– ವಾಹನ ಸವಾರರ ಬೈಕ್ ಕೀ ಕಿತ್ತುಕೊಳ್ಳುವಂತಿಲ್ಲ
ಬೆಂಗಳೂರು: ಮಂಡ್ಯ (Mandya) ಪೊಲೀಸರ (Police) ಅಮಾನವೀಯ ವರ್ತನೆಯಿಂದ ಮೂರು ವರ್ಷದ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ, ವಾಹನ ತಪಾಸಣೆಗೆ ( Vhicle Inspection) ಹೊಸ ರೂಲ್ಸ್ ಬಿಡುಗಡೆ ಮಾಡಿದೆ. ಡಿಜಿ & ಐಜಿಪಿ ಹೊಸ ರೂಲ್ಸ್ ಬಿಡುಗಡೆ ಮಾಡಿದ್ದಾರೆ.
ಹೊಸ ಆದೇಶದಲ್ಲೇನಿದೆ?
* ಸಕಾರಣವಿಲ್ಲದೆ ವಾಹನಗಳನ್ನ ತಡೆದು ತಪಾಸಣೆಗೆ ಒಳಪಡಿಸಬಾರದು
* ಕಣ್ಣಿಗೆ ಕಾಣುವ (visible Violation) ಕಂಡುಬಂದಲ್ಲಿ ಮಾತ್ರವೇ ವಾಹನಗಳನ್ನ ನಿಲ್ಲಿಸಬೇಕು
* ಹೆದ್ದಾರಿಯಲ್ಲಿ ಜಿಗ್ ಜ್ಯಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು
* ರಸ್ತೆಯಲ್ಲಿ ದಿಢೀರನೆ ಅಡ್ಡ ಬಂದು ವಾಹನಗಳನ್ನ ನಿಲ್ಲಿಸುವಂತೆ ಹೇಳಬಾರದು
* ದ್ವಿಚಕ್ರವಾಹನದ ಹಿಂಬದಿ ಸವಾರನನ್ನ ಹಿಡಿದು ಎಳೆಯುವಂತಿಲ್ಲ
* ವಾಹನಗಳ ಕೀ ಕಸಿಯುವುದನ್ನು ಮಾಡಬಾರದು
* ವೇಗವಾಗಿ ಬರುವ ವಾಹನಗಳ ಬೆನ್ನಟ್ಟದೆ ನೊಂದಣಿ ಸಂಖ್ಯೆ ಗುರುತು ಮಾಡಿ ಕಂಟ್ರೋಲ್ ರೂಂ ಗೆ ಮಾಹಿತಿ ನೀಡುವುದು
* ವಾಹನಗಳ ತಪಾಸಣೆ ವೇಳೆ ಪೊಲೀಸ್ರು ರಿಫ್ಲೆಕ್ಟೀವ್ ಜಾಕೆಟ್ ಧರಿಸಿರಬೇಕು
* ಸಂಜೆ ಸಮಯದಲ್ಲಿ ಕಡ್ಡಾಯವಾಗಿ ಎಲ್ ಇ ಡಿ ಬಟನ್ ಬಳಸಬೇಕು
* ವಾಹನಗಳ ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಧರಿಸಿರಬೇಕು
* ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಇತರೆ ರಸ್ತೆಗಳಲ್ಲಿ ಅತೀ ವೇಗವಾಗಿ ಚಲಿಸುವ ವಾಹನಗಳನ್ನ ತಡೆಯಬಾರದು
* ತಪಾಸಣೆಯ ಸ್ಥಳದ 100 ರಿಂದ 150 ಮೀಟರ್ ಮೊದಲೇ ರಿಫ್ಲೆಕಟ್ಈವ್ ರಬ್ಬರ್ ಕೋನ್ಗಳ ಬಳಸಿ ಸುರಕ್ಷತಾ ಸಲಕರಣೆಗಳನ್ನು ಅಳವಡಿಸಿಕೊಳ್ಳಬೇಕು.
ಮೇ 26 ರಂದು ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ (Traffic Police) ಯಡವಟ್ಟಿನಿಂದ ಮೂರುವರೆ ವರ್ಷದ ಮಗು ಸಾವನ್ನಪ್ಪಿತ್ತು. ಮದ್ದೂರು (Maddur) ತಾಲೂಕಿನ ಗೊರವನಹಳ್ಳಿಯ ವಾಣಿ-ಅಶೋಕ್ ದಂಪತಿಯ ಪುತ್ರಿ ಹೃತೀಕ್ಷಾ ಮೃತಪಟ್ಟ ಬಾಲಕಿ. ನಾಯಿ ಕಚ್ಚಿದ್ದರಿಂದ ಆಸ್ಪತ್ರೆಗೆ ದಂಪತಿ ಕರೆದುಕೊಂಡು ಬರುತ್ತಿದ್ದರು. ಈ ವೇಳೆ, ಹಳೇ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ಹೆಲ್ಮೆಟ್ ತಪಾಸಣೆಗೆ ಬೈಕ್ ಅಡ್ಡಗಟ್ಟಿದ್ದರು. ಈ ವೇಳೆ ಬೈಕ್ ಆಯಾ ತಪ್ಪಿ ಬಿದ್ದು, ಮಗುವಿನ ತಲೆಗೆ ಬಲವಾದ ಪೆಟ್ಟು ಬಿದ್ದು, ಸಾವನ್ನಪ್ಪಿತ್ತು. ಈ ಘಟನೆ ಬೆನ್ನಲ್ಲೇ ಟ್ರಾಫಿಕ್ ಪೊಲೀಸರ ಯಡವಟ್ಟಿನ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪೊಲೀಸ್ ಇಲಾಖೆ ವಾಹನ ತಪಾಸಣೆಗೆ ಹೊಸ ನಿಯಮ ಜಾರಿ ಮಾಡಿದೆ.