ನವದೆಹಲಿ: ಕಂದಾಯ ಇಲಾಖೆಯ (Indian Revenue Service) ಅಧಿಕಾರಿಯೊಬ್ಬರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಬಿಐ (CBI) ಅಧಿಕಾರಿಗಳು ಮುಂಬೈ (Mumbai), ಪಂಜಾಬ್ (Punjab) ಮತ್ತು ದೆಹಲಿಯಲ್ಲಿ (Delhi) ದಾಳಿ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗೆ ಸೇರಿರುವ 1 ಕೋಟಿ ನಗದು ಹಣ, 3.5 ಕೆಜಿ ಚಿನ್ನ (Gold) ಹಾಗೂ 2 ಕೆಜಿ ಬೆಳ್ಳಿ ಪತ್ತೆಯಾಗಿದೆ.
25 ಲಕ್ಷ ರೂ. ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಂದಾಯ ಅಧಿಕಾರಿ ಅಮಿತ್ ಕುಮಾರ್ ಸಿಂಗಲ್ ಮತ್ತು ಅವರ ಸಹಚರರ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, 1 ಕೋಟಿ ನಗದು, ಅಪಾರ ಪ್ರಮಾಣದ ಚಿನ್ನ ಹಾಗೂ ಬೆಳ್ಳಿ ಪತ್ತೆಯಾಗಿದೆ. ಇದನ್ನೂ ಓದಿ: ʻಆಪರೇಷನ್ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್ ಗುಂಪು; ವಿಡಿಯೋ ವೈರಲ್
ಸಿಂಗಲ್ ಅವರು 2007 ರ ಬ್ಯಾಚ್ನ ಐಆರ್ಎಸ್ ಅಧಿಕಾರಿಯಾಗಿದ್ದು, ದೆಹಲಿಯ ತೆರಿಗೆ ಪಾವತಿದಾರರ ಸೇವೆಗಳ ನಿರ್ದೇಶನಾಲಯದಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದರು. ಅವರು ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ತನಿಖೆಯ ಸಮಯದಲ್ಲಿ ಅವರು ದೆಹಲಿ, ಮುಂಬೈ ಮತ್ತು ಪಂಜಾಬ್ನಲ್ಲಿ ಆಸ್ತಿ ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಈ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು.
ದಾಳಿ ವೇಳೆ, ವಿವಿಧ ಬ್ಯಾಂಕ್ಗಳಲ್ಲಿ ಲಾಕರ್ ಇರುವ ಬಗ್ಗೆ ಹಾಗೂ 25 ಬ್ಯಾಂಕ್ ಖಾತೆಗಳ ದಾಖಲೆಗಳು ಪತ್ತೆಯಾಗಿವೆ. ಎಲ್ಲಾ ಚರ ಮತ್ತು ಸ್ಥಿರ ಆಸ್ತಿಗಳ ಒಟ್ಟು ಮೌಲ್ಯವನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಂಗಲ್ ಅವರು, ಪಿಜ್ಜಾ ಚೈನ್ ಮಾಲೀಕರ ಆದಾಯ ತೆರಿಗೆ ನೋಟಿಸ್ ಇತ್ಯರ್ಥಕ್ಕೆ 45 ಲಕ್ಷ ರೂ. ಲಂಚ ಕೇಳಿದ್ದರು. ಅದರಂತೆ ಮೊದಲ ಕಂತಿನಲ್ಲಿ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ | ಜೂ.9ರಂದು ಸರ್ವಪಕ್ಷಗಳ ನಿಯೋಗ ಭೇಟಿಯಾಗಲಿದ್ದಾರೆ ಪ್ರಧಾನಿ ಮೋದಿ