು ಇರುವ ಬ್ಯಾಂಕ್ನ ಇಪ್ಪತ್ತಾರು ಗ್ರಾಹಕರ ಚಿನ್ನಕ್ಕೆ ಪ್ರೀತೇಶ್ ಕನ್ನ ಹಾಕಿದ್ದಾನೆ. ಬ್ಯಾಂಕ್ನ ದಾಖಲೆಗಳಲ್ಲಿ ಚಿನ್ನಕ್ಕಾಗಿ ಮಾಡಿದ ಲೋನ್ಗಳು ಕ್ಲಿಯರ್ ಆಗಿದೆ ಅಂತಾ ನಕಲಿ ದಾಖಲೆ ಸೃಷ್ಟಿಸಿ ಲಾಕರ್ನ ಚಿನ್ನವನ್ನು ಎಗರಿಸಿದ್ದಾನೆ. ಹೀಗೆ ಎಗರಿಸಿದ್ದು ಬರೋಬ್ಬರಿ 5.80 ಕೋಟಿ ಮೌಲ್ಯದ ಆರೂವರೆ ಕೆ.ಜಿ ಚಿನ್ನ. ಇದನ್ನೂ ಓದಿ: ರೈಲ್ವೆ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು: ಸಿಎಂ ಆಗ್ರಹ
ಇತ್ತ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಪ್ರೀತೇಶ್ ದುಬೈಗೆ ಹಾರಿದ್ದಾನೆ. ಬ್ಯಾಂಕ್ನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಪ್ರೀತೇಶ್ ಮಂಗಳೂರಿಗೆ ಬಂದು ಲಾಯರ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಕದ್ದ ಚಿನ್ನದ ಪೈಕಿ ಸ್ಥಳೀಯ ಮತ್ತೊಂದು ಸಹಕಾರಿ ಬ್ಯಾಂಕ್ನಲ್ಲಿ ಎರಡು ಕೆ.ಜಿ ಮುನ್ನೂರು ಗ್ರಾಂ ಬಂಗಾರವನ್ನು ಅಡವಿಟ್ಟು ಅಲ್ಲಿಂದ ಎರಡೂವರೆ ಕೋಟಿ ರೂಪಾಯಿಯನ್ನು ಸಾಲ ಪಡೆದುಕೊಂಡಿದ್ದ. ಒಟ್ಟು 26 ಮಂದಿ ಗ್ರಾಹಕರ ಚಿನ್ನವನ್ನು ಪ್ರೀತೇಶ್ ಎಗರಿಸಿದ್ದು, ಹತ್ತು ಮಂದಿ ಬ್ಯಾಂಕ್ಗೆ ಬಂದು ತಮ್ಮ ಚಿನ್ನ ಎಂದು ಖಚಿತಪಡಿಸಿಕೊಂಡಿದ್ದಾರೆ.
ಈ ನಡುವೆ ಪ್ರೀತೇಶ್ ಬ್ಯಾಂಕ್ನಿಂದ ಕೊಂಡುಹೋದ ಚಿನ್ನವನ್ನು ಕೊಡೋದಾಗಿ ಹೇಳಿದ್ದ. ಶೇಖ್ ಮಹಮ್ಮದ್ ಎಂಬಾತನ ನೆರವನ್ನೂ ಈ ಕುಕೃತ್ಯಕ್ಕೆ ಪಡೆದಿದ್ದ. ಸಿಕ್ಕಿಬಿದ್ದಾಗ ಗ್ರಾಹಕರಿಗೆ ನಕಲಿ ಚಿನ್ನವನ್ನು ಕೊಡಲು ಎಲ್ಲಾ ಚಿನ್ನಾಭರಣವನ್ನು ನಕಲಿಯಾಗಿ ತಯಾರಿಸಿಟ್ಟಿದ್ದರು. ಪೊಲೀಸರು ಪ್ರೀತೇಶ್ ಬಳಿಕ ಮಹಮ್ಮದ್ನನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಮಹಮ್ಮದ್ನಿಂದ ನಾಲ್ಕೂವರೆ ಕೆ.ಜಿ ನಕಲಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದು, ಈ ನಕಲಿ ಚಿನ್ನವನ್ನು ಅಸಲಿ ಅಂತಾ ಮಾಡೋಕೆ ಪ್ರಯತ್ನ ಪಟ್ಟಿರೋದು ಕೂಡಾ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಮಾಸ್ ಲೀಡರ್ – ಬಿಆರ್ ಪಾಟೀಲ್ ಸ್ಪಷ್ಟನೆ