ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ಇಲಾಖೆಯ ಮಹಾ ವಂಚನೆ ಬಟಾಬಯಲಾಗಿದೆ. ಕೋಟಿಗಟ್ಟಲೆ ತೆರಿಗೆ ವಂಚಿಸುವ ಐಷಾರಾಮಿ ಕಾರು ಮಾಲೀಕರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳೇ ಸಾಥ್ ನೀಡಿರುವ ವಿಚಾರ ಬಹಿರಂಗವಾಗಿದೆ.
ಸಾರಿಗೆ ಇಲಾಖೆಯ ಅಧಿಕಾರಿಗಳಿಂದಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ವಂಚನೆಯಾಗಿದೆ. ಮರ್ಸಿಡಿಸ್ ಬೆಂಜ್ ಎಎಂಜಿಜಿ 63 ಕಾರಿನ ಇಂಜಿನ್ ನಂಬರ್ ಚೇಸಿಸ್ ನಂಬರ್ ಎಲ್ಲವೂ ಸರಿಯಾಗಿದೆ. ಆದರೆ ಇಲ್ಲಿ ಬದಲಾಗಿರುವುದು ಈ ಕಾರಿನ ಮಾಡೆಲ್ ನಂಬರ್. ಇದೇ ಬೆಂಜ್ ಜಿ63 ಕಾರನ್ನ ಮಂಗಳೂರು ಮೂಲದ ನಿಹಾಲ್ ಅಹ್ಮದ್ ಎಂಬಾತ 2017ರಲ್ಲಿ ಬೆಂಗಳೂರಿನ ಶೋರೂಮ್ ವೊಂದರಿAದ ಖರೀದಿಸಿರುತ್ತಾನೆ. ಆದರೆ ಅಂದಿನಿಂದ ಈ ಕಾರಿಗೆ ನೋಂದಣಿ ನಂಬರ್ ಭಾಗ್ಯ ಮಾತ್ರ ಸಿಗುವುದಿಲ್ಲ. 2017ರಿಂದ 2025ರವರೆಗೂ ನಂಬರ್ ಪ್ಲೇಟ್ ಇಲ್ಲದ ಈ ಕಾರು ಮಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ರಾಜಾರೋಷವಾಗಿ ಟೆಂಪರರಿ ರಿಜಿಸ್ಟ್ರೇಷನ್ ಬೋರ್ಡ್ ಹಾಕಿ ಓಡಾಡಿದೆ.
2025ರಲ್ಲಿ ಕಾರು ಮಾಲೀಕ ನಿಹಾಲ್ ಅಹ್ಮದ್ ಇದೇ ಕಾರನ್ನ ಮಂಗಳೂರಿನ ನಿರಾಜ್ ಶರ್ಮ ಎನ್ನುವವರಿಗೆ ಮಾರಾಟ ಮಾಡುತ್ತಾನೆ. ಮಾರಾಟ ಮಾಡುವ ಕಾರಿನ ಇಂಜಿನ್ ನಂಬರ್, ಚೇಸಿಸ್ ನಂಬರ್ ಸೇಮ್ ಇರುತ್ತೆ. ಆದರೆ ಇಲ್ಲಿ ಕಾರಿನ ಮಾಡೆಲ್ ನಂಬರ್ ಬದಲಾಗುತ್ತೆ. ಅರ್ಥಾತ್ ನ್ಯಾಯಯುತವಾಗಿ ಇದೆ 2.5 ಕೋಟಿ ಮೌಲ್ಯದ ಎಎಂಜಿಜಿ 63 ಕಾರಿಗೆ 20 ರಿಂದ 22 ಲಕ್ಷ ರೋಡ್ ಟ್ಯಾಕ್ಸ್ ಪಾವತಿ ಮಾಡಬೇಕಾಗುತ್ತೆ. ಆದರೆ, ಇದರಿಂದ ತಪ್ಪಿಸಿಕೊಳ್ಳೋಕೆ ಕಾರಿನ ಮಾಡೆಲ್ ನಂಬರನ್ನೇ ಸಾರಿಗೆ ಇಲಾಖೆಯ ಅಧಿಕಾರಿಗಳು ಬದಲಾಯಿಸುತ್ತಾರೆ. ಸುಮಾರು 50 ಲಕ್ಷ ಮೌಲ್ಯದ ಮರ್ಸಿಡಿಸ್ ಬೆಂಜ್ ಜಿಎಲ್ಎ 200 ಮಾಡೆಲ್ ನಂಬರ್ ನಮೂದಿಸಲಾಗುತ್ತೆ. ಕಡಿಮೆ ಬೆಲೆಯ ಈ ಕಾರ್ ಮಾಡೆಲ್ಗೆ ಕಟ್ಟೋಕೆ ಬರುವ ತೆರಿಗೆ ಮೊತ್ತ ಕೇವಲ 5 ರಿಂದ 6 ಲಕ್ಷ. ಕೇವಲ ಲಕ್ಷ ಲಕ್ಷ ತೆರಿಗೆ ಕಟ್ಟೋದ್ರಿಂದ ವಾಹನ ಮಾಲೀಕರನ್ನ ಬಚಾವ್ ಮಾಡೋದಕ್ಕೆ ಮಂಗಳೂರಿನ ಸಾರಿಗೆ ಇಲಾಖೆಯ ಅಧಿಕಾರಿಗಳೇ ಕಾರಿನ ಮಾಡೆಲ್ ನಂಬರನ್ನು ಕಡಿಮೆ ಬೆಲೆಯ ಕಾರಿನ ಮಾಡೆಲ್ ನಂಬರ್ಗೆ ಮಾರ್ಪಾಡು ಮಾಡುತ್ತಾರೆ. ಶ್ರೀಧರ್ ಮಲ್ಲಾಡ್ ಅನ್ನೋ ಪ್ರಾದೇಶಿಕ ಸಾರಿಗೆ ಅಧಿಕಾರಿಯ ಕೃಪಾ ಕಟಾಕ್ಷದಿಂದಲೇ ಈ ವಂಚನೆ ನಡೆದಿದೆ.
ತೆರಿಗೆ ವಂಚನೆಗೈದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದ ಈ ಕಾರು ಮೈಸೂರಿನಲ್ಲಿ ಸಾರಿಗೆ ಇಲಾಖೆಯ ಬಲೆಗೆ ಬಿದ್ದಿದೆ. ಐಷಾರಾಮಿ ಕಾರುಗಳ ತಪಾಸಣೆ ವೇಳೆ ಈ ಮಹಾ ವಂಚನೆ ಬಟಾಬಯಾಲಾಗಿದೆ. ಸದ್ಯ ಮೈಸೂರಿನಲ್ಲಿ ಈ ಕಾರನ್ನ ಸೀಜ್ ಮಾಡಲಾಗಿದೆ. ಶಿವಮೊಗ್ಗ ವಿಭಾಗೀಯ ಸಾರಿಗೆ ಇಲಾಖೆಯ ಜಂಟಿ ಆಯುಕ್ತರ ಆದೇಶದಂತೆ ತನಿಖೆ ಕೈಗೊಳ್ಳಲಾಗಿದೆ. ಕಾರಿನ ಆರ್ಸಿಯನ್ನ ಬ್ಲಾಕ್ಲಿಸ್ಟ್ಗೆ ಸೇರಿಸಲಾಗಿದೆ.